'ಜನನಾಯಗನ್' ಸಿನಿಮಾ ಲೀಕ್ ಆಗಿದ್ದರಿಂದ ದಳಪತಿ ವಿಜಯ್ಗೆ ಲಾಭವಾಯ್ತಾ?
ಬಿಡುಗಡೆಗೂ ಮುನ್ನ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿಬಿಟ್ಟರೆ ಅದಕ್ಕಿಂತ ನಷ್ಟ ಇನ್ನೇನಿದೆ. ನೂರಾರು ಜನರ ನೂರಾರು ದಿನಗಳ ಶ್ರಮ ವ್ಯರ್ಥವಾದಂತಾಗುತ್ತದೆ. ನಿರ್ಮಾಪಕರಿಗೆ ಕೋಟಿ ಕೋಟಿ ನಷ್ಟವಾಗುತ್ತದೆ. ಚಿತ್ರದಲ್ಲಿ ನಟಿಸಿದ ಕಲಾವಿದರಿಗೂ ಹಿನ್ನಡೆ ಕಟ್ಟಿಟ್ಟಬುತ್ತಿ. ಆದರೆ 'ಜನನಾಯಗನ್' ಸಿನಿಮಾ ಬಿಡುಗಡೆಗೂ ಮುನ್ನ ಆನ್ಲೈನ್ನಲ್ಲಿ ಲೀಕ್ ಆಗಿದ್ದು ನಟ ವಿಜಯ್ಗೆ ಲಾಭವಾಗಿದೆ ಎನ್ನುವ ಚರ್ಚೆ ಶುರುವಾಗಿದೆ.
ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿ ನಟ ವಿಜಯ್ ತಮಿಳುನಾಡು ರಾಜಕೀಯರಂಗ ಪ್ರವೇಶಿಸಿದ್ದಾರೆ. ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದಾರೆ. ರಾಜ್ಯಾದ್ಯಂತ ಸಮಾವೇಶ, ರ್ಯಾಲಿ ನಡೆಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಸದ್ಯ ಚುನಾವಣೆ ಹೊಸ್ತಿಲಲ್ಲಿ ಮತಬೇಟೆ ಆರಂಭಿಸಿದ್ದಾರೆ. ಇದೆಲ್ಲದರ ನಡುವೆ 'ಜನನಾಯಗನ್' ಸಿನಿಮಾ ಲೀಕ್ ಶಾಕ್ ಎದುರಾಗಿದೆ.

ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಸೆನ್ಸಾರ್ ಸಮಸ್ಯೆಯಿಂದ ಬಿಡುಗಡೆ ಆಗಲೇ ಇಲ್ಲ. ಅಷ್ಟರಲ್ಲೇ ತಮಿಳುನಾಡು ಚುನಾವಣೆ ಘೋಷಣೆಯಾಗಿದೆ. ಸದ್ಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ಇಲ್ಲ. ಚುನಾವಣೆ ಮುಗಿದ ಬಳಿಕ 'ಜನನಾಯಗನ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಅಷ್ಟರಲ್ಲೇ ಲೀಕ್ ಆಗಿ ವಿವಾದ ಸೃಷ್ಟಿಯಾಗಿದೆ. ಸಂಪೂರ್ಣ ಸಿನಿಮಾ ಲಿಂಕ್ ಟೆಲಿಗ್ರಾಂ ಸೈಟ್ನಲ್ಲಿ ವೈರಲ್ ಆಗ್ತಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾ ನೋಡಿಬಿಟ್ಟಿದ್ದಾರೆ.
'ಜನನಾಯಗನ್' ಸಿನಿಮಾ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು 6 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೆನ್ಸಾರ್ ವೇಳೆ ಅಥವಾ ಎಡಿಟಿಂಗ್ ವೇಳೆ ಸಿನಿಮಾ ಲೀಕ್ ಆಗಿಲ್ಲ ಎಂದು ಸ್ಪಷ್ಟನೆ ಸಿಕ್ಕಿದೆ. ಟಿವಿಕೆ ಪಕ್ಷದವರೇ ಸಿನಿಮಾ ಲೀಕ್ ಮಾಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರ್ತಿದೆ. ಅಂದಹಾಗೆ ವಿಜಯ್ ತಮ್ಮ ಪೊಲಿಟಿಕಲ್ ಎಂಟ್ರಿಗೆ ಈ ಚಿತ್ರವನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಸುಗ್ಗಿ ಹಬ್ಬಕ್ಕೆ ಸಿನಿಮಾ ತೆರೆಗೆ ಬಂದಿದ್ದರೆ ವಿಜಯ್ಗೆ ಲಾಭವಾಗುತ್ತಿತ್ತು. ಕಾರಣ ರಾಜಕೀಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಷಯಗಳು ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು.

