ಕೃತಿಶೆಟ್ಟಿನ ನೋಡಿ ಶ್ರೀಲೀಲಾ ಎಂದು ಯಾಮಾರಿ ಹೊಗಳಿದ ಅಭಿಮಾನಿ, ಕರಾವಳಿ ಚೆಲುವೆ ಶಾಕ್!
ರಶ್ಮಿಕಾ ಮಂದಣ್ಣ ಬಳಿಕ ಹಲವು ಕನ್ನಡ ನಟಿಯರು ಟಾಲಿವುಡ್ ಪ್ರವೇಶಿಸಿದರು. ಇನ್ನು ಕೆಲವರು ಈಗಾಗಲೇ ಹೊರಟು ನಿಂತಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲೀಲಾ ಹಾಗೂ ಕೃತಿ ಶೆಟ್ಟಿ ಕೊಂಚ ಮಟ್ಟಿಗೆ ಕ್ರೇಜ್ ಸಂಪಾದಿಸಿದ್ದಾರೆ. ಆದರೆ ಇಬ್ಬರಿಗೂ ದೊಡ್ಡ ಮಟ್ಟದ ಬ್ರೇಕ್ ಮಾತ್ರ ಸಿಕ್ಕಿಲ್ಲ. ಹಾಗಂತ ಪ್ರಯತ್ನ ಕೈಬಿಟ್ಟಿಲ್ಲ.
'ಉಪ್ಪೆನ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ಕರಾವಳಿ ಚೆಲುವೆ ಕೃತಿ ಶೆಟ್ಟಿಗೆ ಬಳಿಕ ಸೈಲೆಂಟ್ ಆಗಿಬಿಟ್ಟರು. ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಂಡು ಸೋಲಿನ ಸುಳಿಗೆ ಸಿಲುಕಿದರು. ಹೊಸ ಚೆಲುವೆಯರ ನಡುವೆ ಕಳೆದುಹೋಗಿಬಿಟ್ಟಿದ್ದಾರೆ. ಕೃತಿ ಶೆಟ್ಟಿಗೆ ಹೋಲಿಸಿದರೆ ಶ್ರೀಲೀಲಾ ಪರವಾಗಿಲ್ಲ. ಇತ್ತೀಚೆಗೆ ಮಹೇಶ್ ಬಾಬು ಜೊತೆ ನಟಿಸಿ ಸಕ್ಸಸ್ ಕಂಡಿದ್ದಾರೆ. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಮಹೇಶ್ ಬಾಬು ಸಿನಿಮಾ ಎನ್ನುವ ಕಾರಣಕ್ಕೆ ಕೊಂಚ ಸಕ್ಸಸ್ ಕಂಡಿದೆ.

ಸದ್ಯ ಪವನ್ ಕಲ್ಯಾಣ್ ಜೊತೆಗೆ ಒಂದು ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಆದರೆ ಕೃತಿಶೆಟ್ಟಿಗೆ ದೊಡ್ಡ ಅವಕಾಶಗಳು ಸಿಗುತ್ತಿಲ್ಲ. ಕಳೆದ ವರ್ಷ ರಾಮ್ ಜೊತೆಗಿನ 'ಸ್ಕಂದ', ವೈಷ್ಣವ್ ತೇಜ್ ಜೊತೆಗಿನ 'ಆದಿ ಕೇಶವ' ಹಾಗೂ ನಿತಿನ್ ಜೊತೆಗಿನ 'ಎಕ್ಸ್ಟ್ರಾರ್ಡಿನರಿ ಮ್ಯಾನ್' ಸಿನಿಮಾಗಳು ಹೀನಾಯವಾಗಿ ಸೋಲುಂಡವು. ಬಾಲಯ್ಯ ಜೊತೆ ನಟಿಸಿದ 'ಭಗವಂತ್ ಕೇಸರಿ' ಸಿನಿಮಾ ಆಕೆಗೆ ಕೊಂಚಮಟ್ಟಿಗೆ ಹೆಸರು ತಂದುಕೊಟ್ಟಿತ್ತು.
