"ಕನ್ನಡದವ್ರು ಪರಭಾಷಿಕರನ್ನು ಒಪ್ಪುತ್ತಿರಲಿಲ್ಲ.. ನಿರ್ದೇಶಕನ ಟಾರ್ಚರ್": 'ಸೈನಿಕ' ಶೂಟಿಂಗ್ ಕಹಿ ಅನುಭವ ಬಿಚ್ಚಿಟ್ಟ ಸನಾ ಬೇಗಂ
ತೆಲುಗು ನಟಿ ಶನೂರ್ ಸನಾ ಮತ್ತೊಮ್ಮೆ ಕನ್ನಡದ 'ಸೈನಿಕ' ಸಿನಿಮಾ ಶೂಟಿಂಗ್ ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. 600ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಆಕೆ ನಟಿಸಿದ್ದಾರೆ. ತೆಲುಗು, ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ ಚಿತ್ರಗಳಲ್ಲೂ ಬಣ್ಣ ಹಚ್ಚಿ ಸಕ್ಸಸ್ ಕಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿ ಕನ್ನಡ ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕರು ಟಾರ್ಚರ್ ಕೊಟ್ಟಿದ್ದರು ಎಂದು ಹೇಳಿದ್ದಾರೆ.
ಸಂದರ್ಶನದಲ್ಲಿ ಶನೂರ್ ಸನಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಜಾಹೀರಾತುಗಳ ಮೂಲಕ ನನ್ನ ಕರಿಯರ್ ಆರಂಭವಾಯಿತು. ನನ್ನ ಅತ್ತೆ ಮಾವ ನನಗೆ ಬಹಳ ಸಹಕಾರ ನೀಡಿದರು. ಆದರೆ ಅಕ್ಕಪಕ್ಕದವರು ಮಾತ್ರ ಏನು ನಿಮ್ಮ ಸೊಸೆ ಹೀಗೆಲ್ಲಾ ಮಾಡ್ತಾಳೆ, ಬುರ್ಖಾ ಹಾಕಿಕೊಳ್ಳಲ್ಲ. ಎಲ್ಲೆಲ್ಲೋ ಹೋಗಿ ಬರ್ತಾಳೆ ಎನ್ನುತ್ತಿದ್ದರು. ಆದರೆ ಅವರು ಈ ಮಾತುಗಳನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ನನಗೆ ಹೀರೊಯಿನ್ಸ್ ಛಾನ್ಸ್ ಕೂಡ ಬರ್ತಿತ್ತು. ಮದುವೆ ಆಗಿದೆ, ಮಕ್ಕಳು ಇದ್ದಾರೆ ಅನ್ನೋದನ್ನು ಹೇಳಬೇಡ ಎನ್ನುತ್ತಿದ್ದರು. ಸ್ವಿಮ್ ಸೂಟ್ ಹಾಕ್ಬೇಕು, ಎಕ್ಸ್ಪೋಸ್ ಮಾಡ್ಬೇಕು ಎನ್ನುತ್ತಿದ್ದರು. ಅದಕ್ಕೆ ಒಪ್ಪಲಿಲ್ಲ"

ಕನ್ನಡ ಸಿನಿಮಾವೊಂದರಲ್ಲಿ ಕಹಿ ಘಟನೆ ನಡೆದಿತ್ತಂತೆ ಎನ್ನುವ ನಿರೂಪಕಿಯ ಪ್ರಶ್ನೆಗೆ "ಹೌದು. ಒಬ್ಬ ನಿರ್ದೇಶಕರಿಂದ ಅಂತಹ ಅನುಭವ ಆಗಿತ್ತು. ಸಾಕಷ್ಟು ಹಿರಿಯ ಕಲಾವಿದರು ಇದ್ದರು. ಅದ್ಯಾಕೋ ಆ ಸಿನಿಮಾ ನಿರ್ದೇಶಕರು ಬಹಳ ವಿರೋಧಿಸುತ್ತಿದ್ದರು. ಆ ಸಿನಿಮಾ ಹೆಸರು 'ಸೈನಿಕ'. ಒಂದು ಪೇಜ್ ಡೈಲಾಗ್ಸ್ ಕೊಟ್ಟಿದ್ದರು. ಅಭ್ಯಾಸ ಮಾಡಿಕೊಂಡು ಹೇಳಬೇಕಿತ್ತು. ಪ್ರಾಂಪ್ಟ್ ಇರಲ್ಲ ಅಂದರು. 90ರಷ್ಟು ಸಿನಿಮಾಗಳಲ್ಲಿ ಪ್ರಾಂಪ್ಟ್ ಇರಲ್ಲ. ನಾವೇ ಕಲಿತು ಹೇಳುತ್ತೇವೆ. ನಾನು ಅಭ್ಯಾಸ ಮಾಡಿ ಸಂಭಾಷಣೆ ಹೇಳುತ್ತಿದ್ದೆ."
