"ವೇಶ್ಯೆ ಬಳಿ ಗಂಡಸರು ಹಿಂಗೆ ಮಾಡಿ ನೋಡೊಣ?"; ಬಹುಭಾಷಾ ನಟಿ ಹೇಳಿಕೆ ವೈರಲ್
ವೇಶ್ಯಾವಾಟಿಕೆ ಸಹ ಕಾನೂನುಬದ್ಧವಾದ ಒಂದು ವೃತ್ತಿ. ಹಾಗಾಗಿ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ವೇಶ್ಯೆಯರನ್ನು ಪೊಲೀಸರು ವಶಕ್ಕೆ ಪಡೆಯಬಾರದು, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ 3 ವರ್ಷಗಳ ಹಿಂದೆ ಮಹತ್ವದ ಆದೇಶ ನೀಡಿತ್ತು.
ವೇಶ್ಯೆಯರನ್ನು, ಆ ವೃತ್ತಿಯನ್ನು ಇವತ್ತಿಗೂ ಕೆಟ್ಟಗಾಗಿಯೇ ಸಮಾಜದಲ್ಲಿ ನೋಡುತ್ತಾರೆ. ಇಂತಹವರಿಗೆ ಬಹುಭಾಷಾ ನಟಿ ಎಸ್ಟರ್ ನೊರೊನ್ಹಾ ಒಂದು ಪ್ರಶ್ನೆ ಕೇಳಿದ್ದಾರೆ. ಆಕೆಯ ಮಾತುಗಳು ಸಖತ್ ವೈರಲ್ ಆಗುತ್ತಿದೆ. ಬಹ್ರೇನ್ ಮೂಲದ ನಟಿ ಎಸ್ಟರ್ ಕನ್ನಡ ಸೇರಿ ದಕ್ಷಿಣದ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಬೈನಲ್ಲಿ ಪದವಿ ಪಡೆದ ಚೆಲುವೆ ಬಳಿಕ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದಿದ್ದರು.

ಕನ್ನಡ ಸೇರಿ ಏಳೆಂಟು ಭಾಷೆಗಳನ್ನು ನಟಿ ಎಸ್ಟರ್ ನೊರೊನ್ಹಾ ಕಲಿತಿದ್ದಾರೆ. ಆರಂಭದಲ್ಲಿ ಒಂದೆರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ ಬಳಿಕ ಟಾಲಿವುಡ್ ಪ್ರವೇಶಿಸಿದ್ದರು. 'ಉಸಿರಿಗಿಂತ ನೀನೆ ಹತ್ತಿರ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು. ಮುಂದೆ 'ನಾವಿಕ', 'ಅತಿರಥ', 'ಲಂಕೆ', 'ಡಿಎನ್ಎ', 'ಲೋಕಲ್ ಟ್ರೈನ್' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಎಸ್ಟರ್ ತಮ್ಮ ಬೋಲ್ಡ್ ಕಾಮೆಂಟ್ಸ್ ಮಾಡಿ ಸುದ್ದಿಯಾಗುವುದು ಇದೆ.
ಗಾಯಕ, ರ್ಯಾಪರ್ ನೋಯೆಲ್ ಸೀನ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ ನಟಿ ಎಸ್ಟರ್ 15 ದಿನಗಳ ಬಳಿಕ ಆತನಿಂದ ದೂರಾಗಿದ್ದರು. ತಮ್ಮ ಬ್ರೇಕಪ್ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಆಕೆ ಮಾತನಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತುಳು ಹಾಗು ಕೊಂಕೊಣಿ ಸೇರಿದಂತೆ ತಮಿಳು, ತೆಲುಗು, ಮರಾಠಿ ಸಿನಿಮಾಗಳಲ್ಲಿ ಎಸ್ಟರ್ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಬಂದಿದ್ದ ತೆಲುಗಿನ 'ಟೆನೆಂಟ್' ಚಿತ್ರದಲ್ಲಿ ನಟಿಸಿದ್ದರು. 'ಥಲ' ಎಂಬ ಮತ್ತೊಂದು ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು.
