ತೆಲುಗು ನಟ ಶ್ರೀವಿಷ್ಣು ಗಂಭಿರ: ಆಸ್ಪತ್ರೆಗೆ ದಾಖಲು
ತೆಲುಗು ಯುವ ನಟ ಶ್ರೀವಿಷ್ಣು ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀವಿಷ್ಣುಗೆ ಕಳೆದ ಕೆಲವು ದಿನಗಳಿಂದಲೂ ಜ್ವರ ಇತ್ತು, ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ಮಾಡಿದ್ದ ಶ್ರೀವಿಷ್ಣು ಮನೆಯ ಸಮೀಪದ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ ಪಡೆದಿದ್ದಾರೆ. ಆದರೆ ಶ್ರೀವಿಷ್ಣುಗೆ ಜ್ವರ ತೀವ್ರವಾಗಿದ್ದು ಗಂಭೀರ ಸ್ಥಿತಿ ತಲುಪಿದ್ದಾರೆ ಎನ್ನಲಾಗಿದೆ.
ಶ್ರೀವಿಷ್ಣು ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ಖಾತ್ರಿಯಾಗಿದ್ದು, ಕೂಡಲೇ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಪ್ಲೇಟ್ಲೇಟ್ಸ್ ಸಂಖ್ಯೆ ಕಡಿಮೆಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಐಸಿಯುವಿನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀವಿಷ್ಣು ಪ್ರಾಣಕ್ಕೆ ಅಪಾಯವಿಲ್ಲ ಎನ್ನಲಾಗುತ್ತಿದೆಯಾದರೂ ಆರೋಗ್ಯ ಸ್ಥಿತಿ ಪೂರ್ಣವಾಗಿ ಸುಧಾರಿಸಿಲ್ಲ ಎಂದು ಶ್ರೀವಿಷ್ಣು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶ್ರೀವಿಷ್ಣು 'ಅಲ್ಲೂರಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಕೆಲವು ದಿನಗಳ ಹಿಂದೆ ಅಲ್ಲೂರಿ ಸೀತಾರಾಮರಾಜು ಜಯಂತಿಯಂದು ಸಿನಿಮಾದ ಟೀಸರ್ ಸಹ ಬಿಡುಗಡೆ ಮಾಡಿದ್ದರು. ಸಿನಿಮಾ ಬಿಡುಗಡೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು, ಈ ಸಮಯದಲ್ಲಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ.
ತೆಲುಗು ನಟ ಶ್ರೀವಿಷ್ಣು, 'ನಾದಿ ನೀದಿ ಒಕೇ ಕತ' ಸೇರಿದಂತೆ 'ವಸಂತ ರಾಯಲು', 'ಬ್ರೋಚೆವಾರೆವರುರಾ', 'ತಿಪ್ಪರಾ ಮೀಸ', 'ರಾಜರಾಜ ಚೋರ', 'ಅರ್ಜುನ ಪಾಲ್ಗುಣ', ರಾಮ್ ಪೋತಿನೇನಿ ಜೊತೆ 'ವುನ್ನೇದಿ ಒಕ್ಕಟೆ ಜೀವಿತಂ', 'ಮೆಂಟಲ್ ಮದಿಲೊ', 'ಭಲಾ ಥಾಂಡನಾ' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











