ಸುಳ್ಳು ಸುದ್ದಿಯಿಂದ ನೋವಾಗಿದೆ: ವಿಕ್ರಂ ಆರೋಗ್ಯದ ಬಗ್ಗೆ ಪುತ್ರನಿಂದ ಮಾಹಿತಿ
ತಮಿಳಿನ ಖ್ಯಾತ ನಟ ವಿಕ್ರಂ ಇಂದು ಮಧ್ಯಾಹ್ನ ಹಠಾತ್ತನೆ ಆಸ್ಪತ್ರೆಗೆ ದಾಖಲಾದರು. ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಆದರೆ ಸಂಜೆ ವೇಳೆಗೆ ವಿಕ್ರಂ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಚೆನ್ನೈನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು 'ವಿಕ್ರಂ ಆರೋಗ್ಯವಾಗಿದ್ದಾರೆ, ಅವರಿಗೆ ಎದೆ ನೋವಾಗಿದೆಯೇ ವಿನಃ ಅವರಿಗೆ ಹೃದಯಾಘಾತವಾಗಿಲ್ಲ'' ಎಂದು ಸ್ಪಷ್ಟಪಡಿಸಿತು.
ಇದೀಗ ವಿಕ್ರಂರ ಪುತ್ರ ಧೃವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಜೊತೆಗೆ ತಂದೆಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.
''ಪ್ರೀತಿಯ ಅಭಿಮಾನಿಗಳೆ ಹಾಗೂ ಅಪ್ಪನಿಗೆ ಸಣ್ಣ ಮಟ್ಟಿನ ಎದೆನೋವು ಕಾಣಿಸಿಕೊಂಡಿತ್ತು, ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗಿದೆ. ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿರುವಂತೆ ಅವರಿಗೆ ಹೃದಯಾಘಾತ ಆಗಿಲ್ಲ. ಈ ರೀತಿಯ ಸುಳ್ಳು ಸುದ್ದಿಗಳು ಕೇಳಿ ನಮಗೆ ತೀವ್ರ ಬೇಸರವಾಗಿದೆ'' ಎಂದಿದ್ದಾರೆ ಧೃವ್.

ಸುಳ್ಳು ಸುದ್ದಿ ಹರಡಬೇಡಿ: ಧೃವ್ ವಿಕ್ರಂ
''ಈ ಸಮಯದಲ್ಲಿ ಅವರಿಗೆ ಹಾಗೂ ನಮ್ಮ ಕುಟುಂಬಕ್ಕೆ ಖಾಸಗಿತನದ ಅವಶ್ಯಕತೆ ಇದೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ. ಚಿಯಾನ್ (ವಿಕ್ರಂ) ಈಗ ಆರಾಮವಾಗಿದ್ದಾರೆ, ಅವರು ಇನ್ನೊಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನನ್ನ ಈ ಹೇಳಿಕೆಯು ಎಲ್ಲ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದೆ ಎಂದುಕೊಂಡಿದ್ದೇನೆ'' ಎಂದಿದ್ದಾರೆ ಧೃವ್.

ಆಸ್ಪತ್ರೆಯ ಹೆಲ್ತ್ ಬುಲೆಟಿನ್
ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿಯೂ ಇದೇ ವಿಷಯ ಹೇಳಲಾಗಿದ್ದು, ''ಇಂದು ಮಧ್ಯಾಹ್ನ ಎದೆ ನೋವೆಂದು ವಿಕ್ರಂ ನಮ್ಮ ಆಸ್ಪತ್ರೆಗೆ ಬಂದರು. ಅವರ ಸ್ಥಿತಿಯನ್ನು ಪರಿಶೀಲಿಸಿ, ಅರಿತು, ತಜ್ಞರು ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಹೃದಯಾಘಾತವಾಗಿಲ್ಲ, ಅವರೀಗ ಚೇತರಿಸಿಕೊಂಡಿದ್ದಾರೆ. ಆದಷ್ಟು ಶೀಘ್ರವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ'' ಎಂದಿದೆ. ಧೃವ್ ಸಹ ನಟರೇ ಆಗಿದ್ದು ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅಪ್ಪ ಮಗ ಒಟ್ಟಿಗೆ ನಟಿಸಿದ್ದ 'ಮಹಾನ್' ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು.

ತಮಿಳಿನ ಸ್ಟಾರ್ ನಟ ವಿಕ್ರಂ
ವಿಕ್ರಂ ತಮಿಳಿನ ಸ್ಟಾರ್ ನಟರಲ್ಲೊಬ್ಬರು. ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ವಿಕ್ರಂಗೆ ವಯಸ್ಸೀಗ 56. ಆದರೂ ಜಿಮ್ ಮಾಡಿ ಫಿಟ್ ಆಗಿರುವ ವಿಕ್ರಂ ಆಗಾಗ್ಗೆ ತಮ್ಮ ದೇಹವನ್ನು ದಪ್ಪಕ್ಕೆ, ಸಣ್ಣಕ್ಕೆ ಮಾಡಿಕೊಳ್ಳುತ್ತಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರಿಗೆ ಹೃದಯ ಸಮಸ್ಯೆ ಬಂದಿರಬಹುದಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಈಗ ಬಂದಿರುವ ಆರೋಗ್ಯ ಮಾಹಿತಿಯಿಂದ ಹಾಗೂ ಪುತ್ರನ ಸ್ಪಷ್ಟೀಕರಣದಿಂದ ಅನುಮಾನ ನಿವಾರಣೆ ಆಗಿದೆ.

ಎರಡು ಸಿನಿಮಾ ಬಿಡುಗಡೆಗೆ ತಯಾರು
ಇನ್ನು ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾ ಆಗಸ್ಟ್ 11 ರಂದು ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಮುಖ್ಯ ಪಾತ್ರದಲ್ಲಿದ್ದಾರೆ. ಅದಾದ ಬಳಿಕ ಭಾರಿ ನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್' ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ವಿಕ್ರಂ ಆದಿತ್ಯ ಕರಿಕಾಳನ್ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