ನಟಿ ಎಸ್ಟರ್ ನೊರೊನ್ಹಾ ಇತ್ತೀಚೆಗೆ ಟಿವಿ5 ತೆಲುಗು ವಾಹಿನಿ ಸಂದರ್ಶನದಲ್ಲಿ ಭಾಗಿ ಆಗಿದ್ದರು. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದರು. ತಮ್ಮ ಮತ, ಆಚಾರ ವಿಚಾರಗಳ ಬಗ್ಗೆಯೂ ಮನದಾಳ ತೆರೆದಿಟ್ಟಿದ್ದರು. ಮಹಾನ್ ಪುರುಷರು ಸಾಕಷ್ಟು ಬಂದು ಇಲ್ಲಿ ಒಳ್ಳೆ ಜೀವನ ಸಾಗಿಸಿ ಹೋಗಿದ್ದಾರೆ. ಅವರಿಂದ ನಾವು ಏನನ್ನೂ ಕಲಿತ್ತಿಲ್ಲ. ಇವತ್ತಿಗೂ ತಪ್ಪು ಮಾಡಿ ದೇವರ ಮೇಲೆ ಹಾಕುತ್ತೇವೆ ಎಂದು ಆಕೆ ಹೇಳಿದ್ದಾರೆ.
ವೇಶ್ಯಾವಾಟಿಕೆ ಬಗ್ಗೆಯೂ ನಟಿ ಎಸ್ಟರ್ ನೊರೊನ್ಹಾ ಮಾತನಾಡಿ ಗಮನ ಸೆಳೆದಿದ್ದಾರೆ. "ಒಬ್ಬ ವೇಶ್ಯೆ ಯಾಕೆ ಆ ವೃತ್ತಿ ಆರಂಭಿಸಿದಳು. ನೀವೆಲ್ಲಾ ಹೋಗಿ ಗ್ರಾಹಕರಾಗಿದ್ದೀರಾ. ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಆಕೆ ವೇಶ್ಯೆ ಆಗಿದ್ದು. ಆಕೆ ಹಣಕ್ಕಾಗಿ ವೇಶ್ಯೆ ಆಗಿದ್ದಾಳೆ ಅಂದ್ಕೊಳಿ, ನೀವು ಬಹಳ ಚೀಪ್ ಅಂತೀರಾ. ನೀವು ಒಳ್ಳೆಯವರಾಗಿದ್ದರೆ ಆಕೆಯನ್ನು ಬಳಸಿಕೊಳ್ಳದೇ ಹಣ ಕೊಟ್ಟು ಸಹಾಯ ಮಾಡಿ. ನಾನು ನಿನ್ನನ್ನು ಮುಟ್ಟಲ್ಲ. ನಿನಗೆ ಹಣ ಬೇಕು. ತಗೋ 500 ರೂ. ಅಂತ ಕೊಡಿ. ಅಷ್ಟು ಒಳ್ಳೆ ಮನಸ್ಸು ನಿಮಗಿಲ್ಲ. 500 ರೂ. ಕೊಟ್ಟರೆ ಆಕೆಯನ್ನು ಬಳಸಿಕೊಳ್ಳಬೇಕು ಎನ್ನುವ ಆಲೋಚನೆ ನಿನಗಿದೆ. ಆದರೆ ನೀವು ಆಕೆಯನ್ನು ಚೀಪ್ ಅಂತೀಯಾ. ಆಕೆ ಹಣವಿಲ್ಲದೇ ಅಥವಾ ನಾನಾ ಕಾರಣದಿಂದ ಆ ವೃತ್ತಿಗೆ ಬಂದಿರಬಹುದು. ನೀನು ಒಳ್ಳೆಯವನಾಗಿದ್ದರೆ ಆಕೆಯ ಸಹಾಯ ಮಾಡು. ಎಲ್ಲರೂ ಅದೇ ರೀತಿ ಮಾಡಿದರೆ ಆಕೆ ಯಾಕೆ ಆ ವೃತ್ತಿಗೆ ಬರ್ತಾಳೆ. ಇದೆಲ್ಲಾ ಸಮಾಜದ ಆಟ ಅಷ್ಟೆ" ಎಂದು ಎಸ್ಟರ್ ಹೇಳಿದ್ದಾರೆ.


Click it and Unblock the Notifications











