3 ಸಾವಿರದಿಂದ 1 ಕೋಟಿ ರೂ. ಸಂಭಾವನೆ: 4 ಬಾರಿ ಪ್ರಾಣಾಪಾಯದಿಂದ ವಿಜಯಶಾಂತಿ ಪಾರು
ತೆಲುಗು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ವಿಜಯಶಾಂತಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಒಂದ್ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ವಿಜಯಶಾಂತಿ ಸ್ಟಾರ್ ನಟರ ರೇಂಜಿಗೆ ಸಂಭಾವನೆ ಪಡೆಯುತ್ತಿದ್ದಾರೆ.
80, 90ರ ದಶಕದಲ್ಲಿ ವಿಜಯಶಾಂತಿ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದರು. ಇನ್ನು ಆಕ್ಷನ್ ಸಿನಿಮಾಗಳಲ್ಲಿ ವಿಜಯ ಶಾಂತಿ ಹೆಚ್ಚು ನಟಿಸುತ್ತಿದ್ದರು. ಲೇಡಿ ಓರಿಯಂಟೆಡ್ ಸಿನಿಮಾಗಳನ್ನು ಏಕಾಂಗಿಯಾಗಿ ಗೆಲ್ಲಿಸುತ್ತಿದ್ದರು. ತಮ್ಮ ರಫ್ ಅಂಡ್ ರೋಲ್ಗಳಿಂದ ವಿಜಯಶಾಂತಿ ಮಹಿಳಾ ಪ್ರೇಕ್ಷಕರಿಗೆ ಹೆಚ್ಚು ಹೆಚ್ಚು ಹತ್ತಿರವಾಗಿದ್ದರು. 13 ವರ್ಷಗಳ ನಂತರ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ವಿಜಯಶಾಂತಿ ಪವರ್ ಫುಲ್ ರೋಲ್ನಲ್ಲಿ ಮಿಂಚಿದ್ದರು. ಸದ್ಯ ಸಕ್ರಿಯ ರಾಜಕಾರಣದಲ್ಲಿ ಗುರ್ತಿಸಿಕೊಂಡಿರುವ ಲೇಡಿ ಸೂಪರ್ ಸ್ಟಾರ್ ಮತ್ತೆ ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಎಂದು ಹೇಳಿದ್ದಾರೆ.
ವಿಜಯಶಾಂತಿ ಸಾಕಷ್ಟು ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೂಟಿಂಗ್ ವೇಳೆ ರಿಯಲ್ ಸ್ಟಂಟ್ ಮಾಡಲು ಹೋಗಿ ಸಾಕಷ್ಟು ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ವಿಜಯಶಾಂತಿ ಮಾತನಾಡಿದ್ದಾರೆ.

ಟ್ರೈನ್ ಸ್ಟಂಟ್ ವೇಳೆ ಎಡವಟ್ಟು
1995ರಲ್ಲಿ ಬಂದ 'ಲೇಡಿ ಬಾಸ್' ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಕೂದಲಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಗಿ ವಿಜಯಶಾಂತಿ ಹೇಳಿದ್ದಾರೆ. ಶೂಟಿಂಗ್ ವೇಳೆ ಡ್ಯೂಪ್ ಇಲ್ಲದೇ ನಾನು ಚಲಿಸುವ ಟ್ರೈನ್ನಲ್ಲಿ ಸ್ಟಂಟ್ ಮಾಡುತ್ತಿದೆ. ಬೋಗಿಯಿಂದ ಬೋಗಿಗೆ ಹೋಗಿ ಆಕ್ಷನ್ ಮಾಡುವ ವೇಳೆ ಕೈ ಜಾರಿ ಬೀಳುವಂತಾಗಿತ್ತು. ಕಬ್ಬಿಣದ ರಾಡ್ ಹಿಡಿದು ಬಹಳ ದೂರ ಗಾಳಿಯಲ್ಲಿ ತೇಲುತ್ತಿದ್ದೆ. ಟ್ರೈನ್ ಆಗಿದ್ದರಿಂದ ಕೂಡಲೇ ನಿಲ್ಲಿಸಲು ಆಗಲಿಲ್ಲ. ಏನೇನೋ ಮಾಡಿ ನಾನೇ ವಾಪಸ್ ಟ್ರೈನ್ನಲ್ಲಿ ಇಳಿದಿದ್ದೆ. ಅಂದು ಆ ಘಟನೆಯ ನಂತರ ಚಿತ್ರೀಕರಣವೇ ಬೇಡ ಅಂದರು. ತಂಡದ ಎಲ್ಲರೂ ಅಳಲು ಆರಂಭಿಸಿದರು. ನಾನು ಪಟ್ಟು ಬಿಡದೇ ರೀ ಟೇಕ್ ತೆಗೆದುಕೊಂಡು ಆ ದೃಶ್ಯ ಮಾಡಿ ಮುಗಿಸಿದ್ದೆ ಎಂದು ವಿಜಯಶಾಂತಿ ಹೇಳಿದ್ದಾರೆ.

