ಪರೀಕ್ಷಾ ಮೇಲ್ವಿಚಾರರಿಗೆ ಸವಾಲ್; ಎಕ್ಸಾಂ ಹಾಲ್ ಬಳಿ 'ಪುಷ್ಪ'-2 ಡೈಲಾಗ್ ಬರೆದ ವಿದ್ಯಾರ್ಥಿ!
ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ಗಾಢವಾಗಿರುತ್ತದೆ. ಸಿನಿಮಾ ಅನ್ನೋದು ಪ್ರಭಾವಶಾಲಿ ಮಾಧ್ಯಮ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎನ್ನುವ ಮಾತುಗಳು ಕೇಳಿಬರುತ್ತಿದೆ. ಇತ್ತೀಚಿನ ಸಿನಿಮಾಗಳ ಶೈಲಿ, ಗುಣಮಟ್ಟ, ಸಂದೇಶ ಬದಲಾಗುತ್ತಿದೆ. ಅದನ್ನು ಆಗಾಗ್ಗೆ ನೋಡುತ್ತಿರುತ್ತೇವೆ.
ಸಿನಿಮಾಗಳನ್ನು ನೋಡಿ ಮಕ್ಕಳು ಹಾಳಾಗುತ್ತಾರೆ ಎನ್ನುವವರು ಇದ್ದಾರೆ. ಸಿನಿಮಾಗಳಲ್ಲಿ ತೋರಿಸಿದನ್ನು ನಿಜವಾಗಿ ಮಾಡುವ ಸಾಹಸಕ್ಕೂ ಕೆಲವರು ಕೈ ಹಾಕುತ್ತಿದ್ದಾರೆ. ನಟ, ನಟಿಯರ ವೇಷಭೂಷಣ, ಸ್ಟೈಲ್, ಡೈಲಾಗ್ ಎಲ್ಲವನ್ನು ಅನುಕರಿಸಲು ಮುಂದಾಗುತ್ತಾರೆ. 'ಪುಷ್ಪ' ಸಿನಿಮಾ ನೋಡಿ ನಮ್ಮ ಶಾಲೆ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಕೆಲ ದಿನಗಳಿಂದ ತೆಲಂಗಾಣದ ಶಾಲಾ ಮುಖ್ಯ ಶಿಕ್ಷಕಿ ಹೇಳಿದ್ದರು. ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ಸದ್ಯ ಅದೇ 'ಪುಷ್ಪ' ಸರಣಿಯ ಸಿನಿಮಾ ನೋಡಿ ಶಾಲೆಯ ವಿದ್ಯಾರ್ಥಿಯೊಬ್ಬ ಪರೀಕ್ಷಾ ಮೇಲ್ವಿಚಾರರಿಗೆ ಸವಾಲ್ ಹಾಕಿದ್ದಾನೆ. ಸಾಮಾನ್ಯವಾಗಿ ಸಿನಿಮಾಗಳನ್ನು ನಾಯಕ ಹೊಡೆಯುವ ಬಿಲ್ಡಪ್ ಡೈಲಾಗ್ಗಳು ಅಭಿಮಾನಿಗಳ ಮನಗೆಲ್ಲುತ್ತದೆ. 'ಪುಷ್ಪ'-2 ಸಿನಿಮಾ ರಿಲೀಸ್ ಆಗಿ 3 ತಿಂಗಳ ಕಳೆದಿದೆ. ಆದರೆ ಪುಷ್ಪರಾಜ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಇವತ್ತಿಗೂ ಸೋಶಿಯಲ್ ಮೀಡಿಯಾ ರೀಲ್ಸ್ನಲ್ಲಿ ಚಿತ್ರದ ಹಾಡು, ಡೈಲಾಗ್ಸ್ ಟ್ರೆಂಡ್ ಆಗ್ತಿದೆ. ಸದ್ಯ ಶಾಲಾ ವಿದ್ಯಾರ್ಥಿಯೊಬ್ಬ 'ಪುಷ್ಪ'-2 ಚಿತ್ರದ ಡೈಲಾಗ್ ಅನ್ನು ಕೊಂಚ ಬದಲಿಸಿ ಪರೀಕ್ಷಾ ಮೇಲ್ವಿಚಾರರಿಗೆ ಸವಾಲು ಹಾಕಿದ್ದಾನೆ.
