ನಟ ವಿಕ್ರಮ್ ಫ್ಯಾನ್ಸ್ಗೆ ನಿರಾಸೆ, 'ಧ್ರುವ ನಚ್ಚತಿರಂ' ಮತ್ತೆ ಪೋಸ್ಟ್ಪೋನ್!: ಮಧ್ಯರಾತ್ರಿಯಲ್ಲಿ ನಿರ್ದೇಶಕರ ಟ್ವೀಟ್!
ತಮಿಳು ನಟ ವಿಕ್ರಮ್ ಅವರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ 'ಧ್ರುವ ನಚ್ಚತಿರಂ' ಬಿಡುಗಡೆ ಮತ್ತೆ ಮುಂದಕ್ಕೆ ಹೋಗಿದೆ. ಅಂದುಕೊಂಡಂತೆ ಎಲ್ಲಾ ನಡೆದಿದ್ದರೇ ಈ ಸಿನಿಮಾ ಬಿಡುಗಡೆಯಾಗಿ ಮೂರು- ನಾಲ್ಕು ವರ್ಷಗಳೇ ಆಗಬೇಕಿತ್ತು. ಆದರೆ, ಇನ್ನೂ ಸಿನಿಮಾದ ಬಿಡುಗಡೆಗೆ ದಿನ ಕೂಡಿ ಬಂದಿಲ್ಲ.
ಇತ್ತಿಚೆಗಷ್ಟೆ ನಟ ಚಿಯಾನ್ ವಿಕ್ರಮ್ ನಟನೆಯ ಮತ್ತು ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ 'ಧ್ರುವ ನಚ್ಚತಿರಂ' ನವೆಂಬರ್ 24 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ, ವರ್ಷಗಳಿಂದ ಕಾಯುತ್ತಿರುವ ವಿಕ್ರಮ್ ಅಭಿಮಾನಿಗಳ ಆಸೆ ಇಂದು ಕೂಡ ನೆರವೇರುವುದಿಲ್ಲ. ಇದಕ್ಕೆ ಕಾರಣ ಸಿನಿಮಾ ಶುಕ್ರವಾರ ಬಿಡುಗಡೆಯಾಗುತ್ತಿಲ್ಲ.!

ಮತ್ತೆ 'ಧ್ರುವ ನಚ್ಚತಿರಂ' ಬಿಡುಗಡೆ ಮುಂದೂಡಿಕೆ!
'ಧ್ರುವ ನಚ್ಚತಿರಂ' ಸಿನಿಮಾ ಕಳೆದ ಆರು ವರ್ಷಗಳಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಚಿತ್ರ ಇನ್ನೇನು ಥಿಯೇಟರ್ಗೆ ಬರಬೇಕು ಎನ್ನುವ ಹೊತ್ತಿನಲ್ಲಿ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಲು ಒಂದು ಅಥವಾ ಎರಡು ದಿನ ಬೇಕಾಗುತ್ತದೆ ಎಂದು ಬೇಸರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
2018 ರಿಂದ ನಿರ್ಮಾಣ ಹಂತದಲ್ಲಿರುವ ತಮಿಳು ಚಿತ್ರ ಧ್ರುವ ನಚ್ಚತಿರಂ ಬಿಡುಗಡೆ ಸಮಸ್ಯೆಗಳು ಕೊನೆಗೊಳ್ಳುವಂತಿ ಕಾಣುತ್ತಿಲ್ಲ. ಬಿಡುಗಡೆಯ ದಿನವಾದ ಶುಕ್ರವಾರ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಚಿತ್ರವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಮಧ್ಯರಾತ್ರಿ ಟ್ವೀಟ್ ಮಾಡಿದ ಗೌತಮ್ ವಾಸುದೇವ್ ಮೆನನ್ !
'ಧ್ರುವ ನಚ್ಚತಿರಂ' ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗೌತಮ್ ವಾಸುದೇವ್ ಮೆನನ್ ತಮ್ಮ ಅಭಿಮಾನಿಗಳಿಂದ ಇನ್ನೊಂದು ಎರಡು ದಿನ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. "ಕ್ಷಮಿಸಿ. ಧ್ರುವ ನಚ್ಚತಿರಂ ಇಂದು ತೆರೆಗೆ ಬರಲು ಸಾಧ್ಯವಾಗಿಲ್ಲ.
ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಇನ್ನೂ ಒಂದು ಅಥವಾ ಎರಡು ದಿನ ಬೇಕು ಎಂದು ಎನ್ನಿಸುತ್ತಿದೆ. ವಿಶ್ವಾದ್ಯಂತ ಮುಂಗಡ ಬುಕಿಂಗ್ಗಳು ಮತ್ತು ಸರಿಯಾದ ಸ್ಕ್ರೀನಿಂಗ್ನಿಂದ ಎಲ್ಲರಿಗೂ ಉತ್ತಮ ಅನುಭವವನ್ನು ಒದಗಿಸುವ ಆಶಯವಿದೆ. ಚಿತ್ರಕ್ಕೆ ನೀಡಿದ ಬೆಂಬಲ ಮನಮುಟ್ಟಿದೆ. ಇನ್ನೂ ಕೆಲವು ದಿನಗಳು...ನಾವು ಬರುತ್ತೇವೆ!" ಎಂದಿದ್ದಾರೆ.

'ಧ್ರುವ ನಚ್ಚತಿರಂ' ಬಿಡುಗಡೆಗೆ ಸಂಬಂಧಿಸಿದಂತೆ ಗೌತಮ್ ವಾಸುದೇವ್ ಮೆನನ್ ಮತ್ತು ಅವರ ತಂಡದ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ನವೆಂಬರ್ 24 ರಂದು ಬೆಳಗ್ಗೆ 10.30 ಕ್ಕೆ ಮೊದಲು ಅವರ ಚಿತ್ರವನ್ನು ಬಿಡುಗಡೆ ಮಾಡಲು ಆಲ್ ಇನ್ ಪಿಕ್ಚರ್ಸ್ಗೆ 2 ಕೋಟಿ ರೂಪಾಯಿಗಳನ್ನು ಮರುಪಾವತಿಸುವಂತೆ ಮದ್ರಾಸ್ ಹೈಕೋರ್ಟ್ ಮೆನನ್ ಅವರಿಗೆ ಸೂಚನೆ ನೀಡಿತ್ತು. ಆದರೆ, ಈಗ ಸಿನಿಮಾ ಬಿಡುಗಡೆಯಾಗದೆ ಇರುವುದಕ್ಕೆ ಹಣ ಪಾವತಿ ವಿಷಯವೇ ಕಾರಣ ಎನಿಸುತ್ತಿದೆ.
ಧ್ರುವ ನಚ್ಚತಿರಂ
ಗೌತಮ್ ವಾಸುದೇವ್ ಮೆನನ್ ಬರೆದು ನಿರ್ದೇಶಿಸಿರುವ 'ಧ್ರುವ ನಚ್ಚತಿರಂ' ಒಂದು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದಲ್ಲಿ ರಿತು ವರ್ಮಾ, ಆರ್ ಪಾರ್ತಿಬನ್, ರಾಧಿಕಾ ಶರತ್ಕುಮಾರ್, ಸಿಮ್ರಾನ್, ವಿನಾಯಕನ್ ಮತ್ತು ದಿವ್ಯದರ್ಶಿನಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.


Click it and Unblock the Notifications











