ಬಾಲಿವುಡ್ ನಟಿಯರ ನಾಯಿಗೂ ರೂಮ್, ಕಂಗನಾಗೆ ಪದ್ಮಶ್ರೀ: ನಂಗೆ 'ಹೂಗುಚ್ಛನೂ ಇಲ್ಲ!
ಒಂದ್ಕಾಲದಲ್ಲಿ ಸೂಪರ್ ಸ್ಟಾರ್ಗಳ ಜೊತೆ ನಾಯಕಿಯಾಗಿ ನಟಿಸಿ ನಟಿ ಜಯಸುಧಾ ಸ್ಟಾರ್ ಪಟ್ಟಕ್ಕೇರಿದ್ದರು. ನಿಧಾನವಾಗಿ ಪೋಷಕ ಪಾತ್ರಗಳತ್ತ ಮುಖ ಹಿರಿಯ ನಟಿ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಜಯಸುಧಾ ಇಂಡಸ್ಟ್ರಿಯಲ್ಲಿರೋ ತಾರತಮ್ಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಂಚಭಾಷಾ ತಾರೆಯಾಗಿ ನಟಿ ಜಯಸುಧಾ ಖ್ಯಾತಿ ಗಳಿಸಿದ್ದಾರೆ. ನಟಿಯರಿಗೆ ಸೌಂದರ್ಯ ಇದ್ದರೆ ಮಾತ್ರ ಸಾಲದು ಅಭಿನಯವೂ ಬೇಕು ಎಂದು ತೋರಿಸಿ 'ಸಹಜ ನಟಿ' ಅನ್ನುವ ಬಿರುದನ್ನು ಪಡೆದುಕೊಂಡಿದ್ದಾರೆ. ಎನ್ಟಿಆರ್, ಎಎನ್ಆರ್ರಂತಹ ದಿಗ್ಗಜರ ಸಿನಿಮಾಗಳಲ್ಲೂ ಜಯಸುಧಾ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇವತ್ತಿಗೂ ಪೋಷಕ ನಟಿಯಾಗಿ ಸಹಜ ನಟಿಗೆ ಬಹಳ ಬೇಡಿಕೆ ಇದೆ. ಆದರೆ ಯಾಕೋ ಸಿನಿಮಾಗಳಲ್ಲಿ ನಟಿಸೋದನ್ನು ಕಮ್ಮಿ ಮಾಡಿದ್ದಾರೆ. 2009ರಲ್ಲಿ ರಾಜಕೀಯರಂಗಕ್ಕೆ ಜಿಗಿದು ಸಿಕಂದರಾಬಾದ್ ಶಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಜಯಸುಧಾಗೆ ಪದ್ಮಶ್ರೀ ಗೌರವ ಸಿಕ್ಕಿಲ್ಲ ಅನ್ನುವ ಕೊರಗಿದೆ. ಇನ್ನು ಬಾಲಿವುಡ್ನಿಂದ ಬರುವ ನಟಿಯರನ್ನು ನಮ್ಮವರು ಟ್ರೀಟ್ ಮಾಡುವ ರೀತಿಯೇ ಬೇರೆ. ಇಲ್ಲಿನ ನಟಿಯರಿಗೆ ಕೊಡುವ ಬೆಲೆ ಬೇರೆ ಅಂತ ಅಸಮಧಾನ ತೋಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಸಂದರ್ಶನವೊಂದನ್ನು ನೀಡಿದ್ದಾರೆ. ತಮ್ಮ ಸಿನಿಕರಿಯರ್ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದಾರೆ. ಸಹಜ ನಟಿಯ ಹೇಳಿಕೆ ಈಗ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ.

ಚಿತ್ರರಂಗದಲ್ಲಿರುವ ತಾರತಮ್ಯದ ಬಗ್ಗೆ ಬೇಸರ
ಬಾಲಿವುಡ್ ನಟಿಯರಿಗೆ ಕರೆದು ಅವಕಾಶ ಕೊಡುತ್ತಾರೆ. ಇಲ್ಲಿನ ಪ್ರತಿಭೆಗಳನ್ನು ಗುರ್ತಿಸುವುದಿಲ್ಲ ಅನ್ನುವ ಆರೋಪ ಮೊದಲಿನಿಂದಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಹಿರಿಯ ನಟಿ ಜಯಸುಧಾ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. "ಬಾಲಿವುಡ್ ನಟಿಯರು ಬಂದರೆ ಅವರಿಗೆ ನೀಡುವ ಆತಿಥ್ಯವೇ ಬೇರೆ. ಅವರು ಜೊತೆಗೆ ಕರೆದುಕೊಂಡು ಬರುವ ನಾಯಿಗಳಿಗೂ ರೂಮ್ ಬುಕ್ ಮಾಡಿ ಕೊಡುತ್ತಾರೆ. ಆದರೆ ನಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ" ಎಂದಿದ್ದಾರೆ.

