ಮೈಕ್ ಹಿಡಿದು ಮಾತನಾಡಲು ಆಗದಂತ ಸ್ಥಿತಿಯಲ್ಲಿ ನಟ ವಿಶಾಲ್; ಅಷ್ಟಕ್ಕೂ ಏನಾಯ್ತು?
ತಮಿಳು ನಟ ವಿಶಾಲ್ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬಹಳ ಹಿಂದೆ ನಿರ್ಮಾಣವಾಗಿದ್ದ 'ಮದಗಜರಾಜ' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರ್ತಿದ್ದು ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಆದರೆ ಕಾರ್ಯಕ್ರಮದಲ್ಲಿ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸುಂದರ್. ಸಿ ನಿರ್ದೇಶನದ 'ಮದಗಜರಾಜ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಹಣಕಾಸಿನ ಸಮಸ್ಯೆಯಿಂದ ಈ ಸಿನಿಮಾ 10 ವರ್ಷಗಳ ಕಾಲ ಡಬ್ಬಾ ಸೇರಿತ್ತು. ಕೊನೆಗೆ ಎಲ್ಲಾ ಸಮಸ್ಯೆ ಮೀರಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಅಂಜಲಿ ಹಾಗೂ ವರಲಕ್ಷ್ಮಿ ಶರತ್ಕುಮಾರ್ ನಾಯಕಿಯರಾಗಿ ಮಿಂಚಿದ್ದಾರೆ. ಕನ್ನಡದಲ್ಲಿ ಇದೇ ರೀತಿ ಉಪೇಂದ್ರ ಹಾಗೂ ರಮ್ಯಾ ನಟನೆಯ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಸಿನಿಮಾ ಇದೀಗೆ ಬಿಡುಗಡೆ ಆಗುತ್ತಿದೆ.

'ರಕ್ತ ಕಾಶ್ಮೀರ' ಎಂದು ಟೈಟಲ್ ಬದಲಿಸಿ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇನ್ನು ಚೆನ್ನೈನಲ್ಲಿ ನಡೆದ 'ಮದಗಜರಾಜ' ಚಿತ್ರದ ಈವೆಂಟ್ನಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಜನವರಿ 12ಕ್ಕೆ ಸಿನಿಮಾ ತೆರೆಗೆ ಬರಲಿದೆ. ಆದರೆ ಈವೆಂಟ್ನಲ್ಲಿ ಸಿನಿಮಾಗಿಂತ ಹೆಚ್ಚು ಸುದ್ದಿ ಆಗಿದ್ದು ವಿಶಾಲ್ ಆರೋಗ್ಯ ಸ್ಥಿತಿ.
ಖಡಕ್ ನಟ ವಿಶಾಲ್ ಕಾರ್ಯಕ್ರಮದಲ್ಲಿ ನಡುಗುತ್ತಿದ್ದರು. ನಿಂತು ಮಾತನಾಡಲು ಸಾಧ್ಯವಾದಂತಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈಕ್ ಅನ್ನು ಕೂಡ ಗಟ್ಟಿಯಾಗಿ ಹಿಡಿದುಕೊಳ್ಳಲು ವಿಶಾಲ್ ಕಷ್ಟಪಟ್ಟಿದ್ದಾರೆ. ಮಾತನಾಡುವಾಗ ನಾಲಿಗೆ ತೊದಲುತ್ತಿದೆ. ವೈರಲ್ ಫೀವರ್ನಿಂದ ವಿಶಾಲ್ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ನಿರೂಪಕಿ ಕುಳಿತು ಮಾತನಾಡಲು ಹೇಳಿದರೂ ಅವರು ನಿಂತು ಮಾತನಾಡಿದ್ದಾರೆ.
ವೈರಲ್ ಫೀವರ್ನಿಂದ ಬಳಲುತ್ತಿದ್ದರೂ ವಿಶಾಲ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಚಿತ್ರತಂಡಕ್ಕೆ ಬಲ ತಂದುಕೊಟ್ಟಂತಾಗಿದೆ. ತಮ್ಮದೇ ಚಿತ್ರದ ಕಾರ್ಯಕ್ರಮಕ್ಕೆ ಹೀರೊ ಬರದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಏನೇ ಆರೋಗ್ಯ ಸಮಸ್ಯೆ ನೆಪ ಹೇಳಿದರೂ ಅದನ್ನು ಕೆಲವರು ನಂಬಲ್ಲ. ಅದಕ್ಕೆ ವಿಶಾಲ್ ನೋವಿನ ನಡುವೆಯೂ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ.
ನಟ ವಿಶಾಲ್ ಬಹಳ ರಿಸ್ಕಿ ಸ್ಟಂಟ್ಗಳನ್ನು ಮಾಡುತ್ತಿರುತ್ತಾರೆ. ಹಾಗಾಗಿ ಆಗಾಗ್ಗೆ ಗಾಯಗೊಂಡು ಚಿಕಿತ್ಸೆ ಪಡೆದು ಬಂದಿರುವ ಉದಾಹರಣೆಗಳಿವೆ. ಆದರೂ ಇಂತಹ ಸಮಯದಲ್ಲಿ ಅವರು 'ಮದಗಜರಾಜ' ಈವೆಂಟ್ಗೆ ಬರುವುದು ಬೇಕಿರಲಿಲ್ಲ, ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದವರು ಕೂಡ ವಿಶಾಲ್ ಸ್ಥಿತಿ ಕಂಡು ಮರುಗಿದ್ದಾರೆ.
'ಮದಗಜರಾಜ' ಆಕ್ಷನ್ ಕಾಮಿಡಿ ಸಿನಿಮಾ. 13 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಚಿತ್ರವನ್ನು ಪ್ರೇಕ್ಷಕರು ಈಗ ಒಪ್ಪುತ್ತಾರಾ? ಎನ್ನುವ ಪ್ರಶ್ನೆಯೂ ಎದ್ದಿದೆ. ಆದರೆ ಸಂಕ್ರಾಂತಿ ಸಂಭ್ರಮದಲ್ಲಿ ಯಾವುದೇ ದೊಡ್ಡ ತಮಿಳು ಸಿನಿಮಾ ತೆರೆಗೆ ಬರುತ್ತಿಲ್ಲ. ಇದು ವಿಶಾಲ್ ಚಿತ್ರಕ್ಕೆ ಪ್ಲಸ್ ಆಗಬಹುದು ಎನ್ನುವ ನಿರೀಕ್ಷೆ ಕೆಲವರಲ್ಲಿದೆ. ಇನ್ನು ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದ್ದು ಹಳೆಯ ಸಿನಿಮಾದಂತೆ ಭಾಸವಾಗುತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸಂತಾನಂ, ಸೋನುಸೂದ್, ಸುಬ್ಬರಾಜು, ಜಾನ್ ಕೊಕೇನ್, ಚಿಟ್ಟಿಬಾಬು ಸೇರಿದಂತೆ ದೊಡ್ಡ ತಾರಾಗಣ 'ಮದಗಜರಾಜ' ಚಿತ್ರದ ತಾರಾಗಣದಲ್ಲಿದ್ದಾರೆ. ವಿಜಯ್ ಆಂಟೋನಿ ಸಂಗೀತ ಚಿತ್ರಕ್ಕಿದೆ. ವಿಶಾಲ್ ತಮ್ಮದೇ ಬ್ಯಾನರ್ನಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಅಕ್ಕಿನೇನಿ ಆನಂದ್ ಪ್ರಸಾದ್ ಹಾಗೂ ಅಕ್ಕಿನೇನಿ ಮನೋಹರ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











