ಸೂಪರ್ ಸ್ಟಾರ್ ರಜನಿಕಾಂತ್ ನಿವೃತ್ತಿ ಬಗ್ಗೆ ಪತ್ನಿ ಲತಾ ಮಾತು
ತಮಿಳು ನಟ ರಜನಿಕಾಂತ್ ವಯಸ್ಸು 70 ದಾಟಿದರೂ ಹೀರೊ ಆಗಿ ಅಬ್ಬರಿಸುತ್ತಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟನಾಗಿ ಗುರ್ತಿಸಿಕೊಂಡಿದ್ದಾರೆ. ತಮ್ಮ ಸ್ಟೈಲ್ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಗಮನ ಸೆಳೆಯುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.
ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ಬೆನ್ನಲ್ಲೇ 'ಜೈಲರ್'-2 ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ತಲೈವಾ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನುವ ಊಹಾಪೋಹ ಆಗಾಗ್ಗೆ ಕೇಳಿ ಬರುತ್ತದೆ. ಎರಡು ದಶಕದ ಹಿಂದೆ 'ಬಾಬಾ' ಸಿನಿಮಾ ರಿಲೀಸ್ ಬೆನ್ನಲ್ಲೇ ಇಂತಾದೊಂದು ವದಂತಿ ಹರಡಿತ್ತು. ಆದರೆ ಬಳಿಕ ಅದೆಲ್ಲಾ ಸುಳ್ಳು ಎಂದು ಗೊತ್ತಾಗಿತ್ತು.

'ಕೂಲಿ' ರಜನಿಕಾಂತ್ ನಟನೆಯ ಕೊನೆಯ ಸಿನಿಮಾ ಎಂದು ಕೆಲವರು ಹೇಳಿದ್ದರು. ಆದರೆ ಅದರ ಬೆನ್ನಲ್ಲೇ 'ಜೈಲರ್-2' ಸಿನಿಮಾ ಘೋಷಣೆ ಆಗಿತ್ತು. ಇನ್ನು ಈ ಸಿನಿಮಾ ಅನೌನ್ಸ್ಮೆಂಟ್ ಟೀಸರ್ ಬಗ್ಗೆ ಕೆಲವರು ಚಕಾರ ಎತ್ತಿದ್ದರು. ರಜನಿಕಾಂತ್ಗೆ ಡ್ಯೂಪ್ ಹೆಚ್ಚು ಇದರಲ್ಲಿ ನಟಿಸಿದಂತಿದೆ. ಅವರು ದೇಹ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸೋಕೆ ಸಹಕರಿಸುತ್ತಿಲ್ಲ. ಸುಮ್ಮನೆ ಹೀರೊ ಆಗಿ ನಟಿಸುವ ಬದಲು ಅಮಿತಾಬ್ ರೀತಿ ವಯಸ್ಸಿಗೆ ತಕ್ಕ ಪಾತ್ರಗಳನ್ನು ರಜನಿಕಾಂತ್ ಮಾಡುವುದು ಉತ್ತಮ ಎಂದು ಕೆಲವರು ಕಾಮೆಂಟ್ ಮಾಡಿದ್ದರು.
ಯಾರು ಏನೇ ಹೇಳಿದರೂ ರಜನಿಕಾಂತ್ ಹೀರೊ ಆಗಿ ನಟಿಸುತ್ತಿದ್ದಾರೆ. ತಮ್ಮ ಮಗಳ ವಯಸ್ಸಿನ ನಾಯಕಿಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ನಿವೃತ್ತಿ ಬಗ್ಗೆ ಇದೀಗ ಪತ್ನಿ ಲತಾ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ಇತ್ತೀವೆಗೆ ಮಾಧ್ಯಮಗಳ ಮುಂದೆ ಅವರು ಹಾಜರಾಗಿದ್ದರು. ಈ ವೇಳೆ ರಜನಿಕಾಂತ್ ಸಿನಿಮಾಗಳಿಂದ ಕೆಲ ದಿನ ವಿಶ್ರಾಂತಿ ಪಡೆಯಲು ತೀರ್ಮಾನಿಸಿದ್ದಾರಂತೆ ಹೌದಾ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ.
"ನನಗೆ ಗೊತ್ತಿದ್ದರೆ ಹೇಳಬಹುದು. ಇನ್ನು ಆ ಬಗ್ಗೆ ಅವ್ರು ಯೋಚಿಸಿಲ್ಲ. ಸದ್ಯಕ್ಕೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತಾರೆ" ಎಂದು ಲತಾ ರಜನಿಕಾಂತ್ ಹೇಳಿದ್ದಾರೆ. ಈ ಮಾತು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಮೊದಲಿಗೆ 'ರೆಟ್ರೋ' ಕಥೆಯನ್ನು ರಜನಿಕಾಂತ್ ಅವರಿಗೆ ಹೇಳಿದ್ದರು. ಅವರು ಒಪ್ಪದೇ ಇದ್ದಾಗ ಸೂರ್ಯ ಜೊತೆ ಸಿನಿಮಾ ಮಾಡುವಂತಾಯಿತು.
ರಜನಿಕಾಂತ್ ಇನ್ನು ಕಥೆಗಳನ್ನು ಕೇಳುತ್ತಿದ್ದಾರೆ ಅಂದರೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ ಎನಿಸುತ್ತದೆ. ಅಭಿಮಾನಿಗಳು ಕೂಡ ಅದನ್ನೇ ಬಯಸುತ್ತಾರೆ. ಹೀರೊ ಆಗಿಯೇ ಚಿತ್ರಗಳಲ್ಲಿ ಮುಂದುವರೆಯಲಿದ್ದಾರೆ. ಸಾಧ್ಯವಾದಷ್ಟು ಬೇಗ ಮತ್ತಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿಬಿಡುವಂತೆ ಸ್ನೇಹಿತನಿಗೆ ಸಲಹೆ ನೀಡಿರುವುದಾಗಿ ಕೆಲ ದಿನಗಳ ಹಿಂದೆ ರಾಜ್ ಬಹದ್ದೂರ್ ಹೇಳಿದ್ದರು.
ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಉಪೇಂದ್ರ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.
ನೆಲ್ಸನ್ ನಿರ್ದೇಶನದಲ್ಲಿ 'ಜೈಲರ್'-2 ಸಿನಿಮಾ ನಿರ್ಮಾಣವಾಗುತ್ತಿದೆ. ಮತ್ತೊಮ್ಮೆ ಅದೇ ತಂಡ ಜೊತೆಯಾಗಿದೆ. ಶಿವಣ್ಣ, ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ತೆಲುಗು ನಟ ಬಾಲಕೃಷ್ಣ ನಟಿಸುವ ಸಾಧ್ಯತೆ ಹೆಚ್ಚಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿತ್ತು. ಕೇರಳದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದಾರೆ. ತಲೈವಾ ಜೊತೆ ರಮ್ಯಾ ಕೃಷ್ಣ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.


Click it and Unblock the Notifications











