ಸಾಮಾಜಿಕ ಜಾಲತಾಣ ತ್ಯಜಿಸಿದ ಸ್ಟಾರ್ ನಿರ್ದೇಶಕ: ಕಾರಣವೇನು?
ಇತ್ತೀಚಿಗೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಿಂದ ದೂರ ಸರಿಯುತ್ತಿದ್ದಾರೆ. ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಕೂಡ ಸಾಮಾಜಿಕ ಜಾಲತಾಣದ ದೂರ ಸರಿದು ಅನೇಕ ತಿಂಗಳಾಗಿದೆ. ಇದೀಗ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರು ಸಾಮಾಜಿಕ ಜಾಲತಾಣ ತ್ಯಜಿಸುವ ಮೂಲಕ ಅಭಿಮಾನಿಗಳಿ ಅಚ್ಚರಿ ಮೂಡಿಸಿದ್ದಾರೆ
ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಸಾಮಾಜಿಕ ಜಾಲತಾಣದ ಖಾತೆಯಿಂದ ದೂರ ಸರಿಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಕೊರಟಾಲ ಶಿವ ಸಾಮಾಜಿಕ ಮಾಧ್ಯಮಗಳಿಂದ ದೂರ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಅನೇಕ ಸ್ಮರಣೀಯ ಕ್ಷಣಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ.
ಇನ್ಮುಂದೆ ಮಾಧ್ಯಮ ಸ್ನೇಹಿತರ ಮೂಲಕ ಎಲ್ಲರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕೊರೊಟಾಲ ಶಿವ, "ನಾನು ಸಾಮಾಜಿಕ ಮಾಧ್ಯಮಗಳಿಂದ ದೂರ ಸರೆಯುತ್ತಿದ್ದೇನೆ. ಈ ಜಾಗದಲ್ಲಿ ನನ್ನ ಅಪಾರ ನೆನಪುಗಳಿವೆ. ಆದರೀಗ ದೂರ ಸರಿಯುವ ಸಮಯ. ಮಾಧ್ಯಮ ಸ್ನೇಹಿತರ ಮೂಲಕ ನಾನು ಯಾವಾಗಲು ನಿಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತೇನೆ. ಮಾಧ್ಯಮ ಬದಲಾಗುತ್ತೆ. ಆದರೆ ನಮ್ಮ ಬಂಧ ಅಲ್ಲ." ಎಂದು ಬರೆದುಕೊಂಡಿದ್ದಾರೆ. ಆದರೆ ಕಾರಣವೇನು ಎನ್ನುವುದನ್ನು ಬಹಿರಂಗ ಪಡಿಸಿಲ್ಲ.

ಅಂದಹಾಗೆ ಕೊರಟಾಲ ಶಿವ ಸದ್ಯ ಮೆಗಾಸ್ಟಾರ್ ಚಿರಂಜೀವಿ ಜೊತೆ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕಚಿತ್ರೀಕರಣ ಮುಗಿಸಿರುವ ಶಿವ, ಕೊರೊನಾ 2ನೇ ಅಲೆ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೊರಡಲು ತಯಾರಿ ನಡೆಯುತ್ತಿದ್ದಾರೆ.
ಈ ಸಿನಿಮಾ ಬಳಿಕ ನಿರ್ದೇಶಕ ಕೊರಟಾಲ ಶಿವ ತೆಲುಗಿನ ಮತ್ತೋರ್ವ ಖ್ಯಾತ ನಟ ಜೂ.ಎನ್ ಟಿ ಆರ್ ಗೆ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಹೊಸ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಸಿದ್ದು ಜೂ.ಎನ್ ಟಿ ಆರ್ ಕಡೆಯಿಂದನೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಜೂ.ಎನ್ ಟಿ ಆರ್ ಗೆ 'ಜನತಾ ಗ್ಯಾರೇಜ್' ಸಿನಿಮಾ ನಿರ್ದೇಶನ ಮಾಡಿದ್ದು, ಮತ್ತೆ 2ನೇ ಬಾರಿ ಒಂದಾಗುತ್ತಿದ್ದಾರೆ.
Recommended Video
ತೆಲುಗಿನಲ್ಲಿ ಮಿರ್ಚಿ, ಶ್ರೀಮಂತಡು, ಭರತ್ ಅನೆ ನೇನು ಸಿನಿಮಾಗಳನ್ನು ಮಾಡಿ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿರುವ ಕೊರಟಾಲ ಶಿವ ಸಾಮಾಜಿಕ ಜಾಲತಾಣದಿಂದ ದೂರ ಸರಿಯುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.


Click it and Unblock the Notifications











