ಸೋಲುಗಳಿಂದ ಹೊರ ಬಂದ ವಿಜಯ್ ದೇವರಕೊಂಡ: ಖುಷಿ ಯಶಸ್ಸಿನ ಬಳಿಕ ದೇವಸ್ಥಾನಕ್ಕೆ ಭೇಟಿ
ಅರ್ಜುನ್ ರೆಡ್ಡಿಯ ಭಾರಿ ಯಶಸ್ಸಿನ ಬಳಿಕ ಮತ್ತೊಂದು ಅಂತಹ ಹಿಟ್ ಸಿನಿಮಾ ನೀಡಲು ನಟ ವಿಜಯ್ ದೇವರಕೊಂಡ ಕಾಯುತ್ತಿದ್ದರು. ಆದರೆ ಯಾವುದೂ ಆ ಮಟ್ಟಕ್ಕೆ ಸೂಪರ್ ಹಿಟ್ ಆಗಿರಲಿಲ್ಲ. ಈ ನಟಿ ಸಮಂತಾ ರುತ್ ಪ್ರಭು ಜೊತೆಗಿನ ಖುಷಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಮಾಲ್ ಮಾಡುತ್ತಿದೆ. ಇದು ವಿಜಯ್ಗೆ ಮತ್ತೆ ಅರ್ಜುನ್ ರೆಡ್ಡಿ ಇಮೇಜ್ ವಾಪಸ್ ಕೊಡುತ್ತಿದೆ.
ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದ ಮೂಲಕ ನಟ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಖುಷಿ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿರುವ ಜೊತೆಗೆ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಲಾಭ ಗಳಿಸುವ ಮುನ್ಸೂಚನೆ ಇದೆ.

ಕುಟುಂಬದೊಂದಿಗೆ ದೇವಸ್ಥಾನಕ್ಕೆ ವಿಜಯ್ ಭೇಟಿ
ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿರುವ ಖುಷಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ 'ಖುಷಿ' ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 16 ಕೋಟಿ ರೂಪಾಯಿಗಳನ್ನು ಗಳಿಸಿತು. ಇದೆ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ ಮತ್ತು ಅವರ ತಂಡವು ದೇವರ ಆಶೀರ್ವಾದ ಪಡೆಯಲು ಯಾದಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದೆ.
ವಿಜಯ್ ದೇವರಕೊಂಡ ತಂಡ ಮತ್ತು ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೋಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. " ಖುಷಿ ಬ್ಲಾಕ್ಬಸ್ಟರ್ ಆದ ಬಳಿಕ ವಿಜಯ ದೇವರಕೊಂಡ ತಮ್ಮ ಕುಟುಂಬ ಮತ್ತು ತಂಡದೊಂದಿಗೆ ಯಾದಾದ್ರಿ ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದರು" ಎಂದು ಮೈತ್ರಿ ಮೂವಿ ಮೇಕರ್ಸ್ ಫೋಟೋಗಳನ್ನು ಹಂಚಿಕೊಂಡಿದೆ.
ವಿಜಯ್ ದೇವರಕೊಂಡ ತನ್ನ ತಂಡದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಯುವತಿಯೊಬ್ಬರು ಭದ್ರತೆ ಮೀರಿ ಓಡಿ ಬಂದು ವಿಜಯ್ ಅವರನ್ನು ಅಪ್ಪಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಸುಮ್ಮನಿರಿಸಿದ ವಿಜಯ್ ದೇವರಕೊಂಡ, ಅಭಿಮಾನಿಯ ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.
ವಿಜಯ್ ಯಾದಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದು ಒಳ್ಳೆಯ ವರ್ಷ! ಯಾದಾದ್ರಿ ದೇವಸ್ಥಾನಕ್ಕೆ ಹೋಗಿ ನನ್ನ ಪ್ರಣಾಮಗಳನ್ನು ಅರ್ಪಿಸಿ ಎಲ್ಲರಿಗಾಗಿ ಪ್ರಾರ್ಥಿಸಿದ್ದೇನೆ ಎಂದಿದ್ದಾರೆ. ಪತ್ರಕರ್ತರೊಬ್ಬರು 2023 ದೇವರಕೊಂಡ ಕುಟುಂಬಕ್ಕೆ ಉತ್ತಮ ವರ್ಷ ಎಂದು ಉಲ್ಲೇಖಿಸಿರುವ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ಖುಷಿ ಎರಡನೇ ದಿನ ಕಲೆಕ್ಷನ್ನಲ್ಲಿ ಕೊಂಚ ಕುಸಿತ ಕಂಡಿದ್ದು, ಅಂದಾಜು 9 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ವರದಿ ತಿಳಿಸಿದೆ. ಈ ಕಲೆಕ್ಷನ್ ಕುಸಿತದ ಹೊರತಾಗಿಯೂ, ಚಲನಚಿತ್ರದ ಒಟ್ಟಾರೆ ಗಳಿಕೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.
'ಖುಷಿ'
ವಿಜಯ್ ದೇವರಕೊಂಡ ಜೊತೆಗೆ, ಖುಷಿಯಲ್ಲಿ ಸಮಂತಾ, ಜಯರಾಮ್, ಸಚಿನ್ ಖೇಡೇಕರ್, ಮುರಳಿ ಶರ್ಮಾ, ವೆನ್ನೆಲ ಕಿಶೋರ್, ಲಕ್ಷ್ಮಿ, ರೋಹಿಣಿ, ಅಲಿ, ಮತ್ತು ರಾಹುಲ್ ರಾಮಕೃಷ್ಣ ಸೇರಿದಂತೆ ಬೃಹತ್ ತಾರಾಬಳಗವಿದೆ. ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದ್ದು, ಮುರಳಿ ಛಾಯಾಗ್ರಹಣ ನೀಡಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ.
ಖುಷಿ ಸಿನಿಮಾಗೂ ಮುನ್ನ ವಿಜಯ್ ದೇವರಕೊಂಡ ಅವರ 'ಲೈಗರ್' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಲಿಲ್ಲ. ಹೈದರಾಬಾದ್ನಲ್ಲಿ ನಡೆದ 'ಖುಷಿ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ, 'ಲೈಗರ್' ಚಿತ್ರ ಪ್ಲಾಪ್ ಆಗಿದ್ದರ ಬಗ್ಗೆ ಮಾತನಾಡಿದ್ದರು. ಬೇಸರ ವ್ಯಕ್ತಪಡಿಸಿದ್ದ ಅವರು, ಲೈಗರ್ ಮೊದಲೇನಲ್ಲ, ಇದರ ಹಿಂದೆನೂ ಅನೇಕ ಸೋಲು ಅನುಭವಿಸಿದ್ದೇನೆ ಎಂದು ಹೇಳಿದ್ದರು.


Click it and Unblock the Notifications











