ಡ್ರಗ್ಸ್ ಪ್ರಕರಣದ ವಿಚಾರಣೆ ಎದುರಿಸಿದ ಚಾರ್ಮಿ ಹೇಳಿದ್ದಿಷ್ಟು
ನಾಲ್ಕು ವರ್ಷ ಹಳೆಯ ಡ್ರಗ್ಸ್ ಪ್ರಕರಣದ ಬಗ್ಗೆ ನಟಿ ಚಾರ್ಮಿ ಇಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದರು.
2017ರಲ್ಲಿ ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಬಹು ಜೋರಾಗಿ ಸದ್ದು ಮಾಡಿತ್ತು. ನಿರ್ದೇಶಕ ಪುರಿ ಜಗನ್ನಾಥ್, ನಟ ರವಿತೇಜ, ಚಾರ್ಮಿ, ಮುಮೈತ್ ಖಾನ್, ಆಲಿ ಸೇರಿದಂತೆ ಹಲವರ ಹೆಸರುಗಳು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಆ ಪ್ರಕರಣ ಮುಗಿದು ಹೋಯಿತು ಎಂದುಕೊಂಡಿದ್ದಾಗಲೇ ಜಾರಿ ನಿರ್ದೇಶನಾಲಯವು 2017ರ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಮನ್ಸ್ ನೀಡಿ ಮತ್ತೆ ಹಾಜರಾಗುವಂತೆ ಕೇಳಿತ್ತು.
ಅದರಂತೆ ನಿರ್ದೇಶಕ ಪುರಿ ಜಗನ್ನಾಥ್ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗಿ ಸುಮಾರು 10 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದಿಂದ ಪ್ರಶ್ನೆಗಳನ್ನು ಎದುರಿಸಿದರು. ಇಂದು ನಟಿ ಚಾರ್ಮಿ ಇಡಿ ಎದುರು ಹಾಜರಾಗಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ನಟಿ ಚಾರ್ಮಿಯನ್ನು ಸತತ ನಾಲ್ಕು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಕೆಲ್ವಿನ್ ಮ್ಯಾಸ್ಕರೇನಸ್ ಜೊತೆಗೆ ಚಾರ್ಮಿಗೆ ಇರುವ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ಚಾರ್ಮಿಯ ಬ್ಯಾಂಕ್ ಖಾತೆ, ಹಣ ವಹಿವಾಟುಗಳ ಕುರಿತಾಗಿಯೂ ಇಡಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದೆ.
ವಿಚಾರಣೆ ಮುಗಿಸಿ ಹೊರಬಂದ ನಟಿ ಚಾರ್ಮಿ, ''ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರು ಮತ್ತೆ ಯಾವಾಗ ಕರೆದರೂ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿರುವ ಕಾರಣ ಹೆಚ್ಚಿಗೆ ಏನೂ ಹೇಳಲಾಗುವುದಿಲ್ಲ'' ಎಂದಷ್ಟೆ ಹೇಳಿ ಹೊರಟಿದ್ದಾರೆ.
ನಟಿ ಚಾರ್ಮಿ ಕೌರ್ ಹಾಗೂ ನಿರ್ದೇಶಕ ಪುರಿ ಜಗನ್ನಾಥ್ ಬಹಳ ಆಪ್ತರು. ಎಷ್ಟರ ಮಟ್ಟಿಗೆಂದರೆ ಪುರಿ ಜಗನ್ನಾಥ್ ಪತ್ನಿ, ನಟಿ ಚಾರ್ಮಿಯಿಂದ ನನ್ನ ಹಾಗೂ ಪುರಿ ಜಗನ್ನಾಥ್ ಸಂಸಾರ ಹಾಳಾಯಿತು ಎಂದು ಆರೋಪಗಳನ್ನು ಮಾಡಿದ್ದರು. ಪ್ರತಿಭಟನೆ ಸಹ ಮಾಡಿದ್ದರು. ಈ ಇಬ್ಬರ ನಡುವೆ ಅತಿಯಾದ ಆತ್ಮೀಯತೆ ಇದೆ ಎಂದು ಮಾಧ್ಯಮಗಳು ಸಹ ಈ ಹಿಂದೆ ವರದಿ ಮಾಡಿದ್ದವು. ಅದೇ ಸಮಯಕ್ಕೆ ಡ್ರಗ್ಸ್ ಪ್ರಕರಣದಲ್ಲಿ ಇವರಿಬ್ಬರು ಹೆಸರು ಇತರ ಕೆಲವರೊಟ್ಟಿಗೆ ಕೇಳಿ ಬಂದಿತ್ತು.