"ಆದರೆ ಯಾಕೋ ನಿರ್ದೇಶಕರು ಬ್ರೇಕ್ ಕೂಡ ಕೊಡದೇ ಶೂಟಿಂಗ್ ಮಾಡ್ಸಿದ್ರು. ಬಿಸಿಲಿನಲ್ಲಿ ಶೂಟಿಂಗ್ ನಡೀತಿತ್ತು. ಪದೇ ಪದೇ ಒನ್ಮೋರ್ ಎನ್ನುತ್ತಿದ್ದರು. ಹಾಗಲ್ಲ ಹೀಗೆ ಎನ್ನುತ್ತಿದ್ದರು. ಅದ್ಯಾಕೋ ಗೊತ್ತಿಲ್ಲ. ಬಹಳ ಡಿಸ್ಟರ್ಬ್ ಮಾಡ್ತಿದ್ರು. ಹೇಗೋ ಆ ಶಾಟ್ ಮಾಡಿದ್ದೆ. ಓಕೆ ಆಯಿತು. ಚಿತ್ರದಲ್ಲಿ ನಾನು ಹಸುವಿನ ಹಾಲು ಕರೆಯುವ ಸನ್ನಿವೇಶ ಇತ್ತು. ಹಸು ಭಯಗೊಂಡಿತ್ತು. ಅದರಿಂದ ನನಗೂ ಭಯವಾಗಿತ್ತು. ಭಯ ಆದರೂ ಕೂಡ ಅಲ್ಲೇ ಇರಬೇಕು, ಆಕ್ಟ್ ಮಾಡಬೇಕು ಎಂದು ಒತ್ತಡ ಹಾಕಿದರು. ಅವರು ಅದ್ಯಾಕೋ ಫ್ರೆಂಡ್ಲಿಯಾಗಿ ಕೆಲಸ ತೆಗೆಯಲಿಲ್ಲ."

"ಆಗ ಕನ್ನಡ ಚಿತ್ರರಂಗದಲ್ಲಿ ಪರಭಾಷಾ ಕಲಾವಿದರನ್ನು ಒಪ್ಪುತ್ತಿರಲಿಲ್ಲ. ನಮ್ಮಲ್ಲೇ ಪ್ರತಿಭೆಗಳು ಇರುವಾಗ ಪರಭಾಷೆಯವರು ಯಾಕೆ? ಎನ್ನುತ್ತಿದ್ದರು. ಅವರ ಪ್ರಕಾರ ಅವರು ಹೇಳುವುದು ಸರಿ. ಆದರೆ ನನ್ನ ತಪ್ಪು ಏನು ಇರಲಿಲ್ಲ. ನೀವು ಕರೆದಿದ್ದಕ್ಕೆ ನಾನು ಬಂದೆ. ನನ್ನ ಕೆಲಸ ನಾನು ಮಾಡಿ ಹೋಗುತ್ತಿದ್ದೇನೆ. ನನ್ನ ಮೇಲೆ ಕೋಪ ಯಾಕೆ? ಒಟ್ನಲ್ಲಿ ಆ ಸಿನಿಮಾ ಶೂಟಿಂಗ್ ವೇಳೆ ಕಷ್ಟ ಎದುರಿಸಿದೆ." ಎಂದು ಶನೂರ್ ಸನಾ ಸೈನಿಕ ಸಿನಿಮಾ ಶೂಟಿಂಗ್ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ. ಮಹೇಶ್ ಸುಖಧರೆ ನಿರ್ದೇಶನದ ಈ ಚಿತ್ರದಲ್ಲಿ ಸಿ. ಪಿ ಯೋಗೇಶ್ವರ್ ಹಾಗೂ ಸಾಕ್ಷಿ ಶಿವಾನಂದ್ ಲೀಡ್ ರೋಲ್ಗಳಲ್ಲಿ ನಟಿಸಿದ್ದರು.
