ಆತ್ಮಹತ್ಯೆಗೆ ಶರಣಾದ ತೆಲುಗು ನಟ ಚಂದ್ರಕಾಂತ್ ಕೊನೆ ವಾಟ್ಸಪ್ ಚಾಟ್ ವೈರಲ್
ಇತ್ತೀಚೆಗೆ ಕನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಬಳಿಕ ಆಕೆಯ ಸ್ನೇಹಿತ ತೆಲುಗು ಕಿರುತೆರೆ ನಟ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಪವಿತ್ರಾ ಹಾಗೂ ಚಂದ್ರಕಾಂತ್ ಸಂಬಂಧದ ಬಗ್ಗೆ ಚಂದ್ರಕಾಂತ್ ಪತ್ನಿಯೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪವಿತ್ರಾ ನಿಧನದ ಬೆನ್ನಲ್ಲೇ ಚಂದ್ರಕಾಂತ್ ಕೂಡ ಜೀವ ಕಳೆದುಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಆಪ್ತರ ಜೊತೆ ಕೊನೆಯದಾಗಿ ಚಂದ್ರಕಾಂತ್ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಮಂಡ್ಯ ಮೂಲದ ಪವಿತ್ರಾ ಜಯರಾಂ ತೆಲುಗು ಕಿರುತೆರೆಯಲ್ಲಿ ಜನಪ್ರಿಯತೆ ಸಾಧಿಸಿದ್ದರು. ಮೇ 11ರಂದು ರಾತ್ರಿ ಬೆಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣಿಸುವ ವೇಳೆ ಕಾರು ಅಪಘಾತವಾಗಿತ್ತು.

ಅಪಘಾತದ ವೇಳೆ ಸ್ನೇಹಿತ ನಟ ಚಂದ್ರಕಾಂತ್, ಪವಿತ್ರಾ ಸಂಬಂಧಿ ಹಾಗೂ ಡ್ರೈವರ್ ಕಾರಿನಲ್ಲಿ ಇದ್ದರು. ಮೂರು ಜನ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅಪಘಾತವಾದ ಬೆನ್ನಲ್ಲೇ ರಕ್ತ ನೋಡಿ ಪವಿತ್ರಾ ಶಾಕ್ ಆಗಿದ್ದರು. ಅದೇ ಕಾರಣಕ್ಕೆ ಸ್ಟ್ರೋಕ್ ಆಗಿ ಆಕೆ ಜೀವ ಕಳೆದುಕೊಂಡಿದ್ದಾರೆ ಚಂದ್ರಕಾಂತ್ ಹೇಳಿದ್ದರು. ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸಿಗದೇ ಇದ್ದಿದ್ದೂ ಕೂಡ ಆಕೆ ಪ್ರಾಣ ಹಾರಿ ಹೋಗಲು ಕಾರಣ ಎಂದಿದ್ದರು.
ಆಪ್ತರು ಪವಿತ್ರಾ ಜಯರಾಂ ದುರಂತ ಅಂತ್ಯವನ್ನೇ ಜೀರ್ಣಿಸಿಕೊಳ್ಳುವ ಮುನ್ನ ಚಂದ್ರಕಾಂತ್ ಆತ್ಮಹತ್ಯೆ ಮತ್ತಷ್ಟು ಶಾಕ್ ತಂದಿತ್ತು. ಅಪಘಾತದ ವೇಳೆ ಪವಿತ್ರಾ ಜೊತೆಗಿದ್ದು ಬಚಾವಾಗಿದ್ದ ಚಂದ್ರಕಾಂತ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ತೊರೆದು ಚಂದ್ರಕಾಂತ್ ಹೊರಟುಬಿಟ್ಟಿದ್ದಾರೆ. ಚಂದ್ರಕಾಂತ್ ಹಾಗೂ ಪವಿತ್ರಾ ಜಯರಾಮ್ ರಿಲೇಷನ್ಶಿಪ್ನಲ್ಲಿ ಇದ್ದರು, ಆಕೆ ಮರಣದ ನಂತರ ಆತ ಖಿನ್ನತೆಗೆ ಒಳಗಾಗಿದ್ದ. ಅದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗ್ತಿದೆ.
ಪವಿತ್ರಾ ನಿಧನದ ಬಳಿಕ ಚಂದ್ರಕಾಂತ್ ತಮ್ಮ ಸಹ ನಟಿ ಕರಾಟೆ ಕಲ್ಯಾಣಿಗೆ ಮೆಸೇಜ್ ಮಾಡಿದ್ದಾರೆ. ಒಂದಷ್ಟು ಚಾಟ್ ಮಾಡಿದ್ದಾರೆ. ಅದರ ಸ್ಕ್ರೀನ್ಶಾಟ್ ಈಗ ವೈರಲ್ ಆಗುತ್ತಿದೆ. "ನಾನು ಹೊರಟು ಹೋಗ್ತಿನಿ. ಈ ಜನ್ಮಕ್ಕಿಷ್ಟು ಸಾಕು. ಈ ವಿಚಾರ ಯಾರಿಗೂ ಹೇಳಬೇಡ" ಎಂದು ಮೆಸೇಜ್ ಮಾಡಿದ್ದಾರೆ. ಕರಾಟೆ ಕಲ್ಯಾಣಿ ಆ ರೀತಿ ಎಲ್ಲಾ ಮಾತನಾಡ ಎಂದರೂ ಆತ ಕೇಳಿಲ್ಲ.