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ 10 ತರಗತಿ ಪರೀಕ್ಷೆ ಶುರುವಾಗಿದೆ. ಶ್ರೀಕಾಕುಳಂನ ತೆಕ್ಕಲಿಯಲ್ಲಿರುವ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ ವಿದ್ಯಾರ್ಥಿಯೊಬ್ಬ 'ಪುಷ್ಪ- 2' ಚಿತ್ರದ ಸೂಪರ್ ಹಿಟ್ ಡೈಲಾಗ್ ಅನ್ನು ತನ್ನದೇ ಶೈಲಿಯಲ್ಲಿ ಬರೆದಿದ್ದಾನೆ. "ಧಮ್ಮಿದ್ರೆ ಹಿಡ್ಕೊಳ್ಳೋ ಇನ್ವಿಜಿಲೇಟರು.. ಹಿಡ್ಕೊಂಡ್ರೆ ಬಿಟ್ಟುಬಿಡ್ತೀನಿ ಬುಕ್ಲೆಟ್.. ತಗ್ಗೋದೆ ಇಲ್ಲ" ಎಂದು ಸವಾಲು ಹಾಕಿದ್ದಾನೆ. ಎಲ್ಲರಿಗೂ ಆಲ್ದಿ ಬೆಸ್ಟ್ ಎಂದು ಬರೆದಿದ್ದಾನೆ. ಯಾರೋ ಅದರ ಫೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ. ಇವತ್ತಿನ ಯುವಜನತೆ ಹೇಗೆ ಬದಲಾಗಿದ್ದಾರೆ ನೋಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ಕೆಲವರು ಇವತ್ತಿನ ಯುವಕರು ಹೇಗೆ ಬದಲಾಗಿದ್ದಾರೆ ನೋಡಿ ಎನ್ನುತ್ತಿದ್ದಾರೆ. ಇದು ಮೊಬೈಲ್ ಜಮಾನ, ಮೊಬೈಲ್ನಲ್ಲಿ ಮಕ್ಕಳು ನೋಡಬಾರದ್ದೆಲ್ಲಾ ನೋಡ್ತಿದ್ದಾರೆ, ಇದು ಯಾವ್ ಮಹಾ ಬಿಡಿ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡ್ತಿದ್ದಾರೆ. 'ಪುಷ್ಪ-2' ಚಿತ್ರದ ಇಂಟರ್ವಲ್ ವೇಳೆಗೆ ಬರುವ ಸನ್ನಿವೇಶದಲ್ಲಿ ಪುಷ್ಪರಾಜ್ ಈ ಡೈಲಾಗ್ ಅನ್ನು ಭನ್ವರ್ ಸಿಂಗ್ ಶೇಖಾವತ್ಗೆ ಹೇಳುತ್ತಾನೆ.
ಡಿಸೆಂಬರ್ 5ರಂದು ತೆರೆಗೆ ಬಂದಿದ್ದ 'ಪುಷ್ಪ'-2 ಸಿನಿಮಾ 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಈ ಹಿಂದಿನ ಹಲವು ಬಾಕ್ಸಾಫೀಸ್ ದಾಖಲೆಗಳನ್ನು ಸಿನಿಮಾ ಮುರಿದಿದೆ. ಸುಕುಮಾರ್ ನಿರ್ದೇಶನದ ಚಿತ್ರವನ್ನು ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು. 'ಪುಷ್ಪ- 3' ಚಿತ್ರವನ್ನು ಮಾಡುವ ಪ್ರಯತ್ನ ನಡೀತಿದೆ.
'ಪುಷ್ಪ' ಸಿನಿಮಾ ನೋಡಿ ನಮ್ಮ ಶಾಲಾ ಮಕ್ಕಳು ಹಾಳಾಗಿದ್ದಾರೆ ಎಂದು ತೆಲಂಗಾಣದ ಯೂಸುಫ್ಗುಡ ಹೈಸ್ಕೂಲ್ ಮುಖ್ಯ ಶಿಕ್ಷಕಿ ಇತ್ತೀಚೆಗೆ ಅಸಮಾಧಾನ ಹೊರ ಹಾಕಿದ್ದರು. ಸರ್ಕಾರ ಇಂತಹ ಚಿತ್ರಗಳ ಬಿಡುಗಡೆಗೆ ಹೇಗೆ ಅವಕಾಶ ಕೊಡುತ್ತದೆ ಎಂದು ಪ್ರಶ್ನಿಸಿದ್ದರು. ಸಿನಿಮಾ ನೋಡಿ ಮಕ್ಕಳ ಮಾತಿನ ಶೈಲಿ, ಹೇರ್ಸ್ಟೈಲ್, ಡ್ರೆಸ್ಸಿಂಗ್ ಸ್ಟೈಲ್ ಪುಷ್ಪರಾಜ್ ಪಾತ್ರದಿಂದ ಬಹಳ ಇನ್ಫುಯೆನ್ಸ್ ಆಗಿದೆ. ಪುಷ್ಪರಾಜ್ ರೀತಿ ಆಡುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ಕೇಳುತ್ತಿಲ್ಲ, ಈಗ ಅದೇ ಸ್ಟೈಲ್, ಟ್ರೆಂಡ್ ಎನ್ನುತ್ತಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.


Click it and Unblock the Notifications