"ನನ್ನ ಮಗಳಿಗೂ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ಅವಕಾಶಗಳು ಸಿಕ್ಕಿತ್ತು. ಆದರೆ ಅವಳಿಗೆ ಆಸಕ್ತಿ ಇಲ್ಲದ ಕಾರಣ ನಟಿಸಲಿಲ್ಲ. ಆಕೆಗೊಂದು ಯೂಟ್ಯೂಬ್ ಚಾನಲ್ ಇದೆ. ನನ್ನ ಮಗಳಿಗೆ ಮದುವೆ ಮಾಡಿದ ಮೇಲೆ ಸಾಕಷ್ಟು ಕಷ್ಟ ಎದುರಿಸಿದಳು. ಅವರ ಕುಟುಂಬದವರು ಆಕೆಯನ್ನು ದುಬೈಗೆ ಕರೆದಿಕೊಂಡು ಹೋಗಿ ಟಾರ್ಚರ್ ಕೊಟ್ಟರು. ಊಟ ಕೂಡ ಕೊಡದೇ ನರಕ ತೋರಿಸಿದ್ದರು. ಆಕೆಯ ಚಿನ್ನಾಭರಣ, ಹಣ ಎಲ್ಲಾ ಬಳಸಿಕೊಂಡರು. ಇಷ್ಟೆಲ್ಲಾ ಕಷ್ಟ ಅನುಭವಿಸಿದರು ಒಂದು ದಿನವೂ ನನಗೆ ಹೇಳಲಿಲ್ಲ. ನನಗೆ ಅನುಮಾನ ಬಂದು ಕೇಳಿದ ಮೇಲೆ ಎಲ್ಲಾ ಗೊತ್ತಾಯಿತು."
"ನನ್ನ ಕೈಯಾರೆ ಎಷ್ಟೋ ಮದುವೆಗಳನ್ನು ಮಾಡಿದ್ದೇನೆ. ಎಲ್ಲರು ಚೆನ್ನಾಗಿದ್ದಾರೆ. ಆದರೆ ನನ್ನ ಮಗಳಿಗೆ ಹೀಗಾಯಿತು. ಆದರೂ ತಪ್ಪು ಮಾಡದಿದ್ದರೆ ತಲೆ ತಗ್ಗಿಸುವ ಪ್ರಮೇಯ ಇಲ್ಲ. ಅವಳು ಈಗ ಡಿಪ್ರೆಶನ್ನಿಂದ ಹೊರಗೆ ಬಂದಿದ್ದಾಳೆ. ಡೈವೋರ್ಸ್ ಪಡೆದು 5 ವರ್ಷದ ಮಗನ ಲಾಲನೆ ಪಾಲನೆ ಮಾಡಿಕೊಂಡು ಇದ್ದಾಳೆ" ಎಂದು ಶನೂರ್ ಸನಾ ಹೇಳಿದ್ದಾರೆ.


Click it and Unblock the Notifications











