ಆಂಧ್ರ ಸಿಎಂ ಜಗನ್ಗೆ ನಟ ಜ್ಯೂ. ಎನ್ಟಿಆರ್ ತಿರುಗೇಟು!
ಆಂಧ್ರ ಪ್ರದೇಶದಲ್ಲಿ ಎನ್ಟಿಆರ್ ಹೆಲ್ತ್ ಯೂನಿವರ್ಸಿಟಿ ಹೆಸರನ್ನು ವೈಎಸ್ಆರ್ ಹೆಲ್ತ್ ಯೂನಿವರ್ಸಿಟಿ ಎಂದು ಬದಲಿಸಲು ಸಿಎಂ ಜಗನ್ ಮೋಹನ್ ರೆಡ್ಡಿ ಮುಂದಾಗಿದ್ದಾರೆ. ಅಸೆಂಬ್ಲಿಯಲ್ಲಿ ಈ ವಿಚಾರವನ್ನು ಅವರು ಘೋಷಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಪಕ್ಷಗಳು ಹಾಗೂ ಮಾಜಿ ಸಿಎಂ ದಿವಂಗತ ಎನ್ಟಿಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರವಾಗಿ ಇದೀಗ ಅವರ ಮೊಮ್ಮಗ ಜ್ಯೂನಿಯರ್ ಎನ್ಟಿಆರ್ ಡೆಪ್ಲೊಮ್ಯಾಟಿಕ್ ಆಗಿ ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ತಮ್ಮ ತಂದೆ ವೈಎಸ್ ರಾಜಶೇಖರ್ ರೆಡ್ಡಿ ನೀಡಿರುವ ಕೊಡುಗೆ ಅಪಾರ. ಹಾಗಾಗಿ ಯೂನಿವರ್ಸಿಟಿಗೆ ಎನ್ಟಿಆರ್ ಹೆಸರಿಗಿಂತ ವೈಎಸ್ಆರ್ ಹೆಸರು ಇಡುವುದು ಸೂಕ್ತ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಆದರೆ ಇದನ್ನು ಯಾರೊಬ್ಬರು ಒಪ್ಪಲು ಸಿದ್ಧರಿಲ್ಲ. ಸದ್ಯ ಆಂಧ್ರ ರಾಜಕಾರಣದಲ್ಲಿ ಈ ವಿಚಾರ ಭಾರಿ ಚರ್ಚೆ ಹುಟ್ಟಾಕಿದೆ. ಎನ್ಟಿಆರ್ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎನ್ಟಿಅರ್ ಪುತ್ರ ಬಾಲಕೃಷ್ಣ ಸೇರಿದಂತೆ ಎಲ್ಲರೂ ಸಿಎಂ ಜಗನ್ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜ್ಯೂ. ಎನ್ಟಿಆರ್ ಯಾಕೆ ಸ್ಪಂದಿಸುತ್ತಿಲ್ಲ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಕೊನೆಗೂ ತಾರಕ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
"ಎನ್ಟಿಆರ್ ಹಾಗೂ ವೈಎಸ್ಆರ್ ಇಬ್ಬರೂ ಅಪಾರ ಜನಪ್ರಿಯತೆ ಗಳಿಸಿದ ಮಹಾನ್ ನಾಯಕರು. ಹೀಗೆ ಒಬ್ಬರ ಹೆಸರನ್ನು ತೆಗೆದು ಇನ್ನೊಬ್ಬರ ಹೆಸರು ಇಡುವುದರಿಂದ ಬರುವ ಗೌರವ ವೈಎಸ್ಆರ್ ಸ್ಥಾನವನ್ನು ಹೆಚ್ಚಿಸುವುದು ಇಲ್ಲ. ಎನ್ಟಿಆರ್ ಸ್ಥಾನವನ್ನು ತಗ್ಗಿಸುವುದು ಇಲ್ಲ. ಯೂನಿವರ್ಸಿಟಿ ಹೆಸರು ಬದಲಿಸುವುದರಿಂದ ಎನ್ಟಿಆರ್ ಗಳಿಸಿದ ಕೀರ್ತಿ, ತೆಲುಗು ಚರಿತ್ರೆಯಲ್ಲಿ ಅವರ ಸ್ಥಾನವನ್ನು, ತೆಲುಗು ಜನರ ಹೃದಯದಲ್ಲಿ ಇರುವ ಅವರ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ" ಎಂದು ಜ್ಯೂನಿಯರ್ ಎನ್ಟಿಆರ್ ಬರೆದುಕೊಂಡಿದ್ದಾರೆ.