ಜೀವ ಉಳಿಸಿದ್ದ ನಟ ವಿಜಯಕಾಂತ್
ತಮಿಳು ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿಯಲ್ಲಿ ತಲೆ ಕೂದಲು ಉಟ್ಟಿದ್ದ ಸೀರೆ ಸುಟ್ಟು ಹೋಗಿತ್ತು. ಆದ ದಿನ ತಮಿಳು ನಾಯಕ ನಟ ವಿಜಯಕಾಂತ್ ತಮ್ಮನ್ನು ಕಾಪಾಡಿದ್ದರು ಎಂದು ವಿಜಯಶಾಂತಿ ವಿವರಿಸಿದ್ದಾರೆ. ಶೂಟಿಂಗ್ಗಾಗಿ ಗುಡಿಸಲು ಮಾದರಿಯಲ್ಲಿ ಸೆಟ್ ಹಾಕಿದ್ದರು. ನನ್ನನ್ನು ಮಧ್ಯದಲ್ಲಿ ಕಟ್ಟಿ ನಿಲ್ಲಿಸಿ, ಬೆಂಕಿ ಹಚ್ಚಿದ್ದರು. ಗಾಳಿ ಬಂದು ಪೂರ್ತಿ ಸೆಟ್ಗೆ ಬೆಂಕಿ ಹೊತ್ತಿಕೊಂಡಿತ್ತು. ಎಲ್ಲರೂ ಶಾಕ್ ಆಗಿ ನೋಡುತ್ತಿದ್ದರು. ನನ್ನನ್ನು ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಆಗ ನಟ ವಿಜಯ್ ಕಾಂತ್ ಬಂದು ಎದ್ದು, ಬೆಂಕಿ ಆರಿಸಿ ನನ್ನನ್ನು ರಕ್ಷಿಸಿದ್ದರು. ಆದರೂ ತಲೆ ಕೂದಲು, ಸೀರೆ ಸುಟ್ಟು ಹೋಗಿತ್ತು ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶ
1995ರಲ್ಲಿ ವಿಮಾನ ಚೆನ್ನೈನಿಂದ ಹೈದರಾಬಾದ್ಗೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿತ್ತು. ಆ ದಿನ ತೆಲುಗು ಸಿನಿಮಾ ಕಲಾವಿದರೆಲ್ಲಾ ಚೆನ್ನೈನಲ್ಲಿ ದೀಪಾವಳಿ ಆಚರಿಸಲು ಹೋಗಿದ್ದೆವು. ಮರಳಿ ವಾಪಸ್ ಹೈದರಾಬಾದ್ಗೆ ಹೊರಡಲು ಬೆಳಗ್ಗೆ 6 ಗಂಟೆಗೆ ಫ್ಲೈಟ್ ಏರಿದ್ದೆವು. ಅಂದು ಫ್ಲೈಟ್ನಲ್ಲಿ ಚಿರಂಜೀವಿ, ಬಾಲಕೃಷ್ಣ, ಬ್ರಹ್ಮಾನಂದಂ ಸೇರಿ 50ರಿಂದ 60 ಜನ ಸಿನಿಮಾ ಕಲಾವಿದರು ಅವರು ಕುಟುಂಬ ಸದಸ್ಯರು ಇದ್ದರು. ಒಟ್ಟು 270 ಜನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆವು. ವಿಮಾನ ಹೈದರಾಬಾದ್ನಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷದಿಂದ ವಿಮಾನದ ಸಿಬ್ಬಂದಿ ಅತ್ತಿದ್ದ ಭಯಭೀತರಾಗಿ ಓಡಾಡುತ್ತಿದ್ದರು. ದಿಢೀರ್ ಭೂಸ್ಪರ್ಶ ಮಾಡುವುದಾಗಿ ಪೈಲೆಟ್ ಹೇಳಿದ್ದರು. ನಮಗೆಲ್ಲಾ ಭಯವಾಗಿತ್ತು. ಕೆಲ ಹೊತ್ತು ವಿಮಾನವನ್ನು ಆಕಾಶದಲ್ಲಿ ಸುತ್ತಾಡಿಸಿ, ಇಂಧನ ಖಾಲಿ ಆದಮೇಲೆ ನಿಧಾನಕ್ಕೆ ತಂದು ಪೈಲೆಟ್ ಹಳ್ಳಿಯ ಗದ್ದೆಯೊಂದರಲ್ಲಿ ಇಳಿಸಿದ್ದರು. ಅದೃಷ್ಟವಶಾತ್ ಅಂದು ನಾವು ಭಾರೀ ದುರಂತದಿಂದ ಪಾರಾಗಿದ್ದೆವು ಎಂದು ವಿಜಯಶಾಂತಿ ವಿವರಿಸಿದ್ದಾರೆ. ಇದೇ ರೀತಿ ಲೇಡಿ ಸೂಪರ್ ಸ್ಟಾರ್ ಸಾಕಷ್ಟು ಬಾರಿ ಸಾವಿನ ಕದ ತಟ್ಟಿ ಬಂದಿದ್ದರಂತೆ.

ಮೊದಲ ಸಂಭಾವನೆ 3 ಸಾವಿರ
180ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಜಯಶಾಂತಿ ನಟಿಸಿದ್ದಾರೆ. ನನ್ನ ಮೊದಲ ಸಿನಿಮಾ ಸಂಭಾವನೆ 5 ಸಾವಿರ. ಆದರೆ 2 ಸಾವಿರ ಕಳೆದ ಬರೀ 3 ಸಾವಿರ ಕೊಟ್ಟಿದ್ದರು. 3 ಸಾವಿರದಿಂದ ಕೋಟಿ ರೂಪಾಯಿ ಸಂಭಾವನೆ ಪಡೆಯುವಮಟ್ಟಕ್ಕೆ ಬೆಳೆದೆ. ಆ ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದವರಲ್ಲಿ ಅಮಿತಾಬ್ ಬಚ್ಚನ್, ರಜನಿಕಾಂತ್ ಸಾಲಿನಲ್ಲಿ ನಾನು ಇದ್ದೆ. 'ಕರ್ತವ್ಯಂ' ಚಿತ್ರಕ್ಕೆ ಆಕೆ ಮೊದಲ ಬಾರಿಗೆ 1 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗುತ್ತದೆ.


Click it and Unblock the Notifications











