ಚಿತ್ರಗಳು ಸೋತ್ರೂ ಕ್ರೇಜ್ ಕಮ್ಮಿ ಆಗ್ಲಿಲ್ಲ; 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೆ ಶ್ರೀಲೀಲಾ ಭಾರೀ ಸಂಭಾವನೆ
ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ ಬಳಿಕ ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಂಡರು. ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಆದರೆ ಈವರೆಗೆ ಶ್ರೀಲೀಲಾಗೆ ದೊಡ್ಡ ಬ್ರೇಕ್ ಸಿಗಲೇ ಇಲ್ಲ.
ಶ್ರೀಲೀಲಾ ಗ್ಲಾಮರ್ ಹಾಗೂ ಡ್ಯಾನ್ಸ್ ಮೂಲಕ ತೆರೆಮೇಲೆ ಮೋಡಿ ಮಾಡುತ್ತಿದ್ದಾರೆ. ಆದರೂ ಯಾಕೋ ದೊಡ್ಡ ಗೆಲುವು ಸಿಗುತ್ತಿಲ್ಲ. ಈ ವಾರ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆ ಆಗ್ತಿದೆ. ಹರೀಶ್ ಶಂಕರ್ ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಚಿತ್ರಕ್ಕಾಗಿ ಶ್ರೀಲೀಲಾ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದು ಫಿಲ್ಮ್ ನಗರ್ನಲ್ಲಿ ಚರ್ಚೆ ನಡೀತಿದೆ.

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ರಾಜಕೀಯರಂಗದಲ್ಲಿ ಪವನ್ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯ ಹೊಸ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ನಿಂತೇ ಹೋಯ್ತು ಎಂದುಕೊಂಡಿದ್ದ ಸಿನಿಮಾ ಅಂತೂ ಇಂತೂ ತೆರೆಗೆ ಬರ್ತಿದೆ. ಮುಂದಿನ ವಾರ ಬರಬೇಕಿದ್ದ ಸಿನಿಮಾ ಒಂದು ವಾರ ಮುನ್ನ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ಹಿಟ್ ಆಗಿದೆ.
ಶ್ರೀಲೀಲಾ ನಿಧಾನವಾಗಿ ಬಾಲಿವುಡ್ ಕಡೆ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ಕಾರ್ತಿಕ್ ಆರ್ಯನ್ ಜೊತೆ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಮತ್ತಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಅತ್ತ ತಮಿಳಿನಲ್ಲಿ ಕೂಡ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಸೋಲು ಗೆಲುವು ಪಕ್ಕಕ್ಕಿಟ್ಟು ಆಕೆಗೆ ಫಿಲ್ಮ್ ಮೇಕರ್ಸ್ ಹೆಚ್ಚು ಹೆಚ್ಚು ಅವಕಾಶ ಕೊಡುತ್ತಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ಒಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಗೀತಾ ಎಂಬ ಪಾತ್ರದಲ್ಲಿ ಶ್ರೀಲೀಲಾ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕಾಗಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಆಕೆಗಿರುವ ಕ್ರೇಜ್, ಫ್ಯಾನ್ ಫಾಲೋಯಿಂಗ್ ನೋಡಿ ನಿರ್ಮಾಪಕರು ಸಂಭಾವನೆ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಪವನ್ ಕಲ್ಯಾಣ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಶ್ರೀಲೀಲಾ ಸಂತಸಗೊಂಡಿದ್ದಾರೆ.
"ನಾನು ಪವನ್ ಕಲ್ಯಾಣ್ ಅವರೊಟ್ಟಿಗೆ ನಟಿಸುವ ಸುದ್ದಿ ಕೇಳಿ ನಮ್ಮ ಅಮ್ಮ ಕೂಡ ಬಹಳ ಖುಷಿಪಟ್ಟರು. ಅವರಿಗೆ ಪವನ್ ಸರ್ ಫೇವರಿಟ್ ಎಂದು ಶ್ರೀಲೀಲಾ ಹೇಳಿದ್ದಾರೆ. ಒಂದ್ಕಡೆ ಎಂಬಿಬಿಎಂ ವಿದ್ಯಾಭ್ಯಾಸದ ಜೊತೆ ಜೊತೆಗೆ ಸಿನಿಮಾದಲ್ಲಿ ನಟಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎರಡನ್ನು ನಿಭಾಯಿಸುವುದು ಕಷ್ಟವಾಗಿತ್ತು ಎಂದು ಸಂದರ್ಶನದಲ್ಲಿ ಶ್ರೀಲೀಲಾ ತಿಳಿಸಿದ್ದಾರೆ.
ರವಿತೇಜಾ, ಬಾಲಕೃಷ್ಣ ಹಾಗೂ ಮಹೇಶ್ ಬಾಬು ರೀತಿಯ ಸ್ಟಾರ್ ನಟರ ಜೊತೆಗೆ ಶ್ರೀಲೀಲಾ ನಟಿಸಿ ಗಮನ ಸೆಳೆದಿದ್ದಾರೆ. ತಮ್ಮ ಡ್ಯಾನ್ಸ್ ಮೂಲಕ ತೆಲುಗು ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಮತ್ತಷ್ಟು ಒಳ್ಳೆ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಇನ್ನು ತೆಲುಗಿನಲ್ಲಿ ಬ್ಯುಸಿ ಆಗುತ್ತಿದ್ದಂತೆ ಆಕೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಬಿಟ್ಟಿದ್ದಾರೆ.
ಹಿಂದೆ ಪವನ್ ಕಲ್ಯಾಣ್ ಹಾಗೂ ಹರೀಶ್ ಶಂಕರ್ ಕಾಂಬಿನೇಷನ್ನಲ್ಲಿ 'ಗಬ್ಬರ್ ಸಿಂಗ್' ಸಿನಿಮಾ ಬಂದು ಗೆದ್ದಿತ್ತು. ಹಾಗಾಗಿ ಅವರಿಬ್ಬರು ಒಟ್ಟಿಗೆ ಸೇರಿ ಮಾಡಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ. ಅಭಿಮಾನಿಗಳಂತೂ ದೊಡ್ಡಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ತಯಾರಿ ನಡೆಸಿದ್ದಾರೆ.


Click it and Unblock the Notifications