ಪದ್ಮಶ್ರೀ ಗೌರವ ಸಿಕ್ಕಿಲ್ಲ ಎಂದು ಬೇಸರ
ಅರ್ಹ ಪ್ರತಿಭೆಗಳ ಕೈಗೆ ಸೇರಿದಾಗಲೇ ಪ್ರಶಸ್ತಿಗಳಿಗೆ ಶೋಭೆ. ಆದರೆ ನಿಜವಾಗಿಯೂ ಅರ್ಹರಿಗೆ ಪ್ರಶಸ್ತಿಗಳು ಸಿಗುತ್ತಿವೆಯಾ ಅಂದರೆ ಕೆಲವರು ಇಲ್ಲ ಎನ್ನುತ್ತಾರೆ. "ಬಾಲಿವುಡ್ನಲ್ಲಿ ಕಂಗನಾ ರಾಣಾವತ್ಗೆ ಪದ್ಮಶ್ರೀ ಕೊಟ್ಟಿದ್ದಾರೆ. ನನಗಿಲ್ಲ. ಒಂದು ವೇಳೆ ನಾನು ಬಾಲಿವುಡ್ನಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರೆ ಇಂಡಸ್ಟ್ರಿಯವರು ಒಂದು ಹೂಗುಚ್ಛವನ್ನಾದರೂ ಕಳುಹಿಸುತ್ತಿದ್ದರು. ಇಲ್ಲಿ(ಟಾಲಿವುಡ್) ಅದೂ ಇಲ್ಲ. ಇದೇ ಹೀರೊ ಆಗಿದ್ದರೆ ದೊಡ್ಡ ಅಬ್ಬರ ಮಾಡಿಬಿಡುತ್ತಿದ್ದರು" ಎಂದಿದ್ದಾರೆ.

ನಿರ್ಮಾಪಕಿಯಾಗಿ ಸೋಲು
ನಾಯಕಿಯಾಗಿ ಚಿತ್ರರಂಗದಲ್ಲಿ ಸಕ್ಸಸ್ ಕಂಡ ಜಯಸುಧಾ 80ರ ದಶಕದಲ್ಲೇ ನಿರ್ಮಾಪಕಿಯಾಗಿ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡರು. ಈ ಬಗ್ಗೆ ಯೂ ಮಾತನಾಡಿರುವ ಸಹಜ ನಟಿ "ಆಗ ನಟ ಶೋಭನ್ ಬಾಬು ಹಣ ಕೂಡಿಡುವಂತೆ, ಜಮೀನು ಕೊಂಡುಕೊಳ್ಳುವಂತೆ ಸಾಕಷ್ಟು ಬಾರಿ ಹೇಳಿದ್ದರು. ನಾನು ಕೇಳಲಿಲ್ಲ. ನಟಿ ಸಾವಿತ್ರಿಯವರ ರೀತಿಯಲ್ಲಿ ನಾನು ಸಾಕಷ್ಟು ಹಣ ಕಳೆದುಕೊಂಡೆ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾಗಳಲ್ಲೂ ನಟನೆ
1985ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ 'ನೀ ತಂದ ಕಾಣಿಕೆ' ಸಿನಿಮಾ ಮೂಲಕ ಜಯಸುಧಾ ಕನ್ನಡ ಚಿತ್ರರಂಗಕ್ಕೆ ಬಂದರು. ನಾಯಕಿಯಾಗಿ ಕನ್ನಡ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೇ ಇದ್ದರೂ 'ಮೊಂಡ', 'ತಾಯಿಯ ಮಡಿಲು', 'ವಜ್ರಕಾಯ" ಸಿನಿಮಾಗಳಲ್ಲಿ ಪೋಷಕ ಕಲಾವಿದೆಯಾಗಿ ಗಮನ ಸೆಳೆದರು.


Click it and Unblock the Notifications











