ಡಿವೋರ್ಸ್ ಕ್ಲೈಮ್ಯಾಕ್ಸ್ ; ಜೂನ್ 15ರಂದು ಒಂದಾಗ್ತಾರಾ ವಿಜಯ್-ಸಂಗೀತಾ? ತಾಯಿಯ ಮಾಸ್ಟರ್ ಪ್ಲಾನ್ ? ತ್ರಿಶಾ ಕಥೆ ಏನು ?
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ. ಆದರೆ ಬದಲಾದ ಈ ಕಾಲದಲ್ಲಿ ದಾಂಪತ್ಯದ ಅರ್ಥವೇ ಬದಲಾಗಿದೆ.
ನಿಜ .. ಸಂಸಾರ ಅಂದ ಮೇಲೆ ಅಲ್ಲಿ ಸರಸ - ವಿರಸ ಇದ್ದೇ ಇರುತ್ತೆ. ಯಾಕೆಂದರೆ ಇವೆರಡು ದಾಂಪತ್ಯ ಜೀವನದ ಒಂದೇ ನಾಣ್ಯದ ಎರಡು ಮುಖಗಳು. ಸರಸ-ವಿರಸ ಮತ್ತು ಸಾಮರಸ್ಯ ಇದ್ದರೆನೇ ಅದು ಪರಿಪೂರ್ಣ ಸಂಸಾರ. ಹೀಗಾಗಿಯೇ ಈ ಹಿಂದೆ ಎಷ್ಟೇ ಮನಸ್ತಾಪ ಇದ್ದರೂ ಕೂಡ ಎಲ್ಲಾ ಗಂಡ ಹೆಂಡ್ತಿ ಜಗಳ ಉಂಡು ಮಲಗುವವರೆಗೆ ಮಾತ್ರ ಸೀಮಿತವಾಗುತ್ತಿತ್ತು.

ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಉಂಡು ಮಲಗಿದ ನಂತರ ಕೂಡ ಮೂಡಿದ ಬಿರುಕು ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.
ಅದರಲ್ಲಿಯೂ ಅಕ್ರಮ ಸಂಬಂಧದ ವಾಸನೆ ಇಬ್ಬರಲ್ಲಿ ಯಾರಾದರೂ ಒಬ್ಬರ ಮೂಗಿಗೆ ಬಡಿದರೂ ಮುಗೀತು. ಆ ಸಂಬಂಧ ಅಂತ್ಯವಾದಂತೆಯೇ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಕಣ್ಮುಂದೆ ಇಳಯ ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಇದೆ. ತ್ರಿಶಾ ಮೇಲೆ ವಿಜಯ್ ಅವರಿಗೆ ಇರುವ ಮೋಹ ಮತ್ತು ದಾಹ 26-27 ವರ್ಷದ ಸಂಬಂಧವನ್ನು ಬಲಿ ಪಡೆದಿದೆ ಎನ್ನುವ ಮಾತು ಚೆನ್ನೈನಲ್ಲಿ ಕೇಳಿ ಬರುತ್ತಿದೆ.
ಸದ್ಯ ಇವರ ದಾಂಪತ್ಯ ಕಥೆ ಮತ್ತು ವ್ಯಥೆ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಇದೀಗ ಹಳೆಯ ಕಹಿಯನ್ನೆಲ್ಲಾ ಮರೆತು ವಿಜಯ್ ಮತ್ತು ಸಂಗೀತಾ ಒಂದಾಗಲಿದ್ದಾರೆ ಎನ್ನುವ ಸುದ್ದಿ ಅಖಂಡ ತಮಿಳುನಾಡಿನಲ್ಲಿ ಹಬ್ಬಿದೆ.
