SSMB29; ಮಹೇಶ್ ಚಿತ್ರಕ್ಕಾಗಿ ನಾಸರ್ ಮೊರೆ ಹೋದ ರಾಜಮೌಳಿ!
ಎಸ್. ಎಸ್ ರಾಜಮೌಳಿ ಮುಂದಿನ ಸಿನಿಮಾ ಇನ್ನು ಶುರುವಾಗಲಿಲ್ಲ. 'RRR' ಸಿನಿಮಾ ಬಂದೋಗಿ 2 ವರ್ಷ ಕಳೆದರೂ ಹೊಸ ಸಿನಿಮಾ ಬಗ್ಗೆ ಯಾವುದೇ ಸುಳಿವು ಸಿಗ್ತಿಲ್ಲ. ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದಾಗಿ ಜಕ್ಕಣ್ಣ ಘೋಷಿಸಿದ್ದಾರೆ. ತೆರೆಮರೆಯಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಿವೆ.
ಅಂತೂ ಇಂತೂ ಮಹೇಶ್ ಬಾಬು- ರಾಜಮೌಳಿ ಸಿನಿಮಾ ಶುರುವಾಗುವ ಸಮಯ ಬಂದಿದೆ. ಮುಂದಿನ ತಿಂಗಳು ಸಿನಿಮಾ ಮುಹೂರ್ತ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಕಲಾವಿದರಿಗೆ ವರ್ಕ್ಶಾಪ್ ಶುರುವಾಗುತ್ತಿದೆ. ಮೌಳಿ ತಮ್ಮ ಸಿನಿಮಾಗಳ ಚಿತ್ರೀಕರಣ ಆರಂಭಿಸುವ ಮುನ್ನ ಇಂತಹ ವರ್ಕ್ಶಾಪ್ಗಳನ್ನು ನಡೆಸಿ ಕಲಾವಿದರಿಗೆ ನಟನೆಯ ಒಂದಷ್ಟು ಪಾಠಗಳನ್ನು ಕಲಿಸುತ್ತಾರೆ. SSMB29 ವಿಚಾರದಲ್ಲೂ ಇದೇ ಪ್ರಯತ್ನ ನಡೆಯುತ್ತಿದೆ ಎನ್ನಲಾಗ್ತಿದೆ.

ವಿಜಯೇಂದ್ರ ಪ್ರಸಾದ್ ಈ ಗ್ಲೋಬ್ಟ್ರೋಟಿಂಗ್ ಆಕ್ಷನ್ ಅಡ್ವೆಂಚರ್ ಜಾನರ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಂದರೆ ಈ ಚಿತ್ರದ ಕಥೆ ದೇಶ ವಿದೇಶಗಳಲ್ಲಿ ಸಾಗುತ್ತದೆ ಎನ್ನಲಾಗ್ತಿದೆ. ಜಕ್ಕಣ್ಣ ತಮ್ಮ ತಂಡದ ಜೊತೆ ಸೇರಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಫ್ಯಾಮಿಲಿ ಸಮೇತ ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಕೂಡಲೇ ರಾಜಮೌಳಿ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
ಕೆ. ಎಲ್ ನಾರಾಯಣ SSMB29 ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಹಾಗಾಗಿ ಇದು ಮಹೇಶ್ ಬಾಬು 29ನೇ ಸಿನಿಮಾ ಎನ್ನುವ ಕಾರಣಕ್ಕೆ ಸದ್ಯಕ್ಕೆ SSMB29 ಎಂದು ಕರೆಯಲಾಗುತ್ತಿದೆ. ಹಾಲಿವುಡ್ ಸ್ಟುಡಿಯೋ ಕೂಡ ಈ ಸಿನಿಮಾ ನಿರ್ಮಾಣದಲ್ಲಿ ರಾಜಮೌಳಿ ಜೊತೆ ಕೈ ಜೋಡಿಸುತ್ತಿದ್ದಾರೆ. ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ SSMB29 ಚಿತ್ರ ಕಟ್ಟಿಕೊಡುವ ಪ್ರಯತ್ನ ನಡೆಯುತ್ತಿದೆ.
ಸದ್ಯ ರಾಜಮೌಳಿ ತಮಿಳು ನಟ ನಾಸರ್ ಜೊತೆ ಚರ್ಚಿಸಿದ್ದಾರಂತೆ. ಹಾಗಂತ ಯಾವುದೋ ಪಾತ್ರಕ್ಕಾಗಿ ಅಲ್ಲ. ಬದಲಿಗೆ ಕಲಾವಿದರ ವರ್ಕ್ಶಾಪ್ ನೇತೃತ್ವ ವಹಿಸಲು ಕೇಳಿಕೊಂಡಿದ್ದಾರೆ ಎನ್ನಲಾಗ್ತಿದೆ. ವರ್ಕ್ಶಾಪ್ನಲ್ಲಿ ಕಥೆಗೆ ತಕ್ಕಂತೆ ಕಲಾವಿದರಿಗೆ ಒಂದಷ್ಟು ಟಿಪ್ಸ್ ನೀಡಿ ಅವರನ್ನು ತಾಲೀಮುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿಂದೆ ಕೂಡ ಮೌಳಿ ತಮ್ಮ ಸಿನಿಮಾಗಳಲ್ಲಿ ಈ ರೀತಿ ಮಾಡಿದ್ದರು.

