'ಆಚಾರ್ಯ' ಸೋಲು ಚಿರಂಜೀವಿ ವಿರುದ್ಧ ವಿತರಕರ ಪ್ರತಿಭಟನೆ!
'ಆಚಾರ್ಯ' ಸಿನಿಮಾ ಸಾಕಷ್ಟು ನಿರೀಕ್ಷೆಯ ಜೊತೆಗೆ ತೆರೆಗೆ ಬಂತು. ಚಿತ್ರದಲ್ಲಿ ರಾಮ್ ಚರಣ್, ಚಿರಂಜೀವಿ ಇದ್ದಾರೆ ಅಂದ್ಮೇಲೆ ಅದು ಮೆಗಾ ಕುಟುಂಬದ ಅಭಿಮಾನಿಗಳಿಗೆ ಹಬ್ಬವೇ ಸರಿ. ಹಲವು ವರ್ಷಗಳ ನಂತರ ತಂದೆ, ಮಗ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ಸಿನಿಮಾ ಒಂದು ರೇಂಜಿಗೆ ಇರುತ್ತೆ ಎನ್ನಲಾಗಿತ್ತು. ಆದರೆ ಚಿತ್ರ ರಿಲೀಸ್ ಆಗಿದ್ದೇ, ಆಗಿದ್ದು ಎಲ್ಲವೂ ಉಲ್ಟಾ ಆಗಿದೆ.
'ಆಚಾರ್ಯ' ಬಾಕ್ಸಾಫೀಸ್ನಲ್ಲಿ ಭಾರಿ ದೊಡ್ಡ ನಷ್ಟವನ್ನು ಅನುಭವಿಸಿದೆ. ಸಿನಿಮಾ ವಿತರಕರಿಗೆ ಅರ್ಧದಷ್ಟು ಸಹ ಹಣ ವಾಪಸ್ಸಾಗಿಲ್ಲ. ಕರ್ನಾಟಕ ಸೇರಿದಂತೆ, ಆಂಧ್ರ, ತೆಲಂಗಾಣದ ಸಿನಿಮಾ ವಿತರಕರು ತಮಗೆ ನಷ್ಟ ಪರಿಹಾರ ನೀಡಬೇಕೆಂದು ಈ ಹಿಂದೆಯೇ ಚಿತ್ರತಂಡಕ್ಕೆ ಪತ್ರ ಬರೆದಿದ್ದರು.
ವಿತರಕರ ಕರೆಗೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಸ್ಪಂದಿಸಲು ಯೋಚನೆ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ ಈ ವಿಚಾರದಲ್ಲಿ ಸಿನಿಮಾ ವಿತರಣೆ ಮಾಡಿದವರು ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾ ತಂಡದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.

ಫ್ಲಾಪ್ ಪಟ್ಟಿಯಲ್ಲಿ 'ಆಚಾರ್ಯ'!
ತೆಲುಗಿನ 'ಆಚಾರ್ಯ' ಚಿತ್ರ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿದೆ. ಒಂದು ಕಡೆ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಬಂದರೆ ಮತ್ತೊಂದು ಕಡೆಗೆ ಚಿರಂಜೀವಿ, ರಾಮ್ ಚರಣ್ ತೇಜ ಬಗ್ಗೆ ಇರುವ ಕ್ರೇಜ್ ಕೂಡ ಈ ಚಿತ್ರದ ಪಾಲಿಗೆ ಸತ್ತು ಹೋದಂತೆ ಭಾಸವಾಗಿತ್ತು. ಮೊದಲ ದಿನವೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಬಂದಿತ್ತು. ಹಾಗಾಗಿ ಟಾಲಿವುಡ್ನ ಫ್ಲಾಪ್ ಚಿತ್ರಗಳ ಪಟ್ಟಿ ಸೇರಿಕೊಂಡಿದೆ 'ಆಚಾರ್ಯ'.

