ವಿಜಯ್ ಪಕ್ಷದ ಶಾಸಕ ಶರ್ಟ್ ಜೇಬಿನಲ್ಲಿ ಜಯಲಲಿತಾ ಫೋಟೊ ಇಟ್ಕೊಂಡು ಓಡಾಡುತ್ತಿರುವುದು ಯಾಕೆ?
ತಮಿಳುನಾಡಿನಲ್ಲಿ ದಶಕಗಳ ಬಳಿಕ ದ್ರಾವಿಕ ಪಕ್ಷಗಳನ್ನು ಹೊರತುಪಡಿಸಿ ಹೊಸ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಚುನಾವಣೆಯಲ್ಲಿ ಹೊಸ ದಾಖಲೆ ಬರೆದಿದೆ. ಹೊಸ ಪಕ್ಷ ಕಟ್ಟಿ 2 ವರ್ಷದಲ್ಲಿ ನಟ ವಿಜಯ್ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಟಿವಿಕೆ ಪಕ್ಷದ ಶಾಸಕ ಕೆ. ಎ. ಸೆಂಗೊಟ್ಟೈಯನ್ ತಮ್ಮ ಶರ್ಟ್ ಜೇಬಿನಲ್ಲಿ ಮಾಜಿ ಸಿಎಂ ಜಯಲಲಿತಾ ಫೋಟೊ ಇಟ್ಟುಕೊಂಡು ಓಡಾಡುತ್ತಿದ್ದಾರೆ.
ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸುವಾಗ ಕೂಡ ಸೆಂಗೊಟ್ಟೈಯನ್ ಶರ್ಟ್ ಜೇಬಿನಲ್ಲಿ ಜಯಲಲಿತಾ ಫೋಟೊ ಕಂಡು ಬಂದಿತ್ತು. ತಮಿಳುನಾಡಿನ ಜನ ದಿವಂಗತ ಜಯಲಲಿತಾ ಅವರನ್ನು ಎಂದಿಗೂ ಮರೆಯುವುದಿಲ್ಲ. 'ಅಮ್ಮ' ಹಾಗೂ 'ಪುರುಚ್ಚಿ ತಲೈವಿ' ಎಂದೇ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು. 6 ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಕೆ ಸೇವೆ ಸಲ್ಲಿಸಿದ್ದರು. ಅಧಿಕಾರದಲ್ಲಿ ಇದ್ದಾಗಲೇ(2016) ಹೃದಯಾಘಾತದಿಂದ ನಿಧನರಾಗಿದ್ದರು.

ಜಯಲಲಿತಾ ದಶಕಗಳ ಕಾಲ ಎಐಡಿಎಂಕೆ ಪಕ್ಷದ ನೇತೃತ್ವ ವಹಿಸಿದ್ದರು. ಪುರುಷ ನಾಯಕರ ಪ್ರಾಬಲ್ಯವನ್ನು ಮೀರಿ ಅನಭಿಷಿಕ್ತ ರಾಣಿಯಂತೆ ಮೆರೆದರು. ಪಕ್ಷದಲ್ಲಿ ಎಲ್ಲರೂ ಆಕೆಯನ್ನು ಅಮ್ಮ ಎಂದೇ ಗೌರವದಿಂದ ಕರೆಯುತ್ತಿದ್ದರು. ಶಾಸಕರು, ಸಚಿವರು, ಕಾರ್ಯರ್ತರು ಜಯಲಲಿತಾ ಅವರನ್ನು ಕಂಡರೆ ಭಯ, ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಕಾಲಿಗೆ ಎರಗುತ್ತಿದ್ದರು. ಅಷ್ಟರಮಟ್ಟಿಗೆ ತಮ್ಮ ಪಕ್ಷದ ಮೇಲೆ ಆಕೆ ಹಿಡಿತ ಸಾಧಿಸಿದ್ದರು. ಶಾಸಕರು, ಸಚಿವರು ತಮ್ಮ ಮನೆಗಳಲ್ಲಿ ಕಾರುಗಳಲ್ಲಿ ಜಯಲಲಿತಾ ಫೋಟೊ ಇಟ್ಟುಕೊಂಡಿದ್ದರು. ಕೆಲವರು ಸದಾ ತಮ್ಮ ಶರ್ಟ್ ಜೇಬಿನಲ್ಲಿ ಆಕೆಯ ಚಿಕ್ಕ ಫೋಟೊ ಇಟ್ಟುಕೊಳ್ಳುವುದನ್ನು ಮರೆಯುತ್ತಿರಲಿಲ್ಲ.