ಮೌಳಿ ನಿರ್ದೇಶನದ ನಾಸರ್ ಸಹ ನಟಿಸಿದ್ದಾರೆ. ಇದೀಗ ನಾಸರ್ ನೇತೃತ್ವದಲ್ಲಿ SSMB29 ಚಿತ್ರದ ವರ್ಕ್ಶಾಪ್ ನಡೆಯಲಿದೆಯಂತೆ. ಮಹೇಶ್ ಬಾಬು ಸಹ ಇದರಲ್ಲಿ ಭಾಗವಹಿಸಲಿದ್ದಾರೆ. ರಾಜಮೌಳಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿ ಮುಹೂರ್ತ ನೆರವೇರಿಸುವ ಸಾಧ್ಯತೆಯಿದೆ. ಈ ಸುದ್ದಿ ಕೇಳಿ ಸೂಪರ್ ಸ್ಟಾರ್ ಫ್ಯಾನ್ಸ್ ಅಂತೂ ಖುಷಿಯಾಗಿದ್ದಾರೆ.
SSMB29 ಚಿತ್ರದ ತಾರಾಗಣಕ್ಕೆ ಈ ಹಿಂದೆ ಹಲವರ ಹೆಸರು ಕೇಳಿಬಂದಿತ್ತು. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇಂಡೋನೇಷ್ಯಾ ನಟಿ ಚೆಲ್ಸಿಯಾ ಐಲಾನ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ನಿರ್ದೇಶಕ ರಾಜಮೌಳಿ ಚಿತ್ರದಿಂದ ಚಿತ್ರಕ್ಕೆ ತಮ್ಮ ಸಿನಿಮಾ ಮೇಕಿಂಗ್ ಗುಣಮಟ್ಟ ಹೆಚ್ಚಿಕೊಳ್ಳುತ್ತಾ ಬಂದಿದ್ದಾರೆ. 'ಬಾಹುಬಲಿ' ಸರಣಿ ಬಳಿಕ 'RRR' ಸಿನಿಮಾ ಕಟ್ಟಿಕೊಟ್ಟು ಗೆದ್ದಿದ್ದರು. ಇದೀಗ ಮಹೇಶ್ ಬಾಬು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಜಕ್ಕಣ್ಣ ಕರಿಯರ್ನಲ್ಲೇ ಬಹಳ ದೊಡ್ಡ ಸಿನಿಮಾ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ಭಾರೀ ಬಜೆಟ್, ಸ್ಟಾರ್ಕಾಸ್ಟ್ ಇರಲಿದೆ. ಸೆಟ್ಟೇರುವ ಮೊದ್ಲೆ SSMB29 ಸಿನಿಮಾ ಕುತೂಹಲ ಮೂಡಿಸಿದೆ.


Click it and Unblock the Notifications











