ಹೇಳ್ದೆ ಕೇಳ್ದೆ ಕ್ಯಾರವಾನ್ ಇಂದ ಓಡೋದೆ, ನಿನ್ನಿಂದ ₹1 ಕೋಟಿ ನಷ್ಟ; ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ
ಬಹುಭಾಷಾ ನಟ ಪ್ರಕಾಶ್ ರಾಜ್ ಬರೀ ಚಿತ್ರರಂಗ ಮಾತ್ರವಲ್ಲ, ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. ಸದ್ಯ ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರೂ ರಾಜಕೀಯ ಮುಖಂಡರ ವಿರುದ್ಧ ಆರೋಪ ಪ್ರತ್ಯಾರೋಪ ಮಾಡುತ್ತಿರುತ್ತಾರೆ. ದೇಶದ ಆಗುಹೋಗುಗಳ ಬಗ್ಗೆ ಪದೇ ಪದೆ ಪ್ರತಿಕ್ರಿಯಿಸುತ್ತಾರೆ. Just Asking ಎಂದು ಪ್ರಶ್ನೆ ಮಾಡುತ್ತಿರುತ್ತಾರೆ.
ಇತ್ತೀಚೆಗೆ ತಿರುಪತಿ ಲಡ್ಡು ಪ್ರಸಾದ ವಿವಾದ ಸಂಬಂಧ ಟ್ವಿಟರ್ನಲ್ಲಿ ಪ್ರಕಾಶ್ ರಾಜ್ ಅಬ್ಬರಿಸಿದ್ದರು. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರಾಜ್ ಟ್ವೀಟ್ ವಾರ್ ಸಂಚಲನ ಸೃಷ್ಟಿಸಿತ್ತು. ಪವರ್ ಸ್ಟಾರ್ ಬಹಿರಂಗವಾಗಿಯೇ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇನ್ನು ಸಾಕಷ್ಟು ಸಂದರ್ಭಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರನ್ನು ಪ್ರಕಾಶ್ ರಾಜ್ ಟೀಕಿಸಿದ್ದಾರೆ.

ನಟ ಪ್ರಕಾಶ್ ರಾಜ್ ಎಡಪಂಥೀಯ ಸಿದ್ದಾಂತಗಳ ಮೂಲಕ ಗುರ್ತಿಸಿಕೊಂಡಿರುವುದು ಗೊತ್ತೇಯಿದೆ. ಹಾಗಾಗಿ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬರ್ತಿದ್ದಾರೆ. ಇದೇ ಕಾರಣಕ್ಕೆ ಟ್ರೋಲ್ಗಳಿಗೂ ಗುರಿಯಾಗಿದ್ದಾರೆ. ಸಾಕಷ್ಟು ಜನ ಪ್ರಕಾಶ್ ರಾಜ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ.
ಸದ್ಯ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಬಗ್ಗೆ ತಮಿಳು ಚಿತ್ರ ನಿರ್ಮಾಪಕ ವಿನೋದ್ ಕುಮಾರ್ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದ್ದಾರೆ. ನೀವು ಏನು ಸಾಧನೆ ಮಾಡಿದ್ದೀರಾ ಹೇಳಿ? ಎಂದು ಕೇಳಿದ್ದಾರೆ. ಜೊತೆಗೆ ನಮ್ಮ ಸಿನಿಮಾ ಸೆಟ್ನಿಂದ ಹೇಳದೇ ಕೇಳದೇ ಕಣ್ಮರೆ ಆಗಿಬಿಟ್ಟಿರಿ. ಅದರಿಂದ ನನಗೆ ಸಾಕಷ್ಟು ನಷ್ಟವಾಯಿತು ಎಂದಿದ್ದಾರೆ.
ಇತ್ತೀಚೆಗೆ ತಮಿಳು ನಟ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದರು. ಸಚಿವ ಸಂಪುಟ ಪುನರ್ರಚನೆ ವೇಳೆ ತಂದೆ ಸ್ಟಾಲಿನ್ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಉದಯನಿಧಿ ಸ್ಟಾಲಿನ್ ಜೊತೆಗಿನ ಫೋಟೊವನ್ನು ನಟ ಪ್ರಕಾಶ್ ರಾಜ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. "ಉಪ ಮುಖ್ಯಮಂತ್ರಿ ಜೊತೆ" ಎಂದು ಕ್ಯಾಪ್ಷನ್ ಕೊಟ್ಟು ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ ಟ್ವೀಟ್ಗೆ ಸಾಕಷ್ಟು ಜನ ರಿಪ್ಲೇ ಮಾಡಿದ್ದಾರೆ. ನಿರ್ಮಾಪಕ ವಿನೋದ್ ಕುಮಾರ್ ರಿಪ್ಲೇ ಮಾಡಿ "ನಿಮ್ಮೊಂದಿಗೆ ಕುಳಿತಿರುವ ಮೂವರು ವ್ಯಕ್ತಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ, ಆದರೆ ನೀವು ಠೇವಣಿಯನ್ನೇ ಕಳೆದುಕೊಂಡಿದ್ದೀರಿ, ಅದೇ ವ್ಯತ್ಯಾಸ. ನನ್ನ ಶೂಟಿಂಗ್ ಸೆಟ್ನಲ್ಲಿ ನಿಮ್ಮಿಂದ 1 ಕೋಟಿ ರೂ. ನಷ್ಟವಾಗಿತ್ತು. ನಮಗೆ ತಿಳಿಸದೇ ಕಾರವಾನ್ನಿಂದ ನಾಪತ್ತೆ ಆಗಿದ್ದಿರಿ. ಅದಕ್ಕೆ ಕಾರಣವೇನು? ಸುಮ್ಮನೆ ಕೇಳ್ತಿದ್ದೀನಿ. ನೀವು ನನಗೆ ಕರೆ ಮಾಡುವುದಾಗಿ ಹೇಳಿದ್ದೀರಿ, ಆದರೆ ನೀವು ಮಾಡಲಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಸದ್ಯ ವಿನೋದ್ ಕುಮಾರ್ ಟ್ವೀಟ್ ವೈರಲ್ ಆಗುತ್ತಿದೆ. ಸಾಕಷ್ಟು ಜನ ಇದಕ್ಕೆ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಕೆಲ ಚಿತ್ರತಂಡಗಳಿಗೆ ಪ್ರಕಾಶ್ ರಾಜ್ ಇದೇ ರೀತಿ ಕಾಟ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಕುಹಕವಾಡುತ್ತಿದ್ದಾರೆ.
2019ರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಟ ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಗೆಲುವ ನಿರೀಕ್ಷೆಯಲ್ಲಿದ್ದ ಪ್ರಕಾಶ್ ರಾಜ್ ಹೀನಾಯವಾಗಿ ಸೋತು ಠೇವಣಿ ಕಳೆದುಕೊಂಡಿದ್ದರು. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ 602, 853 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 531, 885 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಪ್ರಕಾಶ್ ರಾಜ್ ಕೇವಲ 28, 906 ಮತಗಳನ್ನಷ್ಟೆ ಪಡೆದಿದ್ದರು.
5 ವರ್ಷಗಳ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪ್ರಕಾಶ್ ರಾಜ್ ಮತ್ತೆ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳಲಿಲ್ಲ. ಆದರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ತಮಗೆ ತಪ್ಪು ಎನಿಸಿದ್ದರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.


Click it and Unblock the Notifications