ಭ್ರಷ್ಟ ರಾಜಕಾರಣಿಗಳನ್ನು ನಂಬಬೇಡಿ, ಟಿವಿಕೆ(ಚಿತ್ರದಲ್ಲಿ ನಾಯಕನ ಹೆಸರು ದಳಪತಿ ವೆಟ್ರಿ ಕೊಂಡಾನ್)ಯನ್ನು ನಂಬಿ ಒಳ್ಳೆ ಅಭ್ಯರ್ಥಿಗಳನ್ನು ಗೆಲ್ಲಿಸಿ ಎನ್ನುವ ವಿಚಾರವನ್ನು 'ಜನನಾಯಗನ್' ಚಿತ್ರದಲ್ಲಿ ಹೇಳಲಾಗಿದೆ. ಅದೇ ಕಾರಣಕ್ಕೆ ಚಿತ್ರಕ್ಕೆ ಈ ಟೈಟಲ್ ಕೂಡ ಫಿಕ್ಸ್ ಮಾಡಿದ್ದರು. ಚುನಾವಣೆಗೂ ಮುನ್ನ ಬಿಡುಗಡೆ ಆಗಬೇಕಿರುವ ಸಿನಿಮಾ ಚುನಾವಣೆ ಬಳಿಕ ಬಂದರೆ ಪ್ರಯೋಜನ ಇಲ್ಲ ಎಂದು ಭಾವಿಸಿ ಬೇಕೆಂದೆ ಲೀಕ್ ಮಾಡಿರಬಹುದು ಎನ್ನುವ ಆರೋಪ ಕೇಳಿಬರ್ತಿದೆ. ಇದರಿಂದ ಯಾರಿಗೆ ನಷ್ಟವಾದರೂ ಚುನಾವಣೆ ದೃಷ್ಟಿಯಲ್ಲಿ ವಿಜಯ್ಗೆ ಇದು ಪ್ಲಸ್ ಆಗುತ್ತದೆ ಎಂದು ತಮಿಳುನಾಡಿನಲ್ಲಿ ಚರ್ಚೆ ಆಗುತ್ತಿದೆ.
ಡಿಎಂಕೆ ಪಕ್ಷಕ್ಕೆ ವಿಜಯ್ ಸವಾಲು ಹಾಕುತ್ತಿದ್ದಾರೆ. ನನ್ನನ್ನು ಅಣಿಯಲು ಇನ್ನಿಲ್ಲದ ಕರಸತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 'ಜನನಾಯಗನ್' ಸಿನಿಮಾ ಲೀಕ್ ಆಗಿದ್ದು ಕೂಡ ಪೊಲಿಟಿಕಲ್ ಸ್ಟ್ರ್ಯಾಟಜಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿಜಯ್ ವೈಯಕ್ತಿಕ ಜೀವನದ ವಿಚಾರ ಬಹಿರಂಗವಾಗಿತ್ತು. ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ವಿಜಯ್ ಹಾಗೂ ನಟಿ ತ್ರಿಶಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಹೊತ್ತಲ್ಲೇ 'ಜನನಾಯಗನ್' ಸಿನಿಮಾ ಲೀಕ್ ಎನ್ನುವುದು ವಿಜಯ್ ಬಗ್ಗೆ ಸಿಂಪಥಿ ಹುಟ್ಟುವಂತೆ ಮಾಡಿದೆ ಎನ್ನಲಾಗ್ತಿದೆ.
ತನ್ನ ಸಂಸಾರವನ್ನೇ ಸರಿಯಾಗಿ ನಿಭಾಯಿಸದ ನಾಯಕ ಚುನಾವಣೆಯಲ್ಲಿ ಗೆದ್ದು ಸರ್ಕಾರ ನಡೆಸ್ತಾನಾ? ಎನ್ನುವ ಚರ್ಚೆ ಶುರುವಾಗಿದೆ. ವಿಜಯ್ ಡಿವೋರ್ಸ್ ಹಾಗೂ ತ್ರಿಶಾ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ. ಜನರ ಮನಸ್ಸಿನಲ್ಲಿ ಇದೇ ವಿಚಾರ ಕುಳಿತುಬಿಟ್ಟಿದೆ. ಇಂತಹ ಸಮಯದಲ್ಲಿ 'ಜನನಾಯಗನ್' ಸಿನಿಮಾ ಲೀಕ್ ವಿಚಾರ ಮುನ್ನಲೆಗೆ ಬಂದಿದೆ. ವಿಜಯ್ ವೈಯಕ್ತಿಕ ಜೀವನ ಬಿಟ್ಟು ಜನ ಸಿನಿಮಾ ಲೀಕ್ ಆಗಿದ್ದರ ಬಗ್ಗೆ ಚರ್ಚಿಸುತ್ತಿದ್ದಾರೆ. ಇದೆಲ್ಲವೂ ಚುನಾವಣೆಯಲ್ಲಿ ಟಿವಿಕೆ ಪಕ್ಷಕ್ಕೆ ವರವಾಗಬಹುದು ಎನ್ನುವ ಚರ್ಚೆ ಜೋರಾಗಿದೆ.


Click it and Unblock the Notifications