ಜಯಲಲಿತಾ ಅಗಲಿ 10 ವರ್ಷ ಕಳೆಯುತ್ತಾ ಬಂತು. ಇವತ್ತಿಗೂ ಎಡಿಎಂಕೆ ಪಕ್ಷದ ನಾಯಕರು ಆಕೆಗೆ ಗೌರವ ಸೂಚಿಸುತ್ತಾರೆ. ಈ ಹಿಂದೆ ಎಡಿಎಂಕೆ ಪಕ್ಷದಲ್ಲಿ ಕೆ. ಎ. ಸೆಂಗೊಟ್ಟೈಯನ್ ಇದ್ದರು. ಜಯಲಲಿತಾ ಅನುಯಾಯಿಯಾಗಿದ್ದವರು. ಇತ್ತೀಚಿಗೆ ಟಿವಿಕೆ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕರಾಗಿ ಗೆದ್ದಿದ್ದಾರೆ. ಸಚಿವ ಸ್ಥಾನವನ್ನು ಪಡೆದಿದ್ದಾರೆ. ಆದರೂ ತಮ್ಮ ಜೇಬಿನಲ್ಲಿ ಜಯಲಲಿತಾ ಅವರ ಫೋಟೊ ಇಟ್ಟುಕೊಳ್ಳುವುದನ್ನು ಬಿಟ್ಟಿಲ್ಲ. ರಾಜಕೀಯವಾಗಿ ಈಗ ಟಿವಿಕೆ ಹಾಗೂ ಎಡಿಎಂಕೆ ಪಕ್ಷಗಳ ನಡುವೆ ವಿರೋಧವಿದೆ. ಆದರೂ ಸೆಂಗೊಟ್ಟೈಯನ್ ಮಾತ್ರ ಜಯಲಲಿತಾ ಅವರ ಮೇಲಿನ ಅಭಿಮಾನ, ಗೌರವ ಮರೆತ್ತಿಲ್ಲ.
ಟಿವಿಕೆ ಪಕ್ಷಕ್ಕೆ ಸೇರಿದ ಬಳಿಕ ಕೂಡ ಜಯಲಲಿತಾ ಅವರ ಫೋಟೊವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದೀರಲ್ಲ, ಎಂದು ಮಾಧ್ಯಮದವರು ಪ್ರಶ್ನಿಸಿದ್ದರು. ಅದಕ್ಕೆ ಸೆಂಗೊಟ್ಟೈಯನ್ ಪ್ರತಿಕ್ರಿಯಿಸಿ "ಟಿವಿಕೆ ಜನನಾಯಕನ ಪಕ್ಷ. ಆದ್ರೆ, ಯಾರು ಬೇಕಾದರೂ ತಮ್ಮ ಇಷ್ಟದವರ ಫೋಟೊವನ್ನು ಇಟ್ಟುಕೊಳ್ಳಬಹುದು. ಅದಕ್ಕೆ ಆಕ್ಷೇಪಣೆ ಇಲ್ಲ. ಒಂದು ವೇಳೆ ನಾನು ಜಯಲಲಿತಾ ಅವರ ಫೋಟೊ ಇಟ್ಟುಕೊಳ್ಳದಿದ್ದರೆ ಇಷ್ಟು ಭೇಗ ಬದಲಾಗಿಬಿಟ್ಯಾ? ಎಂದು ನೀವೇ ಕೇಳ್ತೀರಾ. ಇವನಲ್ಲಾ ಎಂತಹ ತ್ಯಾಗಿ, ನಿಮಿಷಕ್ಕೊಂದು ಪಕ್ಷ ಬದಲಾಯಿಸ್ತಾನೆ ಅಂತೀರಾ.. ಯಾವತ್ತಿಗೂ ನನ್ನ ನಿಷ್ಠ ಬದಲಾಗಲ್ಲ" ಎಂದಿದ್ದರು.
5 ದಶಕಗಳಿಂದ ಎಡಿಎಂಕೆ ಪಕ್ಷದಲ್ಲಿ ಸೆಂಗೊಟ್ಟೈಯನ್ ಗುರ್ತಿಸಿಕೊಂಡಿದ್ದರು. 1972ರಲ್ಲಿ ಅವರು ಪಕ್ಷ ಸೇರಿದ್ದರು. 11 ಬಾರಿ ಶಾಸಕರಾಗಿ ಸ್ಪರ್ಧಿಸಿ 10 ಬಾರಿ ಗೆಲುವು ಸಾಧಿಸಿದ್ದಾರೆ. 10 ಬಾರಿ ಎಡಿಎಂಕೆ ಪಕ್ಷದಿಂದ ಚುನಾವಣೆ ಕಣಕ್ಕಿಳಿದಿದ್ದರು. ಡಿಎಂಕೆ ಪಕ್ಷದಿಂದ ಹೊರಬಂದು ಎಂಜಿಆರ್ ಎಡಿಎಂಕೆ ಪಕ್ಷ ಕಟ್ಟಿದ್ದರು. ಆ ಸಮಯದಿಂದಲೂ ಅವರೊಟ್ಟಿಗೆ ಸೆಂಗೊಟ್ಟೈಯನ್ ಬೆಂಬಲವಾಗಿ ನಿಂತರು. ಬಳಿಕ ಜಯಲಲಿತಾ ಪಕ್ಷದ ನೇತೃತ್ವ ವಹಿಸಿಕೊಂಡಾಗ ಅವರಿಗೆ ಸಾಥ್ ನೀಡಿದ್ದರು. ಇದೀಗ ಟಿವಿಕೆ ಪಕ್ಷ ಸೇರಿ ಗೆದ್ದಿದ್ದಾರೆ. ಸಿಎಂ ವಿಜಯ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


Click it and Unblock the Notifications