"ನೀಲ್ಗೆ ಒಂದು ಕೆಟ್ಟ ಅಭ್ಯಾಸವಿದೆ.. ನನಗೆ ಕೋಪ ಬರ್ತಿತ್ತು"; ಶ್ರಿಯಾ ರೆಡ್ಡಿ
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ತಕ್ಕ ಮಟ್ಟಿಗೆ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿ ಪ್ರಭಾಸ್- ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವು ಘಟಾನುಘಟಿ ಕಲಾವಿದರಿದ್ದರು. ವರದರಾಜ್ ಮನ್ನಾರ್ ಸಹೋದರಿ ಪಾತ್ರದಲ್ಲಿ ಶ್ರಿಯಾ ರೆಡ್ಡಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಆ ಪಾತ್ರವೂ ಹೈಲೆಟ್ ಆಗಿತ್ತು.
ದೇವ ಹಾಗೂ ವರದರಾಜ್ ಮನ್ನಾರ್ ಸ್ನೇಹ, ವೈರತ್ವದ ಕಥೆ 'ಸಲಾರ್'. ಕನ್ನಡದ 'ಉಗ್ರಂ' ಟೆಂಪ್ಲೆಟ್ನಲ್ಲೇ ಹೊಸ ಪ್ರಪಂಚವನ್ನು ಪ್ರಶಾಂತ್ ನೀಲ್ ಕಟ್ಟಿಕೊಟ್ಟಿದ್ದರು. ಖಾನ್ಸರ್ ನಾಯಕ ರಾಜ ಮನ್ನಾರ್(ಜಗಪತಿ ಬಾಬು)ಗೆ 4 ಜನ ಮಕ್ಕಳು. ಅದರಲ್ಲಿ ರಾಧಾ ರಮಾ ಮನ್ನಾರ್(ಶ್ರಿಯಾ ರೆಡ್ಡಿ) ಪಾತ್ರಕ್ಕೂ ಬಹಳ ಸ್ಕೋಪ್ ಇತ್ತು. ಬಹಳ ಪವರ್ಫುಲ್ ಆದ ಪಾತ್ರದಲ್ಲಿ ಶ್ರಿಯಾ ನಟಿಸಿದ್ದರು.

ತಮಿಳಿನ 'ತಿಮಿರು' ಚಿತ್ರದಲ್ಲಿ ಕೂಡ ಇಂಥದ್ದೆ ಖಡಕ್ ರೋಲ್ನಲ್ಲಿ ಶ್ರಿಯಾ ರೆಡ್ಡಿ ನಟಿಸಿ ಗೆದ್ದಿದ್ದರು. ಬಹಳ ವರ್ಷಗಳ ಬಳಿಕ 'ಸಲಾರ್' ಚಿತ್ರದ ಪಾತ್ರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಶ್ರಿಯಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರಶಾಂತ್ ನೀಲ್ ಬಗ್ಗೆಯೂ ವಿವರಿಸಿದ್ದಾರೆ. 'ಸಲಾರ್-2' ಬಗ್ಗೆಯೂ ಸುಳಿವು ನೀಡಿದ್ದಾರೆ.
"ನಾನು ಪ್ರತಿದಿನ ನೀಲ್ರನ್ನು ಗೋಳು ಹೊಯ್ದುಕೊಳ್ಳುತ್ತಿದ್ದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಚಿತ್ರದ ಲೀಡ್ ರೋಲ್ಗಳಲ್ಲಿ ನಟಿಸಿದ್ದರೂ 'ಸಲಾರ್' ನಿರೂಪಣೆಯಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು ಎಂದು ನಾನು ಕೇಳುತ್ತಿದ್ದೆ. ನಟಿಯರು ಈ ರೀತಿ ತಮ್ಮ ಪಾತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಕು ಎಂದು ನಾನು ಭಾವಿಸುತ್ತೇನೆ. ನನ್ನ ಡೈಲಾಗ್ಗಳ ಬಗ್ಗೆ, ನಾನು ಎಲ್ಲಿ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತೇನೆ ಮತ್ತು ನನ್ನ ಪಾತ್ರ ಯಾವ ಕ್ಷಣದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ನಾನು ನೀಲ್ಗೆ ಕೇಳುತ್ತಿದ್ದೆ"