ಇತ್ತೀಚೆಗೆ ಮಾಲ್ ಒಂದರ ಉದ್ಘಾಟನೆ ಸಮಾರಂಭಕ್ಕೆ ಕೃತಿಶೆಟ್ಟಿ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಭಿಮಾನಿಯ ಮಾತಿಗೆ ಶಾಕ್ ಆಗಿದ್ದಾರೆ. ಮಾಲ್ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ "ನಿಮ್ಮ 'ಸ್ಕಂದ' ಚಿತ್ರ ಚೆನ್ನಾಗಿದೆ" ಎಂದು ಅಭಿಮಾನಿಯೊಬ್ಬ ಹೇಳಿದ್ದಾನೆ. ಅದಕ್ಕೆ ಅವಕ್ಕಾದ ಕೃತಿ ಶೆಟ್ಟಿ ಧನ್ಯವಾದ ಹೇಳುತ್ತಲೇ, ಆ ಚಿತ್ರದಲ್ಲಿ ನಾನಿಲ್ಲ, ಎಂದು ಹೇಳಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಭಿಮಾನಿಗಳು ಕೃತಿ ಶೆಟ್ಟಿಯನ್ನು ಮರೆತ್ತಿದ್ದಾರೆ ಎನ್ನುತ್ತಿದ್ದಾರೆ. ಸದ್ಯ ಈ ಸಣ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಭಿಮಾನಿಗಳಿಗೆ 'ಸ್ಕಂದ' ಚಿತ್ರದಲ್ಲಿ ನಟಿಸಿರೋದು ಯಾರು ಅಂತಲೂ ಗೊತ್ತಿಲ್ವಾ? ಕೃತಿ ಶೆಟ್ಟಿ ಯಾರೂ ಅಂತ ಕೂಡ ಗೊತ್ತಿಲ್ವಾ? ಅಷ್ಟರಮಟ್ಟಿಗೆ ಇಬ್ಬರ ಕ್ರೇಜ್ ಕಮ್ಮಿ ಆಗಿದ್ಯಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಸದ್ಯ 'ಉಸ್ತಾದ್ ಭಗತ್ಸಿಂಗ್' ಬಿಟ್ಟರೆ ಶ್ರೀಲೀಲಾ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ. ವಿಜಯ್ ದೇವರಕೊಂಡ ಜೋಡಿಯಾಗಿ ಒಂದು ಚಿತ್ರಕ್ಕೆ ಆಯ್ಕೆ ಆಗಿದ್ದರು. ಆದರೆ ಆ ಸಿನಿಮಾದಿಂದಲೂ ಆಕೆ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಆ ಪಾತ್ರಕ್ಕೆ ಕನ್ನಡ ನಟಿ ರುಕ್ಮಿಣಿ ವಸಂತ್ ಅಥವಾ ಬಾಲಿವುಡ್ ನಟಿ ತೃಪ್ತಿ ದಿಮ್ರಿ ನಾಯಕಿ ಆಗುತ್ತಾರೆ ಎನ್ನಲಾಗ್ತಿದೆ.
ಟಾಲಿವುಡ್ನಲ್ಲಿ ಕ್ರೇಜ್ ಕಮ್ಮಿ ಆಗುತ್ತಿದ್ದಂತೆ ಕೃತಿ ಶೆಟ್ಟಿ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. 3 ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮುಂಬೈನಲ್ಲಿ ತುಳು ಕುಟುಂಬದಲ್ಲಿ ಹುಟ್ಟಿ ಬೆಳೆದ ಕೃತಿ ಶೆಟ್ಟಿ ಮೊದಲು ಹಿಂದಿ ಸಿನಿಮಾದಲ್ಲಿ ನಟಿಸಿದರು. ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರದ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬಳಿಕ ಬುಚ್ಚಿಬಾಬು ನಿರ್ದೇಶನದ 'ಉಪ್ಪೆನ' ಚಿತ್ರಕ್ಕೆ ಆಯ್ಕೆ ಆಗಿದ್ದರು.
ಈಗಾಗಲೇ ಸ್ಯಾಂಡಲ್ವುಡ್ನಿಂದ ಆಶಿಕಾ ರಂಗನಾಥ್, ಶ್ರದ್ಧಾ ಶ್ರೀನಾಥ್, ಸಪ್ತಮಿ ಗೌಡ ಹೀಗೆ ಹಲವು ಕನ್ನಡ ನಟಿಯರು ಟಾಲಿವುಡ್ ಪ್ರವೇಶಿಸಿದ್ದಾರೆ. ರುಕ್ಮಿಣಿ ವಸಂತ್ ಕೂಡ ಇದೇ ಹಾದಿಯಲ್ಲಿದ್ದಾರೆ.


Click it and Unblock the Notifications