"ನಾನು ಹೋಗಿ ಬಿಡೋದೇ ಸರಿ. ಇಲ್ಲದಿದ್ದರೆ ಹುಚ್ಚನಾಗುತ್ತೇನೆ, ಕುಡಿದು ಕುಟುಂಬಕ್ಕೆ ತೊಂದರೆ ಕೊಡುತ್ತೇನೆ ಎಂದು ಅಳುವ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗುತ್ತಿದೆ. ಇನ್ನು ಚಂದ್ರಕಾಂತ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪವಿತ್ರಾ ಮೋಹಕ್ಕೆ ಬಿದ್ದು ನನ್ನ ಪತಿ ಹೀಗೆಲ್ಲಾ ಮಾಡಿಬಿಟ್ಟ ಎಂದು ಚಂದ್ರಕಾಂತ್ ಪತ್ನಿ ನೋವು ತೋಡಿಕೊಂಡಿದ್ದರು.
ಇನ್ನು ನಟ ಚಂದ್ರಕಾಂತ್ ಅವರ ತಂದೆ, ತಾಯಿ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಚಂದು 5 ವರ್ಷಗಳಿಂದ ಪವಿತ್ರಾ ಜೊತೆ ಇದ್ದಾನೆ. ಇಬ್ಬರೂ ಮದುವೆಯಾಗಿದ್ದೇವೆ ಎಂದು ಹೇಳಿದ್ದರು. ಅಂದಿನಿಂದ ಅವನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಪಘಾತದ ನಂತರವೂ ನನ್ನ ಮಗ ನಮ್ಮೊಂದಿಗೆ ಮಾತನಾಡಲಿಲ್ಲ. ನನ್ನ ಸೊದೆ, ನಾನು ನೋಡಲು ಹೋದಾಗ, ಅವಳು ನನ್ನನ್ನು ಹತ್ತಿರ ಬರಲು ಸಹ ಬಿಡಲಿಲ್ಲ. ಹೆಂಡತಿಗೆ ಸಾಕಷ್ಟು ನೋವು ಕೊಟ್ಟ. ಕುಡಿದು ಬಂದು ಪತ್ನಿಯನ್ನು ನಿಂದಿಸಿ ಹೊಡೆಯುತ್ತಿದ್ದ. ಆತ ಬದಲಾಗುತ್ತಾನೆ ಎಂದು ನಾವೆಲ್ಲರೂ ಕಾಯುತ್ತಿದ್ದೆವು. ಆದರೆ ಬದಲಾಗಲಿಲ್ಲ" ಎಂದು ನಟ ಚಂದ್ರಕಾಂತ್ ತಾಯಿ ಹೇಳಿದ್ದಾರೆ.


Click it and Unblock the Notifications