ಕೊರಟಾಲ ಶಿವ ಕಛೇರಿ ಮುಂದೆ ಪ್ರತಿಭಟನೆ!
ಚಿರಂಜೀವಿ ಸಿನಿಮಾ ಎಂದ ಮೇಲೆ, ಅದರಲ್ಲೂ ಈ ಚಿತ್ರದಲ್ಲಿ ನಟ ರಾಮ್ ಚರಣ್ ಕೂಡ ನಟಿಸಿದ್ದಾರೆ. ಹಾಗಾಗಿ 'ಆಚಾರ್ಯ' ಸಿನಿಮಾವನ್ನು ವಿತರಕರು ತೆಗೆದುಕೊಂಡಿದ್ದಾರೆ. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಸೋಲು ಕಂಡಿದ್ದು, ವಿತರಕರಿಗೆ ಸಾಕಷ್ಟು ನಷ್ಟವಾಗಿದೆ. ಹೆಚ್ಚಿನ ನಷ್ಟ ಅನುಭವಿಸಿದ ಕಾರಣ ಹಲವು ವಿತರಕರು ಸದ್ಯ ಪ್ರತಿಭಟನೆಗೆ ಇಳಿದಿದ್ದಾರೆ. ಚಿತ್ರದ ನಿರ್ದೇಶಕ ಕೊರಟಾಲ ಶಿವ ಕಛೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

ಚಿರಂಜೀವಿ ಮನೆ ಮುಂದೆ ಪ್ರತಿಭಟನೆಗೆ ಸಜ್ಜು!
ಸದ್ಯ 25ಕ್ಕೂ ಹೆಚ್ಚು ವಿತರಕರು ಸೇರಿ, 'ಆಚಾರ್ಯ' ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಕಛೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಆದರೆ ಅವರಿಗೆ ನ್ಯಾಯ ಸಿಗದೆ ಹೋದರೆ, ಮುಂದಿನ ಹೆಜ್ಜೆಯನ್ನು ನಟ ಚಿರಂಜೀವಿ ಮನೆಯ ಮುಂದೆ ಇಡುತ್ತಾರಂತೆ. ಚಿರಂಜೀವಿ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಲು ವಿತರಕರು ಸಜ್ಜಾಗಿದ್ದಾರೆ. ಆದರೆ ಇದಕ್ಕೆ ಚಿತ್ರತಂಡ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ನೋಡಬೇಕಿದೆ.

ಅರ್ಧದಷ್ಟು ಬಂಡವಾಳ ವಾಪಸ್ಸಾಗಿಲ್ಲ!
ಸಿನಿಮಾದ ಒಟ್ಟು ಬಂಡವಾಳ 132 ಕೋಟಿ ರೂ. ಆದರೆ ಈವರೆಗೆ ವಿತರಕರಿಗೆ ಒಟ್ಟಾರೆಯಾಗಿ ವಾಪಸ್ಸು ಬಂದಿರುವುದು ಬಹಳ ಕಡಿಮೆ ಮೊತ್ತ. ಇನ್ನೂ 85 ಕೋಟಿ ರೂ ನಷ್ಟದಲ್ಲಿ ಸಿನಿಮಾ ಇದೆ ಎನ್ನಲಾಗಿದೆ. ಸಿನಿಮಾಗೆ ಹಾಕಿದ ಬಂಡವಾಳ ವಾಪಸ್ ಬಂದಿಲ್ಲ. ಚಿರಂಜೀವಿ, ರಾಮ್ ಚರಣ್ ಅಂತಹ ನಟರಿದ್ದರೂ ಕೂಡ ಸಿನಿಮಾ ಸೋತು ಸುಣ್ಣವಾಗಿದೆ. ಉತ್ತಮ ಸಿನಿಮಾಗಳನ್ನು ಜನ ನೋಡುತ್ತಾರೆ. ಇಲ್ಲವಾದರೆ ಯಾರೇ ನಟಿಸಿದರೂ ಗೆಲ್ಲೋದು ಕಷ್ಟ ಸಾಧ್ಯ ಎನ್ನುವುದಕ್ಕೆ ಆಚಾರ್ಯ ಉದಾಹಣೆಯಾಗಿದೆ.


Click it and Unblock the Notifications











