ಧಿಮಾಕು ತೋರಿಸಿ ಇಂಡಸ್ಟ್ರಿನ ಎದುರಾಕಿಕೊಂಡ್ರಾ ದೇವರಕೊಂಡ? 'ಅರ್ಜುನ್ ರೆಡ್ಡಿ' ಕಥೆ ಮುಗೀತಾ?
ಎಷ್ಟೇ ದೊಡ್ಡವರಾದರೂ ತಗ್ಗಿ ಬಗ್ಗಿ ನಡೀಬೇಕು. ಇಲ್ಲ ಅಂದರೆ ಕಷ್ಟ. ಸಕ್ಸಸ್ ಇವತ್ತು ಬರುತ್ತೆ ನಾಳೆ ಹೋಗುತ್ತೆ. ನಮ್ಮ ವಿನಯ, ವಿಧೇಯತೆ ನಮ್ಮನ್ನು ಕಾಪಾಡುತ್ತೆ. ಇದೇ ಮಾತನ್ನು ಈಗ ಎಲ್ಲರೂ ತೆಲುಗು ನಟ ವಿಜಯ್ ದೇವರಕೊಂಡಗೆ ಹೇಳುತ್ತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ ಗೆದ್ದು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ವಿಜಯ್ ಭೂಮಿ ಮೇಲೆ ನಿಲ್ಲುತ್ತಿಲ್ಲ. ಅದಕ್ಕೆ ಈಗ 'ಲೈಗರ್' ಸಿನಿಮಾ ಮೂಲಕ ಪೆಟ್ಟು ಬಿದ್ದಿದೆ ಎಂದು ಟಾಲಿವುಡ್ನಲ್ಲಿ ಕೆಲವರು ಮಾತನಾಡುತ್ತಿದ್ದಾರೆ.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಮಧ್ಯವರ್ಗದ ಕುಟುಂಬದಿಂದ ಬಂದ ವಿಜಯ್ ದೇವರಕೊಂಡ ಸ್ಟಾರ್ ಆಗಿ ಗೆದ್ದಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ವಿಜಯ್ ಆಟಿಟ್ಯೂಡ್ ಬಗ್ಗೆ ಸಿಕ್ಕಾಪಟ್ಟೆ ಕಂಪ್ಲೇಂಟ್ ಇದೆ. ಹೋದಲ್ಲಿ ಬಂದಲ್ಲಿ ಧಿಮಾಕಿನಿಂದ ನಡೆದುಕೊಳ್ಳುತ್ತಿದ್ದಾರಂತೆ. ಇದು ತೆಲುಗು ಚಿತ್ರರಂಗದಲ್ಲಿ ಕೆಲವರಿಗೆ ಇಷ್ಟವಾಗುತ್ತಿಲ್ಲ ಎನ್ನುವ ಟಾಕ್ ಶುರುವಾಗಿದೆ. ಕೆಲವರು ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಪರೋಕ್ಷವಾಗಿ ಹೇಳುತ್ತಿದ್ದಾರೆ. ವಿಜಯ್ ಪ್ರತಿಭಾವಂತ ನಿಜ ಆದರೆ ಬಹಳ ಆಟಿಟ್ಯೂಡ್ ಇದೆ ಅನ್ನುವುದು ಕೆಲವರ ವಾದ.
ವಿಜಯ್ ದೇವರಕೊಂಡಗಿಂತಲೂ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿವರು ಇನ್ನು ತಗ್ಗಿ ಬಗ್ಗಿ ನಡೆಯುತ್ತಿದ್ದಾರೆ. ವಿಜಯ್ ರೀತಿಯಲ್ಲಿ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಸಕ್ಸಸ್ ಕಂಡವರು ಇದ್ದಾರೆ. ಆದರೆ ಅವರೆಲ್ಲಾ ಕಾಮ್ ಆಗಿ ಇದ್ದಾರೆ. ಯಾರೂ ಇಷ್ಟೆಲ್ಲಾ ಆರ್ಭಟ ಮಾಡಲಿಲ್ಲ. ಕೊಟ್ಟಿರುವ 2 ಹಿಟ್ಗೆ ಇಷ್ಟೆಲ್ಲಾ ಓವರ್ ಆಕ್ಟಿಂಗ್ ಯಾಕೆ? ಎನ್ನುವ ಪ್ರಶ್ನೆ ಎದ್ದಿದೆ. ಟಾಲಿವುಡ್ ಸ್ಟಾರ್ಗಳೆಲ್ಲಾ ಈತನ ಸಕ್ಸಸ್ಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಈತ ಮಾತ್ರ ತಾನೊಬ್ಬನೇ ಸ್ಟಾರ್ ಎನ್ನುವಂತೆ ಆಡುತ್ತಿದ್ದಾನೆ. 'ಲೈಗರ್' ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲೂ ವಿಜಯ್ ಇದೇ ರೀತಿ ಆಟಿಟ್ಯೂಡ್ ತೋರಿಸಿದ್ದರು. ಸಿನಿಮಾ ಸೋತ ಮೇಲೆ ಬಾಲ ಮುದುರಿಕೊಂಡಿದ್ದಾನೆ ಎನ್ನುತ್ತಿದ್ದಾರೆ ಕೆಲವರು. ಈತನ ನಡವಳಿಕೆ ಚಿತ್ರರಂಗದಲ್ಲಿ ಕೆಲ ಹಿರಿಯರಿಗೆ ಇರಿಸು ಮುರಿಸು ತಂದಿದೆ.

