ಹೇಳಿದಂತೆ ತೆಲಂಗಾಣ ಸಚಿವ ಕೆಟಿಆರ್ ಭೇಟಿ ಮಾಡಿದ ಸೋನು ಸೂದ್
ತಿಂಗಳ ಹಿಂದೆ ನಟ ಸೋನು ಸೂದ್ ಮತ್ತು ತೆಲಂಗಾಣ ಸಚಿವ ಕೆಟಿಆರ್ ನಡುವಿನ ಟ್ವಿಟ್ಟರ್ ಚರ್ಚೆ ಗಮನ ಸೆಳೆದಿತ್ತು. ಈ ಚರ್ಚೆ ನಡೆದು ಒಂದು ತಿಂಗಳಿಗೆ ಕೆಟಿಆರ್ ಹಾಗೂ ಸೋನು ಸೂದ್ ಪರಸ್ಪರ ಭೇಟಿಯಾಗಿದ್ದಾರೆ.
ತೆಲಂಗಾಣ ಮಿನಿಸ್ಟರ್ ಕೆಟಿ ರಾಮಾರಾವ್ ಅವರನ್ನು ಇಂದು (ಜುಲೈ 6) ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸೋನು ಸೂದ್ ಯೋಗಕ್ಷಮೆ ವಿಚಾರಿಸಿದರು. ಈ ವೇಳೆ 'ಮಹರ್ಷಿ' ಚಿತ್ರದ ನಿರ್ದೇಶಕ ವಂಶಿ ಪೈದಿಪಲ್ಲಿ ಸಹ ಜೊತೆಯಲ್ಲಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ದೇಶಕ್ಕೆ ಮಾದರಿಯಾಗಿರುವ ಸೋನು ಸೂದ್ ಬಗ್ಗೆ ಸಚಿವ ಕೆಟಿಆರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೋನು ಸೂದ್ ರೀತಿ ಕೆಟಿಆರ್ ಸಹ ಜನರಿಗೆ ಸಹಾಯ ಮಾಡ್ತಿದ್ದರು. ಈ ಹಿನ್ನೆಲೆ ಟ್ವಿಟ್ಟರ್ನಲ್ಲಿ ವ್ಯಕ್ತಿಯೊಬ್ಬ ಕೆಟಿಆರ್ ಕುರಿತು 'ಸರ್ ನೀವು ಸೂಪರ್ ಹೀರೋ' ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕೆಟಿಆರ್ 'ಸೂಪರ್ ಹೀರೋ ನಾನಲ್ಲ, ಸೋನು ಸೂದ್' ಎಂದಿದ್ದರು.

ಕೆಟಿಆರ್ ಅವರ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಸೋನು ಸೂದ್, ''ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಆಭಾರಿಯಾಗಿದ್ದೇನೆ ಸರ್. ಆದರೆ, ನಿಮ್ಮ ನಾಯಕತ್ವದಲ್ಲಿ ತೆಲಂಗಾಣ ರಾಜ್ಯ ಬಹಳ ಅಭಿವೃದ್ದಿ ಹೊಂದಿದೆ. ನೀವು ನಿಜವಾದ ಹೀರೋ. ತೆಲಂಗಾಣ ನನ್ನ ಎರಡನೇ ಮನೆ. ಅಲ್ಲಿನ ಜನ ನನಗೆ ಕೆಲಸದ ಜೊತೆ ಸಾಕಷ್ಟು ಪ್ರೀತಿ ನೀಡಿದ್ದಾರೆ'' ಎಂದು ಧನ್ಯವಾದ ಅರ್ಪಿಸಿದರು.
ಸೋನು ಸೂದ್ ಮತ್ತು ತೆಲಂಗಾಣ ಮಂತ್ರಿ ಕೆಟಿಆರ್ ಸಂಭಾಷಣೆ ಇಲ್ಲಿಗೆ ಮುಗಿದಿಲ್ಲ. ನಂತರ ಸೋನು ಸೂದ್ ಟ್ವೀಟ್ಗೆ ಮತ್ತೆ ಪ್ರತಿಕ್ರಿಯಿಸಿದ ಕೆಟಿಆರ್ ''ತೆಲಂಗಾಣಕ್ಕೆ ಬಂದಾಗ ಭೇಟಿಯಾಗೋಣ, ಒಟ್ಟಿಗೆ ಹೈದರಾಬಾದ್ ಬಿರಿಯಾನಿ ತಿನ್ನೋಣ'' ಅಂದಿದ್ದರು. ಇದಕ್ಕೆ ಸೋನು ಟ್ವೀಟ್ ಮಾಡಿ ''ನಾನು ಎದುರು ನೋಡುತ್ತಿದ್ದೇನೆ ಸರ್, ಖಂಡಿತಾ ಸಿಗೋಣ'' ಎಂದು ಉತ್ತರಿಸಿದ್ದರು.
ಅಂದು ಹೇಳಿದಂತೆ ನಟ ಸೋನು ಸೂದ್ ಈಗ ತೆಲಂಗಾಣ ಸಚಿವ ಕೆಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಹೈದರಾಬಾದ್ ಬಿರಿಯಾನಿ ತಿಂದ್ರಾ? ಆ ಬಗ್ಗೆ ಗೊತ್ತಿಲ್ಲ.


Click it and Unblock the Notifications











