ಸಿಂಬು ಹಾಗೂ ಪ್ರಭುದೇವಾ ಇಬ್ಬರನ್ನೂ ಪ್ರೀತಿಸಿ ನಯನತಾರ ದೂರಾಗಿದ್ದೇಕೆ?
ನಟಿ ನಯನತಾರ ತಮಿಳು ನಿರ್ದೇಶನ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಆದರೆ ವಿಘ್ನೇಶ್ ಶಿವನ್ಗೂ ಮುನ್ನ ನಟ ಸಿಂಬು ಹಾಗೂ ಕೊರಿಯೋಗ್ರಫರ್ ಪ್ರಭುದೇವ ಜೊತೆ ನಯನ್ ಪ್ರೀತಿಲಿ ಬಿದ್ದಿದ್ದರು. ಪ್ರಭುದೇವ ಕೈ ಹಿಡಿಯಲು ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು.
ಪ್ರೀತಿ ಅನ್ನೊದೇ ಹಾಗೆ. ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆ ಆದರೂ ಯಾರಿಂದಾದರೂ ಆಕರ್ಷಿತರಾಗಿರುತ್ತಾರೆ. ಅದು ಮುಂದೆ ಪ್ರೀತಿಯಾಗಿ ಬದಲಾಗುತ್ತದೆ. ಕೆಲವರ ಪ್ರೀತಿ ಯಶಸ್ವಿ ಆಗುತ್ತದೆ. ಕೆಲವರದ್ದು ಒನ್ಸೈಡ್ ಲವ್ ಆಗಿಯೇ ಉಳಿದುಬಿಡುತ್ತದೆ. ಪ್ರೀತಿಸಿದ ಬಹುತೇಕರು ಕಾರಣಾಂತರಗಳಿಂದ ದೂರಾಗಿ ಬಿಡುತ್ತಾರೆ. ತೆರೆಮೇಲೆ ಸಾಕಷ್ಟು ಲವ್ ಸ್ಟೋರಿಗಳನ್ನು ನೋಡುತ್ತೇವೆ. ಆದರೆ ನಿಜ ಜೀವನದಲ್ಲಿ ಕೂಡ ಸಾಕಷ್ಟು ನಟ, ನಟಿಯರು ಪ್ರೀತಿಸಿ ಮದುವೆ ಆಗಿದ್ದಾರೆ. ಕೆಲವರು ಪ್ರೀತಿಸಿ ದೂರಾಗಿರುವುದು ಇದೆ.

'ವಲ್ಲವನ್' ಸಿನಿಮಾ ಚಿತ್ರೀಕರಣದ ವೇಳೆ ನಟ ಸಿಂಬು ಹಾಗೂ ನಯನತಾರ ಡೇಟಿಂಗ್ ಮಾಡುತ್ತಿದ್ದರು ಎಂದು ಗುಲ್ಲಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಮಾತನಾಡಲಿಲ್ಲ. ಅವರಿಬ್ಬರು ಬಹಳ ಆತ್ಮೀಯವಾಗಿದ್ದ ಕೆಲ ಫೋಟೊಗಳು ಲೀಕ್ ಆಗಿ ಭಾರೀ ಸುದ್ದಿ ಆಗಿತ್ತು. ಇಬ್ಬರ ರಿಲೇಷನ್ಶಿಪ್ ಬಗ್ಗೆ ಸಾರಿ ಸಾರಿ ಹೇಳಿತ್ತು. ಆ ಖಾಸಗಿ ಫೋಟೊಗಳೇ ಬ್ರೇಕಪ್ಗೆ ಕಾರಣ ಎನ್ನುವ ಊಹಾಪೋಹ ಸಹ ಶುರುವಾಗಿತ್ತು. ಕೆಲ ವರ್ಷಗಳ ಹಿಂದೆ ಸಿಂಬು ಈ ಬಗ್ಗೆ ಪ್ರತಿಕ್ರಿಯಿಸಿ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಇತ್ತೀಚೆಗೆ ನಯನತಾರಾ ಡಾಕ್ಯುಮೆಂಟರಿಯಲ್ಲಿ ನಯನ್- ಸಿಂಬು ಬ್ರೇಕಪ್ ಬಗ್ಗೆ ನಟ ನಾಗಾರ್ಜುನ ಪರೋಕ್ಷವಾಗಿ ಮಾತನಾಡಿದ್ದರು.
ಸಿಂಬು ಜೊತೆಗಿನ ಬ್ರೇಕಪ್ ಬಳಿಕ ನಯನತಾರ ಕೆಲ ವರ್ಷ ಅವರೊಟ್ಟಿಗೆ ನಟಿಸಲಿಲ್ಲ. ನಂತರ ಒಟ್ಟಿಗೆ ಒಂದೇ ಚಿತ್ರದಲ್ಲಿ ಜೊತೆಯಾಗಿ ಮಿಂಚಿದರು. ಸಿಂಬು ಅವರಿಂದ ದೂರಾದ ಬಳಿಕ ಪ್ರಭುದೇವಾ ಜೊತೆ ನಯನ್ ಪ್ರೀತಿಲಿ ಬಿದ್ದಿದ್ದರು. ಇವರಿಬ್ಬರ ರಿಲೇಷನ್ಶಿಪ್ ಗುಟ್ಟಾಗಿ ಏನು ಇರಲಿಲ್ಲ. ಸಭೆ ಸಮಾರಂಭಗಳಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಕೈಕೈ ಹಿಡಿದು ಸುತ್ತಾಡಿದ್ದರು. ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದಾರೆ ಎಂದು ಗುಲ್ಲಾಗಿತ್ತು. ಪ್ರಭುದೇವಾ ಜೊತೆ ಮದುವೆ ಆಗಲು ನಯನತಾರ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರು ಎಂದು ಹೇಳಲಾಗಿತ್ತು.

