ಧರ್ಮಕ್ಕಾಗಿ 'ಹರಿಹರ ವೀರಮಲ್ಲು' ಯುದ್ಧ; ಚುನಾವಣೆ ಹೊತ್ತಲ್ಲಿ ಪವರ್ಫುಲ್ ಕಿಕ್
ಒಂದ್ಕಡೆ ಲೋಕಸಭೆ ಚುನಾವಣೆ ಹವಾ ಜೋರಾಗಿದೆ. ಆಂಧ್ರ ಸೇರಿದಂತೆ 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಕೂಡ ಏಕಕಾಲಕ್ಕೆ ನಡೀತಿದೆ. ಜನಸೇನಾ ಪಕ್ಷದಿಂದ ಸ್ಪರ್ಧಿಸಿರುವ ತೆಲುಗು ನಟ ಪವನ್ ಕಲ್ಯಾಣ್ ಭಿನ್ನ ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ತಮ್ಮ ಸಿನಿಮಾಗಳನ್ನು ಕೂಡ ಪವನ್ ಕಲ್ಯಾಣ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮತದಾನದ ಹೊಸ್ತಿಲಲ್ಲಿ ತಾವು ನಟಿಸುತ್ತಿರುವ ಸಿನಿಮಾಗಳ ಟೀಸರ್ ರಿಲೀಸ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಟೀಸರ್ ಬಂದಿತ್ತು. ಆ ಚಿತ್ರದಲ್ಲಿದ್ದ ಕೆಲ ಡೈಲಾಗ್ಸ್ ಬಗ್ಗೆ ಚುನಾವಣೆ ಆಯೋಗಕ್ಕೂ ದೂರು ನೀಡಲಾಗಿತ್ತು. ಇದೀಗ ಮತ್ತೊಂದು ಸಿನಿಮಾ ಟೀಸರ್ ಬಂದಿದೆ.

ಪವನ್ ಕಲ್ಯಾಣ್ ನಟನೆಯ ಐತಿಹಾಸಿಕ ಕಥಾಹಂದರದ ಸಿನಿಮಾ 'ಹರಿಹರ ವೀರಮಲ್ಲು'. ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಪವನ್ ಕಲ್ಯಾಣ್ ರಾಜಕೀಯರಂಗದಲ್ಲೂ ತೊಡಗಿಸಿಕೊಂಡಿರುವುದರಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಾ ಸಾಗಿದೆ. ಆಂಧ್ರದಲ್ಲಿ ಮೇ 13ಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಈಗಾಗಲೇ ಚುನಾವಣೆ ಪ್ರಚಾರ ಜೋರಾಗಿದೆ.
ಪವನ್ ಕಲ್ಯಾಣ್, ಬಾಲಕೃಷ್ಣ ಸೇರಿದಂತೆ ಕೆಲ ಸಿನಿಮಾ ತಾರೆಯರು ಚುನಾವಣ ಕಣದಲ್ಲಿದ್ದಾರೆ. ಪವನ್ ಕಲ್ಯಾಣ್ ಪ್ರಚಾರಕ್ಕಾಗಿಯೇ 'ಹರಿಹರ ವೀರಮಲ್ಲು' ಟೀಸರ್ ಬಿಡುಗಡೆ ಮಾಡಿದ್ದಾರೆ ಎನ್ನುವ ಚರ್ಚೆ ಕೂಡ ನಡೀತಿದೆ. ಇನ್ನು ಮೊದಲ ನೋಟದಲ್ಲೇ ಟೀಸರ್ ಪ್ರೇಕ್ಷಕರ ಮನಗೆದ್ದಿದೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ವೀರಮಲ್ಲು ಆಗಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ.

17ನೇ ಶತಮಾನದಲ್ಲಿ ಮೊಘಲರ ಆಳ್ವಿಕೆಯ ಕಾಲದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'ಹರಿಹರ ವೀರಮಲ್ಲು' ಸಿನಿಮಾ ಕಟ್ಟಿಕೊಡಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಟೀಸರ್ ಜೊತೆಗೆ ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.
ರಾಜರು, ನವಾಬರು ಜನರ ಮೇಲೆ ದಾಳಿ ಮಾಡಿ ಅವರ ದುಡಿಮೆ ದೋಚುತ್ತಿದ್ದರೆ ಅವರ ಸಂಪತ್ತನ್ನೆಲ್ಲಾ ದೋಚಲು ಒಬ್ಬ ಬರ್ತಾನೆ ಎನ್ನುವ ಹಿನ್ನೆಲೆ ಧ್ವನಿಯೊಂದಿಗೆ ಟೀಸರ್ ಶುರುವಾಗುತ್ತದೆ. ಖಡಕ್ ಡೈಲಾಗ್ಸ್ ಹಾಗೂ ಅದ್ಧೂರಿ ವಿಷ್ಯುವಲ್ಸ್ ಜೊತೆಗೆ ಟೀಸರ್ ಹುಬ್ಬೇರಿಸುವಂತಿದೆ. ನ್ಯಾಯಕ್ಕಾಗಿ ಹೋರಾಡುವ ಯೋಧನಾಗಿ ಪವರ್ ಸ್ಟಾರ್ ಅಬ್ಬರಿಸಿದ್ದಾರೆ. ಬಹಳ ದಿನಗಳ ನಂತರ ಪವನ್ ಈ ಸಿನಿಮಾದಲ್ಲಿ ಪವರ್ ಫುಲ್ ಆ್ಯಕ್ಷನ್ ದೃಶ್ಯಗಳನ್ನು ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಮೀರ್ಜಾ ಖಾನ್ ಆಗಿ ವಿಕ್ರಂಜಿವ್ ವಿರ್ಕ್ ಬಣ್ಣ ಹಚ್ಚಿದ್ದಾರೆ. ಕ್ರಿಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಾಯಿ ಮಾಧವ ಬುರ್ರಾ ಸಂಭಾಷಣೆ, ಜ್ಞಾನ ಶೇಖರ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ವರ್ಷದ ಕೊನೆಗೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
'ಹರಿಹರ ವೀರಮಲ್ಲು' ಚಿತ್ರಕ್ಕೆ ಕ್ರಿಶ್ ಆಕ್ಷನ್ ಕಟ್ ಹೇಳುತ್ತಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಅವರು ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ. ಜ್ಯೋತಿಕೃಷ್ಣ ಎಂಬುವವರು ಚಿತ್ರವನ್ನು ಮುಂದುವರೆಸಿದ್ದಾರೆ. ರಿಲಯನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದೆ. ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆ ಆಗುವ ನಿರೀಕ್ಷೆಯಿದೆ.


Click it and Unblock the Notifications











