ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ
ನಾಲ್ಕು ವರ್ಷಗಳ ಹಳೆಯ ಡ್ರಗ್ಸ್ ಪ್ರಕರಣ ಸಂಬಂಧ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಾಟಿ ಇಂದು (ಸೆಪ್ಟಂಬರ್ 08) ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಬೆಳಗ್ಗೆ ಹೈದರಾಬಾದ್ ನ ಇಡಿ (ಜಾರಿ ನಿರ್ದೇಶನಾಲಯ) ಕಚೇರಿಗೆ ಆಗಮಿಸಿದ ನಟ ರಾಣಾ ದಗ್ಗುಬಾಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ.
ಈಗಾಗಲೇ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ ಕೌರ್ ಮತ್ತು ರಕುಲ್ ಪ್ರೀತ್ ಸಿಂಗ್ ವಿಚಾರಣೆ ಎದುರಿಸಿದ್ದಾರೆ. ಇಂದು ರಾಣಾ ಸರದಿಯಾಗಿದ್ದು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
2017ರ ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ತೆಲುಗಿನ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಅದರಂತೆ ಸೆಲೆಬ್ರಿಟಿಗಳು ತಮಗೆ ನೀಡಿದ ದಿನಾಂಕದಂದು ವಿಚಾರಣೆಗೆ ಎದುರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ 2017ರಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗವನ್ನು ತಲ್ಲಣಗೊಳಿಸಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಟಾಲಿವುಡ್ ಕೆಲವು ಸೆಲೆಬ್ರಿಟಿಗಳಿಗೆ ಸಮನ್ಸ್ ನೀಡಿತ್ತು. ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ಪುರಿ ಜಗನ್ನಾಥ್, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 13 ಜನರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಸಮನ್ಸ್ ಜಾರಿ ಮಾಡಿತ್ತು.

ಆಗಸ್ಟ್ 31ರಂದು ಪುರಿ ಜಗನ್ನಾಥ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಪುರಿ ಜಗನ್ನಾಥ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಸುಮಾರು ಹತ್ತು ಗಂಟೆಗಳ ಕಾಲ ಇಡಿ ಅಧಿಕಾರಿಗಳಿಂದ ಪ್ರಶ್ನೆಗಳನ್ನು ಎದುರಿಸಿದರು. ಸೆಪ್ಟಂಬರ್ 2ರಂದು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಇಡಿ ಅಧಿಕಾರಿಗಳ ಮುಂದಿ ಹಾಜರಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಚಾರ್ಮಿ ವಿಚಾರಣೆ ಎದುರಿಸಿದರು. ಬಳಿಕ ಸೆಪ್ಟಂಬರ್ 3ರಂದು ರಕುಲ್ ಪ್ರೀತ್ ಸಿಂಗ್ ವಿಚಾರಣೆಗೆ ಹಾಜರಾಗಿದ್ದರು. ಇನ್ನು ಅನೇಕ ಮಂದಿಯ ವಿಚಾರಣೆ ಬಾಕಿ ಇದ್ದು, ಒಬ್ಬರೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.
2017ರ ಡ್ರಗ್ಸ್ ಪ್ರಕರಣ ಸಂಬಂಧ ಹೈದರಾಬಾದ್ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ (ಎಸ್ಐಟಿ) ಟಾಲಿವುಡ್ ನ 12 ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆಯೂ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿತ್ತು. ಮನಿ ಲಾಂಡರಿಂಗ್ ಸಂಬಂಧಿಸಿದಂತೆ ಈಗ 13 ಸೆಲೆಬ್ರಿಟಿಗಳನ್ನು ಪ್ರಶ್ನೆ ಮಾಡಲಾಗುತ್ತಿದೆ.
ಇನ್ನು ರಾಣಾ ದಗ್ಗುಬಾಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ ರಾಣಾ 2010ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ತೆಲುಗು ಸಿನಿಮಾರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ ರಾಣಾ ಬಳಿಕ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಹಿಂದಿಯಲ್ಲಿ ರಾಣಾ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಬಾಹುಬಲಿ ಸಿನಿಮಾ ರಾಣಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಈ ಸಿನಿಮಾ ಬಳಿಕ ರಾಣಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಅವಕಾಶಗಳು ಸಹ ಹೆಚ್ಚಾಯಿತು. ಇದೀಗ ರಾಣಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಣಾ ವಿರಾಟ ಪರ್ವಂ ಸಿನಿಮಾ ಮುಗಿಸಿದ್ದಾರೆ. ಜೊತೆಗೆ ಭೀಮಲ ನಾಯಕ್ ಸಿನಿಮಾದ ಚಿತ್ರೀಕರಣದಲ್ಲಿ ರಾಣಾ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಅಯ್ಯಪ್ಪನುಮ್ ಕೋಶಿಯುಮ್ ಸಿನಿಮಾದ ರಿಮೇಕ್ ಆಗಿದೆ. ತೆಲುಗು ಜೊತೆಗೆ ರಾಣಾ ಹಿಂದಿಯ ಒಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.


Click it and Unblock the Notifications