2002ರಲ್ಲಿ ನಟನೆ ಆರಂಭಿಸಿದ ಚಾರ್ಮಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಲವ ಕುಶ', 'ದೇವ್ ಸನ್ ಆಫ್ ಮುದ್ದೇಗೌಡ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ನಟನೆಯ 'ಯಾರೆ ಕೂಗಾಡಲಿ' ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ನೃತ್ಯ ಮಾಡಿದ್ದಾರೆ. ನಟಿಯಾಗಿ ಅವಕಾಶ ಕಡಿಮೆ ಆಗುವ ಹೊತ್ತಿಗೆ ನಿರ್ಮಾಪಕಿ ಆದ ಚಾರ್ಮಿ, 2015 ರಿಂದ ಈವರೆಗೆ ಆರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಎಲ್ಲ ಸಿನಿಮಾಗಳನ್ನು ಪುರಿ ಜಗನ್ನಾಥ್ ಸಹಯೋಗದೊಂದಿಗೆ ನಿರ್ಮಾಣ ಮಾಡಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗಳನ್ನಷ್ಟೆ ನಿರ್ಮಾಣ ಮಾಡಿದ್ದಾರೆ. ಇದೀಗ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ನಟನೆಯ 'ಲೈಗರ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನೂ ಸಹ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ.
ಇದೀಗ ಡ್ರಗ್ಸ್ ಪ್ರಕರಣದಲ್ಲಿ ನಟ ರವಿತೇಜ ಹಾಗೂ ಇತರರಿಗೂ ಇಡಿ ಸಮನ್ಸ್ ನೀಡಿದ್ದು ಅವರುಗಳು ಸಹ ವಿಚಾರಣೆಗೆ ಮುಂದಿನ ದಿನಗಳಲ್ಲಿ ಹಾಜರಾಗಲಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ಗೂ ಸಮನ್ಸ್ ಜಾರಿ ಮಾಡಲಾಗಿದ್ದು, ತಡವಾಗಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ರಾಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ ಎನ್ನಲಾಗುತ್ತಿದೆ.
2017 ಟಾಲಿವುಡ್ನ ನಟ ನಟಿಯರು ನಿರ್ದೇಶಕರು ನಿರ್ಮಾಪಕರುಗಳ ಮನೆಗಳ ಮೇಲೆ ತೆಲಂಗಾಣ ಅಬಕಾರಿ ಇಲಾಖೆ (Telangana Excise and Prohibition Department) ದಾಳಿ ಮಾಡಿತು. ಆನಂತರ ಇದರ ವಿಚಾರಣೆಗಾಗಿ ಪ್ರತ್ಯೇಕವಾದ ವಿಚಾರಣ ತಂಡವನ್ನು ಕೂಡ ನೇಮಿಸಲಾಯಿತು. ಆ ಸಂದರ್ಭದಲ್ಲಿ ವಿಚಾರಣಾ ತಂಡದ ನೇತೃತ್ವವನ್ನು ದಕ್ಷ ಅಧಿಕಾರಿ ಅಕು ಸಬರ್ವಲ್ ಅವರಿಗೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ಪೆಡ್ಲರ್ಗಳ ಮಾಹಿತಿಯನ್ನು ಆಧರಿಸಿ ಖ್ಯಾತ ನಟರಾದ ರವಿತೇಜ, ನವದೀಪ್, ತರುಣ್, ತನಿಷ್ಕ್ ನಂದು ನಟಿಯರಾದ ಚಾರ್ಮಿ ಕೌರ್, ಮುಮೈತ್ ಖಾನ್ ಅವರ ವಿಚಾರಣೆ ನಡೆಸಿದ್ದರು. ಇನ್ನೂ ದೊಡ್ಡ ಪ್ರಮಾಣದಲ್ಲಿ ಟಾಲಿವುಡ್ನ ಪ್ರಮುಖರ ಹೆಸರುಗಳು ಕೇಳಿಬಂದ ಹೊತ್ತಿಗೆ ತೆಲಂಗಾಣ ಸರ್ಕಾರ ಸಬರ್ವಲ್ ಅವರನ್ನ ವಿಚಾರಣೆಯಿಂದ ತಪ್ಪಿಸಿತ್ತು.


Click it and Unblock the Notifications











