ಪುಷ್ಪ 2 ಸಿನಿಮಾಗೆ ಸಂಭಾವನೆ ಬೇಡ ಎಂದ ನಟ ಅಲ್ಲು ಅರ್ಜುನ್! ನಿರ್ಮಾಪಕರ ಜೊತೆಗಿನ ಡೀಲ್ ಏನು?
ಸುಕುಮಾರ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಪುಷ್ಪ ಸೀಕ್ವೆಲ್ ಸಕತ್ ಚರ್ಚೆಯಲ್ಲಿರುವ ಸಬ್ಜೆಕ್ಟ್. ನಟ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸುಳ್ಳಲ್ಲ. ಮುಂದಿನ ವರ್ಷ ಬಿಡುಗಡೆಯಾಗಲಿರುವ ತೆಲುಗಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಟಾಪ್ ಲಿಸ್ಟ್ನಲ್ಲಿದೆ ಪುಷ್ಪ 2: ದಿ ರೂಲ್.
ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್ನ ಪುಷ್ಪ ಸಿನಿಮಾಗೆ ಈ ವರ್ಷ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಲ್ಲು ಅರ್ಜುನ್ ಬಾಚಿಕೊಂಡಿದ್ದರೇ, ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಮತ್ತೊಂದು ಪ್ರಶಸ್ತಿ ಬಂದಿದೆ. ಇದರ ಬೆನ್ನಲ್ಲೇ ಸಿನಿಮಾತಂಡದಿಂದ ಹೊಸ ವಿಷಯವೊಂದು ಹೊರಬಂದಿದೆ.

ಪುಷ್ಪ 2: ದಿ ರೂಲ್ ಸಿನಿಮಾಗೆ ಸಂಭಾವನೆ ಬೇಡ ಎಂದ ನಟ ಅಲ್ಲು ಅರ್ಜುನ್!
2021 ರಲ್ಲಿ ಬಿಡುಗಡೆಯಾಗು ಸಕತ್ ಹಿಟ್ ಆಗಿದ್ದ 'ಪುಷ್ಪ: ದಿ ರೈಸ್' ಸಿನಿಮಾದ ಸೀಕ್ವೆಲ್ 'ಪುಷ್ಪ 2: ದಿ ರೂಲ್' ಚಿತ್ರೀಕರಣ ನಡೆಯುತ್ತಿದ್ದು, ನಟ ಅಲ್ಲು ಅರ್ಜುನ್ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು, ಇತ್ತೀಚಿನ ಅಪ್ಡೇಟ್ನಲ್ಲಿ, ಪುಷ್ಪ 2 ಎರಡನೇ ಭಾಗಕ್ಕಾಗಿ ಅಲ್ಲು ಅರ್ಜುನ್ ಸಂಭಾವನೆ ನಿರಾಕರಿಸಿದ್ದಾರೆ ಎಂದು ಪತ್ರಕರ್ತ ಹರಿಚರಣ್ ಪುಡಿಪ್ಪೆಡಿ ವರದಿ ಮಾಡಿದ್ದಾರೆ.
ಪುಷ್ಪ 2: ದಿ ರೂಲ್ ಸಿನಿಮಾದ ಸಂಭಾವನೆಗೆ ಬದಲಾಗಿ, ಚಿತ್ರ ಬಿಡುಗಡೆಯಾದ ನಂತರ ಬರುವ ಲಾಭದಲ್ಲಿ ಶೇಕಡಾವಾರು ಪಾಲನ್ನು ಅಲ್ಲು ಅರ್ಜುನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನಿರ್ಮಾಪಕರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪುಷ್ಪ 2: ದಿ ರೂಲ್
ಪುಷ್ಪ 2: ದಿ ರೂಲ್ನಲ್ಲಿ ಪುಷ್ಪ ಮೊದಲ ಭಾಗದಲ್ಲಿರುವ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ, ಸುನೀಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಡಾಲಿ ಧನಂಜಯ್ ಮತ್ತು ಇನ್ನೂ ಅನೇಕರು ನಟಿಸಿದ್ದು, ದೊಡ್ಡ ತಾರಾಗಣವಿದೆ. ಸಿನಿಮಾಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಈ ಬಾರಿಯ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುಷ್ಪ 2: ದಿ ರೂಲ್ ಮುಂದಿನ ವರ್ಷ ಸ್ವಾತಂತ್ರ್ಯ ದಿನದಂದು ಚಿತ್ರ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.
ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ಜೊತೆಗೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ 'ಎಎ 22' ಎಂಬ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಜುಲಾಯಿ, S/O ಸತ್ಯಮೂರ್ತಿ ಮತ್ತು ಅಲಾ ವೈಕುಂಠಪುರಮುಲೂ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಮತ್ತೆ ನಾಲ್ಕನೇ ಬಾರಿ ಒಂದಾಗುತ್ತಿದ್ದಾರೆ.
ತ್ರಿವಿಕ್ರಮ್ ಮತ್ತು ಅಲ್ಲೂ ಅರ್ಜುನ್ ಜೋಡಿಯ ಮುಂದಿನ ಚಿತ್ರವು ಭಾರತೀಯ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಸಿನಿಮಾವಾಗಲಿದ್ದು, ನಟಿ ತ್ರಿಶಾ ಕೃಷ್ಣನ್ ಅಲ್ಲು ಅರ್ಜುನ್ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಇದಲ್ಲದೆ, ಅಲ್ಲು ಅರ್ಜುನ್ ಇತ್ತೀಚೆಗೆ ಮುಂಬೈನಲ್ಲಿ ತಮಿಳು ನಿರ್ದೇಶಕ ಅಟ್ಲಿ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಇವರಿಬ್ಬು ಒಂದು ಸಿನಿಮಾ ಮಾಡಬಹುದು ಎಂಬ ವದಂತಿಯಿದೆ.


Click it and Unblock the Notifications