ಹೌದು. ರಾಜಕಾರಣಿಯಾಗಿ ಹೊಸ ಅಧ್ಯಾಯ ಶುರು ಮಾಡಿರುವ ವಿಜಯ್ ಅವರ ಡ್ಯಾಮೇಜ್ ಆದ ಫ್ಯಾಮಿಲಿ ಇಮೇಜ್ನ್ನ ಸರಿ ಮಾಡಲು, ಖುದ್ದು ವಿಜಯ್ ಅವರ ತಾಯಿ ಶೋಭಾ ಮುಂದಾಗಿದ್ದಾರೆ ಎನ್ನುವ ವಿಷಯ ಸದ್ಯ ಚರ್ಚೆಯಲ್ಲಿದೆ. ಆ ಪ್ರಕಾರ ಕುಟುಂಬದ ಗೌರವಕ್ಕೆ ಧಕ್ಕೆ ಬಾರದಂತೆ ತಡೆಯಲು ಶೋಭಾ ಚಂದ್ರಶೇಖರ್ ಪ್ಲಾನ್ವೊಂದನ್ನು ಹೆಣೆದಿದ್ದು, ಮಗ ಮತ್ತು ಸೊಸೆಯ ನಡುವೆ ರಾಜಿ ಸಂಧಾನ ಮಾಡುತ್ತಿದ್ಧಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಕೇವಲ ವೈಯಕ್ತಿಕ ಬದುಕಷ್ಟೇ ಅಲ್ಲದೆ, ವಿಜಯ್ ಅವರ ರಾಜಕೀಯ ಭವಿಷ್ಯ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಬ್ಬರೂ ರಾಜಿ ಮಾಡಿಕೊಳ್ಳುವುದೇ ಇರುವ ಅಂತಿಮ ಆಯ್ಕೆ ಎಂದು ಶೋಭಾ ತಮ್ಮ ಮಗ ವಿಜಯ್ ಮನವೊಲಿಸುತ್ತಿದ್ದಾರೆ ಎಂದು ವರದಿಯಾಗಿದ್ದು, ಸಂಗೀತಾ ತಮ್ಮ ಬಿಗಿ ಪಟ್ಟನ್ನು ಸಡಿಲಗೊಳಿಸಿದ್ದು, ಸಂಧಾನದ ಹಾದಿಗೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದೆಲ್ಲದರಿಂದ ಜೂನ್ 15ರಂದು ನಡೆಯಲಿರುವ ಕೋರ್ಟ್ ಹಿಯರಿಂಗ್ನಲ್ಲಿ ವಿಚ್ಛೇದನದ ಬದಲಿಗೆ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೆ ಬಾಳುವ ನಿರ್ಧಾರವನ್ನು ಪ್ರಕಟಿಸಬಹುದು ಅಥವಾ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂಬ ಆಶಾವಾದ ವಿಜಯ್ ಅವರ ಅಭಿಮಾನಿಗಳಲ್ಲಿ ಮೂಡಿದ್ದು, ಅಪ್ಪಿ ತಪ್ಪಿ ರಾಜಿಯಾಗಿದ್ದೇ ಆದಲ್ಲಿ ತ್ರಿಶಾ ಕಥೆ ಏನು..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಈಗ ಮನೆ ಮಾಡಿದೆ.
ಒಟ್ನಲ್ಲಿ ಸದ್ಯ ವಿಜಯ್ ಮತ್ತು ಸಂಗೀತ ಮತ್ತೆ ಒಂದಾಗಲಿದ್ದಾರೆ ಎಂಬ ಮಾತು ತಮಿಳು ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಜೂನ್ 15ರಂದು ನ್ಯಾಯಾಲಯದಲ್ಲಿ ಇಬ್ಬರೂ ಮಂಡಿಸಲಿರುವ ವಾದಗಳು ಮತ್ತು ಅವರ ನಡೆಯ ಮೇಲೆ ಈ ಸುದ್ದಿಯ ಸತ್ಯಾಸತ್ಯತೆ ಗೊತ್ತಾಗಲಿದೆ. ಅಂದು ಇಬ್ಬರೂ ಮತ್ತೆ ಒಂದಾಗುವ ನಿರ್ಧಾರ ಪ್ರಕಟಿಸುತ್ತಾರಾ..? ಅಥವಾ ಕೆಸರೆರಚದೆ ಇಬ್ಬರು ಸೌಹಾರ್ದಯುತವಾಗಿ ದೂರವಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಎಲ್ಲರ ಕಣ್ಣು ಈಗ ಜೂನ್ 15ರ ಮೇಲಿದ್ದು, ಅಂದು ಕೋರ್ಟ್ ರೂಮ್ನಿಂದ ಹೊರಬೀಳುವ ಅಂತಿಮ ನಿರ್ಧಾರಕ್ಕಾಗಿ ಇಡೀ ತಮಿಳುನಾಡು ಉಸಿರು ಬಿಗಿಹಿಡಿದು ಕಾಯುತ್ತಿದೆ.


Click it and Unblock the Notifications