ಅದಾಗಲೇ ಪುಷ್ಪಲತಾ ಎಂಬುವವರನ್ನು ಪ್ರಭುದೇವಾ ಮದುವೆ ಆಗಿದ್ದರು. ನಯನತಾರ ಅವರನ್ನು ಮದುವೆ ಆಗಬೇಕು ಎಂದುಕೊಂಡಾಗ ಮೊದಲ ಪತ್ನಿ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಆ ಸಮಸ್ಯೆ ಬಗೆಹರಿಸಿಕೊಂಡು ಮದುವೆ ಆಗಲು ಮುಂದಾಗುವ ವೇಳೆಗೆ ಪ್ರಭುದೇವಾ ಮನಸ್ಸು ಬದಲಿಸಿದ್ದರು. ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸಬಾರದು ಎಂದು ನಯನತಾರಗೆ ಹೇಳಿದ್ದಕ್ಕೆ ಆಕೆ ಒಪ್ಪಿದ್ದರು. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ಕೊನೆ, ಆ ಬಳಿಕ ಆಕೆ ನಟಿಸುವುದಿಲ್ಲ ಎನ್ನಲಾಗಿತ್ತು.
ಒಂದು ಕಡೆ ಪ್ರಭುದೇವಾಗೆ ಡಿವೋರ್ಸ್ ಕೊಡಲು ಮೊದಲ ಪತ್ನಿ ಒಪ್ಪಿರಲಿಲ್ಲ, ಕುಟುಂಸ್ಥರು ಎರಡನೇ ಮದುವೆ ಬೇಡ ಎಂದು ಪಟ್ಟುಹಿಡಿದಿದ್ದರು. ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸಬಾರದು ಎನ್ನುವ ಷರತ್ತು ನಯನತಾರಗೆ ನುಂಗಲಾರದ ತುತ್ತಾಗಿತ್ತು. ಇದೇ ಕಾರಣಕ್ಕೆ ಇವರಿಬ್ಬರು ದೂರಾಗಲು ನಿರ್ಧರಿಸಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು.
ಹೀಗೆ ಎರಡು ಬಾರಿ ಪ್ರೀತಿಯಲ್ಲಿ ಸೋತ ನಯನತಾರ ತಾವಾಯ್ತು, ತಮ್ಮ ಸಿನಿಮಾ ಆಯ್ತು ಎಂದು ಸುಮ್ಮನಿದ್ದರು. 'ನಾನುಂ ರೌಡಿತಾನ್' ಸಿನಿಮಾ ಚಿತ್ರೀಕರಣದ ವೇಳೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಪ್ರೇಮಪಾಶಕ್ಕೆ ಸಿಲುಕಿದರು. ಕೆಲ ವರ್ಷಗಳ ಕಾಲ ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಎರಡು ವರ್ಷಗಳ ಹಿಂದೆ ವಿಕ್ಕಿ-ನಯನ್ ಹಸೆಮಣೆ ಏರಿದ್ದರು. ತಮ್ಮ ಮದುವೆಯ ಚಿತ್ರೀಕರಣ ಹಾಗೂ ಪ್ರಸಾರದ ರೈಟ್ಸ್ ಅನ್ನು ನೆಟ್ಫ್ಲಿಕ್ಸ್ಗೆ ಮಾರಾಟ ಮಾಡಿದ್ದರು. ಅದನ್ನು ಡಾಕ್ಯುಮೆಂಟರಿ ರೂಪದಲ್ಲಿ ಓಟಿಟಿಯಲ್ಲಿ ರಿಲೀಸ್ ಮಾಡಲಾಯಿತು.


Click it and Unblock the Notifications