ಸುದ್ದಿಗೋಷ್ಠಿಯಲ್ಲಿ ಕಾಲ್ಮೇಲೆ ಕಾಲ್
'ಲೈಗರ್' ಸಿನಿಮಾ ಪ್ರಮೋಷನ್ ವೇಳೆ ಥೇಟ್ 'ಅರ್ಜುನ್ ರೆಡ್ಡಿ' ಸ್ಟೈಲ್ನಲ್ಲಿ ವಿಜಯ್ ದೇವರಕೊಂಡ ಡೈಲಾಗ್ ಹೊಡೆದುಕೊಂಡು ಬಂದಿದ್ದರು. ನಾವು ಅದ್ಭುತ ಸಿನಿಮಾ ಮಾಡಿದ್ದೀವಿ, 2 ವರ್ಷ ಕಷ್ಟಪಟ್ಟಿದ್ದೀವಿ ಎಂದಿದ್ದರು. ಸುದ್ದಿಗೋಷ್ಠಿಯಲ್ಲಿ ಒಮ್ಮೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರೆ ನೀವು ಕಾಲ್ಮೇಲೆ ಕಾಲ್ ಹಾಕಿಕೊಂಡು ಕೇಳಿ, ನಾನು ಕೂಡ ಕಾಲ್ಮೇಲೆ ಕಾಲ್ ಹಾಕಿ ಉತ್ತರ ಹೇಳ್ತಿನಿ ಎಂದಿದ್ದರು ವಿಜಯ್ ದೇವರಕೊಂಡ. ಸುದ್ದಿಗೋಷ್ಠಿ ಕಾಲ್ ಟೇಬಲ್ ಮೇಲೆ ಇಟ್ಟು ಕೂತಿದ್ದರು. ಇದನ್ನೆಲ್ಲಾ ನೋಡಿ ನೆಟ್ಟಿಗರು ಯಾಕೋ ಜಾಸ್ತಿ ಆಯ್ತು ಎಂದಿದ್ದರು.