"ಕಲಾವಿದರು ತಮ್ಮ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು, ಆದರೆ ಕೆಲವರು ಸಾಮಾನ್ಯವಾಗಿ ಕೇಳುವುದಿಲ್ಲ. ಕೆಲವು ಕಲಾವಿದರು ದೊಡ್ಡ ಚಿತ್ರದ ಭಾಗವಾಗಿದ್ದರೆ ಸಾಕು ಎಂದುಕೊಳ್ಳುತ್ತಾರೆ. ಆದರೆ ಕಲಾವಿದರು ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದಾಗ ಮಾತ್ರ ನೀವು ವ್ಯತ್ಯಾಸವನ್ನು ನೋಡುತ್ತೀರಿ. ನಾನು ಸೆಟ್ಗೆ ಹೋದಾಗ, ನಾನು ಏನು ಮಾತನಾಡುತ್ತೇನೆ ಎಂದು ನನಗೆ ತಿಳಿಯಬೇಕು. ಪ್ರಶಾಂತ್ ನೀಲ್ಗೆ ಸೆಟ್ನಲ್ಲಿ ಸಂಭಾಷಣೆ ಬರೆಯುವ ಅಭ್ಯಾಸವಿದೆ. ಅದು ಕೆಟ್ಟದಾಗಿತ್ತು. ಆ ರೀತಿ ಪ್ರತಿ ಬಾರಿ ಮಾಡಿದಾಗ ಕೊಂದೇಬಿಡಬೇಕು ಎನಿಸುತ್ತಿತ್ತು ಎಂದು ಶ್ರಿಯಾ ನಕ್ಕಿದ್ದಾರೆ.
ಮಾತು ಮುಂದುವರೆಸಿರುವ ಶ್ರಿಯಾ ರೆಡ್ಡಿ "ಸಂಭಾಷಣೆಗಳನ್ನು ಕಲಿಯಲು ನಾನು ನನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತೇನೆ. ನನಗೆ ಪ್ರಾಂಪ್ಟ್ ಮಾಡುವುದು ಇಷ್ಟವಿಲ್ಲ ಹಾಗೂ ನಾವು ಆ ಪಾತ್ರವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಕಲಾವಿದರು ಆ ಪಾತ್ರವೇ ತಾವಾದಾಗ ಮಾತ್ರ ಪರಿಣಾಮ ಚೆನ್ನಾಗಿರುತ್ತದೆ" ಎಂದಿದ್ದಾರೆ.
ಇನ್ನು 'ಸಲಾರ್-2' ಬಗ್ಗೆ ಮಾತನಾಡಿರುವ ಶ್ರಿಯಾ ರೆಡ್ಡಿ "ಮೊದಲ ಭಾಗಕ್ಕಿಂತ ಸೀಕ್ವೆಲ್ನಲ್ಲಿ ನಟಿಸೋದು ಸುಲಭ. ಯಾಕಂದರೆ ಎಲ್ಲವೂ ನಮಗೆ ಈಗ ಗೊತ್ತಿದೆ. ರಾಧಾ ರಮಾ ಮನ್ನಾರ್ ಸೇಡು ತೀರಿಸಿಕೊಳ್ಳಬೇಕು. ಹಾಗಾಗಿ ನನಗೆ ಈ ಸೀಕ್ವೆಲ್ ಬಗ್ಗೆ ಬಹಳ ಕುತೂಹಲವಿದೆ. ಕೆಲ ಪಾತ್ರಗಳು ಯಾಕೆ ಕತ್ತಿ ಎತ್ತಲಿಲ್ಲ. ರೋಚಕ ಹಂತಕ್ಕೆ ಹೋದರೂ ಸುಮ್ಮನಿದ್ದರು. ಅದಕ್ಕೆ ಕಾರಣ ಮುಂದೆ ಗೊತ್ತಾಗುತ್ತದೆ. 2ನೇ ಭಾಗದಲ್ಲಿ ನಿಜವಾದ ಗೇಮ್ ಇದೆ. ಪ್ರಶಾಂತ್ ನೀಲ್ ಪಾರ್ಟ್-2ನಲ್ಲಿ ನಿಜವಾದ ಎಲಿಮೆಂಟ್ ತೋರಿಸಲು ಹೊರಟಿದ್ದಾರೆ" ಎಂದು ಶ್ರಿಯಾ ರೆಡ್ಡಿ ವಿವರಿಸಿದ್ದಾರೆ.


Click it and Unblock the Notifications











