ಚುನಾವಣೆಯಲ್ಲಿ ಸೋಲು: 'ಮಾ' ಸಂಘದಿಂದ ನಾಗಬಾಬು ಔಟ್
ಬಹಳ ಪ್ರತಿಷ್ಠೆಯಿಂದ ನಡೆ ತೆಲುಗು ಕಲಾವಿದರ ಸಂಘದ ಚುನಾವಣೆಯಲ್ಲಿ ಮೆಗಾಸ್ಟಾರ್ ಕುಟುಂಬ ಬೆಂಬಲಿತ ಅಭ್ಯರ್ಥಿ ಪ್ರಕಾಶ್ ರಾಜ್ ಸೋಲು ಕಂಡಿದ್ದಾರೆ. ಇದರ ಬೆನ್ನಲ್ಲೆ ಹಿರಿಯ ನಟ-ನಿರ್ಮಾಪಕ ನಾಗಬಾಬು 'ಮಾ' (ಮೂವಿ ಆರ್ಟಿಸ್ಟ್ಸ್ ಅಸೋಸಿಯೇಶನ್) ಸಂಸ್ಥೆಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದಾರೆ.
ಚುನಾವಣೆಗೂ ಮುಂಚೆ ನಟ ಪ್ರಕಾಶ್ ರಾಜ್ ತಂಡದ ಪರವಾಗಿ ನಾಗಬಾಬು ಪ್ರಚಾರ ಮಾಡಿದ್ದರು. ಪ್ರತಿಸ್ಪರ್ಧಿ ಮಂಚು ವಿಷ್ಣು ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿ, ಈ ಸಲ ಚುನಾವಣೆಯಲ್ಲಿ ವಿಷ್ಣು ಸೋಲು ಖಂಡಿತಾ ಎಂದಿದ್ದರು. ಆದರೆ, ಮಾ ಚುನಾವಣೆಯಲ್ಲಿ ಫಲಿತಾಂಶ ನಾಗಬಾಬು ಅವರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಮಂಚು ವಿಷ್ಣು ನಟ ಪ್ರಕಾಶ್ ರಾಜ್ ವಿರುದ್ಧ ಗೆಲುವು ಸಾಧಿಸಿ ಮಾ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದರ ಬೆನ್ನಲ್ಲೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿರುವುದಾಗಿ ಪ್ರಕಟಣೆ ನೀಡಿದ್ದಾರೆ ನಾಗಬಾಬು. ''ಪ್ರಾದೇಶಿಕತೆ ಮತ್ತು ಸಂಕುಚಿತ ಮನೋಭಾವದಿಂದ ಕಿತ್ತಾಡುತ್ತಿರುವ ಚಲನಚಿತ್ರ ಕಲಾವಿದರ ಸಂಘ (ಮೂವಿ ಆರ್ಟಿಸ್ಟ್ಸ್ ಅಸೋಸಿಯೇಶನ್) ದಲ್ಲಿ ನಾನು ಮುಂದುವರಿಯಲು ಬಯಸುವುದಿಲ್ಲ. ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ'' ಎಂದು ನಾಗಬಾಬು ಪೋಸ್ಟ್ ಹಾಕಿದ್ದಾರೆ.

ಮಾ ಚುನಾವಣೆ ಗೆದ್ದ ಮಂಚು ವಿಷ್ಣು
ಸಿಂಡಿಕೇಟ್ ಮಾದರಿಯಲ್ಲಿ ಚುನಾವಣೆ ನಡೆದಿದ್ದು, ಮಂಚು ವಿಷ್ಣು ಸಿಂಡಿಕೇಟ್ನಿಂದ ಸ್ಪರ್ಧಿಸಿದ್ದವರಿಗೆ ಹೆಚ್ಚು ಮಂದಿಗೆ ಗೆಲುವು ದೊರಕಿದೆ. ಮಂಚು ವಿಷ್ಣು ಸುಮಾರು 400 ಮತಗಳ ಅಂತರದಲ್ಲಿ ಪ್ರಕಾಶ್ ರೈ ಅವರನ್ನು ಸೋಲಿಸಿದ್ದಾರೆ. ಆದರೆ ಉಪಾಧ್ಯಕ್ಷ ಸ್ಥಾನವನ್ನು ಪ್ರಕಾಶ್ ರೈ ಸಿಂಡಿಕೇಟ್ನಿಂದ ಸ್ಪರ್ಧಿಸಿದ್ದ ಶ್ರೀಕಾಂತ್ ಗೆದ್ದುಕೊಂಡಿದ್ದಾರೆ.
ಪ್ರಕಾಶ್ ರೈ ಪ್ಯಾನಲ್ನಿಂದ ಸ್ಪರ್ಧಿಸಿದ್ದ ಜೀವಿತಾ ರಾಜಶೇಖರ್ ಸೋತಿದ್ದಾರೆ. ಜೀವಿತಾ ವಿರುದ್ಧ ರಘುಬಾಬು ಗೆಲುವು ಸಾಧಿಸಿದ್ದಾರೆ. ಬ್ಯಾನರ್ಜಿ ವಿರುದ್ಧ ಮದ್ದಾಲ ರವಿ ಗೆಲುವು ಸಾಧಿಸಿದ್ದಾರೆ. ಪ್ರಕಾಶ್ ರೈ ಪ್ಯಾನಲ್ನಿಂದ ಸ್ಪರ್ಧಿಸಿದ್ದ ಅನುಸೂಯಾ, ಸುರೇಶ್ ಕೊಂಡೇಟಿ, ಶಿವಾರೆಡ್ಡಿ, ಕೌಶಿಕ್ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಪ್ಯಾನಲ್ನಿಂದ ಸ್ಪರ್ಧಿಸಿದ್ದ 11 ಮಂದಿ ಗೆಲುವು ಸಾಧಿಸಿದ್ದಾರೆ.


Click it and Unblock the Notifications