ಬಾಯ್ಕಾಟ್ ಬಗ್ಗೆಯೂ ಉಡಾಫೆಯ ಮಾತು
ಸಂದರ್ಶನವೊಂದರಲ್ಲಿ ಬಾಯ್ಕಾಟ್ ಟ್ರೆಂಡ್ ಬಗ್ಗೆ ವಿಜಯ್ ದೇವರಕೊಂಡಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ನಟ "ಜನಕ್ಕೆ ಇಷ್ಟ ಆದರೆ ಸಿನಿಮಾ ನೋಡುತ್ತಾರೆ. ಇಲ್ಲ ಅಂದರೆ ಇಲ್ಲ ಮೊಬೈಲ್ನಲ್ಲಿ ಟಿವಿಯಲ್ಲಿ ನೋಡುತ್ತಾರೆ ಬಿಡಿ" ಎಂದಿದ್ದರು. ಇನ್ನು 'ಲೈಗರ್' ಸಿನಿಮಾ ಟ್ರೈಲರ್ ಲಾಂಚ್ ವೇಳೆ ನಮ್ಮ "ಅಪ್ಪ ಯಾರು ಗೊತ್ತಿಲ್ಲ, ನಮ್ ತಾತ ಯಾರು ಗೊತ್ತಿಲ್ಲ, ಇತ್ತೀಚೆಗೆ ಯಾವುದೇ ಹಿಟ್ ಕೊಟ್ಟಿಲ್ಲ, ಅದರೂ ಟ್ರೈಲರ್ಗೆ ಏನಿದು ಕ್ರೇಜ್" ಎಂದು ದೇವರಕೊಂಡ ಮಾತನಾಡಿದ್ದರು. ಇಂತಹ ಮಾತುಗಳೇ ಅವರಿಗೆ ಈಗ ಮುಳುವಾದಂತೆ ಕಾಣುತ್ತಿದೆ.

ಟಾಲಿವುಡ್ನಲ್ಲಿ ದೇವರಕೊಂಡ ಟಾರ್ಗೆಟ್?
ಎಲ್ಲರಿಗಿಂತ ಭಿನ್ನವಾಗಿ ಇರಬೇಕು ಎಂದುಕೊಳ್ಳುವುದು ತಪ್ಪಲ್ಲ. ಆದರೆ ಇಲ್ಲಿ ನಾನೊಬ್ಬನೇ ನನ್ನನ್ನು ಬಿಟ್ಟರೆ ಯಾರು ಇಲ್ಲ ಎನ್ನುವಂತೆ ವಿಜಯ್ ನಡೆದುಕೊಳ್ಳುತ್ತಿದ್ದಾರೆ ಅನ್ನುವುದು ಕೆಲವರ ವಾದ. ಬೇರೆಯವರನ್ನು ಪರೋಕ್ಷವಾಗಿ ಕೆಣಕುವುದು ಸರಿಯಲ್ಲ. ಇಂತಹ ವರ್ತನೆಯೇ ಅವರನ್ನು ಮುಳುವಾಗುವಂತೆ ಕಾಣುತ್ತಿದೆ ಎಂದು ಗುಸುಗುಸು ಶುರುವಾಗಿದೆ. ಬೆಳೆಯುವ ಸಮಯದಲ್ಲಿ ತಪ್ಪು ಹೆಜ್ಜೆ ಹಾಕಬಾರದು ಎನ್ನುವುದು ಕೆಲವರ ಸಲಹೆ. ಇನ್ನು ಮುಂದೆ ಆದರೂ ಮಾತು ಕಮ್ಮಿ ಮಾಡಿ ಕ್ರೇಜ್ ತಕ್ಕಂತೆ ಒಳ್ಳೆ ಕಥೆ ಆಯ್ಕೆ ಮಾಡಿಕೊಂಡು ಸಿನಿಮಾ ಗೆದ್ದರೆ ಉತ್ತಮ ಎಂದು ಇಂಡಸ್ಟ್ರಿಯಲ್ಲಿ ಕೆಲವರು ಹೇಳುತ್ತಿದ್ದಾರೆ.

'ಲೈಗರ್' ಸಿನಿಮಾದಿಂದ 50 ಕೋಟಿ ರೂ. ನಷ್ಟ
ಆಗಸ್ಟ್ 25ಕ್ಕೆ ರಿಲೀಸ್ ಆಗಿದ್ದ 'ಲೈಗರ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಚಾರ್ಮಿ, ಕರಣ್ ಜೋಹರ್ ಸೇರಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದರು. ಆದರೆ ಚಿತ್ರದಿಂದ ಅಂದಾಜು 50 ಕೋಟಿ ರೂ.ಗಿಂತ ಅಧಿಕ ನಷ್ಟವಾಗಿರುವ ಲೆಕ್ಕಾಚಾರ ನಡೀತಿದೆ.


Click it and Unblock the Notifications