ತಾತನಿಗೆ ಆದ ಅವಮಾನಕ್ಕೆ ಪ್ರತಿಯಾಗಿ ಜ್ಯೂನಿಯರ್ ಎನ್ಟಿಆರ್ ಗರಂ ಆಗಿ ಸಿಎಂ ಜಗನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಎನ್ಟಿಆರ್ ಹಾಗೂ ವೈಎಸ್ಆರ್ ಇಬ್ಬರನ್ನು ಸಮಾನವಾಗಿ ನೋಡುವ ಮೂಲಕ ತುಂಬಾ ಜಾಗರೂಕತೆಯಿಂದ ನಡೆದುಕೊಂಡಿದ್ದಾರೆ. ಈ ಹಿಂದೆ ಕೂಡ ಇಂತಹ ಸಂದರ್ಭಗಳಲ್ಲಿ ಇದೇ ರೀತಿ ನಟ ತಾರಕ್ ವಿವಾದ ಎದುರಾಗದಂತೆ ಜಾಣತನದಿಂದ ವ್ಯವಹರಿಸಿದ್ದರು. ಜ್ಯೂ. ಎನ್ಟಿಆರ್ ಹೇಳಿಕೆ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸ್ತಿದ್ದಾರೆ. ತಾರಕ್ ಭವಿಷ್ಯದಲ್ಲಿ ಪಾಲಿಟಿಕ್ಸ್ಗೆ ಬರಬೇಕು ಎಂದುಕೊಂಡಿದ್ದರೆ ಈ ರೀತಿಯ ಹೇಳಿಕೆ ಕೊಡುವುದು ಸರಿ ಅಲ್ಲ ಎನ್ನುತ್ತಿದ್ದಾರೆ.
ಜ್ಯೂನಿಯರ್ ಎನ್ಟಿಆರ್ ರಾಜಕೀಯಕ್ಕೆ ಬರ್ತಾರೆ, ತಾತನ ಸ್ಥಾನವನ್ನು ತುಂಬುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ತಾರಕ್ ಮಾತ್ರ ಸಿನಿಮಾ ಬಿಟ್ಟು ರಾಜಕೀಯದ ಕಡೆ ಮುಖ ಮಾಡುತ್ತಿಲ್ಲ. ಮತ್ತೊಂದು ಕಡೆ ಎನ್ಟಿಆರ್ ಕಟ್ಟಿದ ತೆಲುಗು ದೇಶಂ ಪಕ್ಷ ಈಗ ಛಿದ್ರವಾಗಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪಕ್ಷದ ಬಲ ಕುಗ್ಗಿದೆ. ಮತ್ತೆ ತೆಲುಗುದೇಶಂ ಪಕ್ಷದ ಸುವರ್ಣ ಯುಗ ಮರಳಲು ಜ್ಯೂನಿಯರ್ ಎನ್ಟಿಆರ್ ನೇತೃತ್ವ ವಹಿಸಿಕೊಳ್ಳಬೇಕು ಎನ್ನುವುದು ಬಹಳ ಜನರ ಆಸೆ. ಆದರೆ ಇದಕ್ಕೆ ಎನ್ಟಿಆರ್ ಆಗಿ ಮಾತ್ರ ಸಿದ್ದರಿಲ್ಲ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











