ಪವನ್ ಕಲ್ಯಾಣ್ ಶಾಕಿಂಗ್ ನಿರ್ಧಾರ; ಅಭಿಮಾನಿಗಳಿಗೆ ಬೇಸರ
ತೆಲುಗು ನಟ ಪವನ್ ಕಲ್ಯಾಣ್ ಇದೀಗ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಜನಸೇನಾ ಪಕ್ಷ ಕಟ್ಟಿ ಗೆದ್ದು ಆಂಧ್ರದ ಉಪಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಈ ವಾರ ಪವನ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಬಿಡುಗಡೆ ಆಗ್ತಿದೆ.
ಸಹೋದರ ಚಿರಂಜೀವಿ ಹಾದಿಯಲ್ಲೇ ಪವನ್ ಕಲ್ಯಾಣ್ ಕೂಡ ಚಿತ್ರರಂಗಕ್ಕೆ ಬಂದವರು. ಆದರೆ ಬಳಿಕ ತಮ್ಮದೇ ವಿಭಿನ್ನ ಮ್ಯಾನರಿಸಂ, ಸ್ಟೈಲ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಕಠಿಣ ಪರಿಶ್ರಮದ ಮೂಲಕ ಮೆಗಾಸ್ಟಾರ್ ಪ್ರಭಾವಳಿಯಿಂದ ಹೊರಬಂದು ಸಕ್ಸಸ್ ಕಂಡರು. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗಕ್ಕೆ ಧುಮುಕಿದರು.

10 ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿ ಕೊನೆಗೂ ಪವನ್ ಕಲ್ಯಾಣ್ ಗೆದ್ದು ಬೀಗಿದರು. ರಾಜಕೀಯರಂಗದತ್ತ ಮುಖ ಮಾಡಿದ ಕಾರಣ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಯಿತು. ಸಿನಿಮಾವನ್ನು ತಮ್ಮ ಪಕ್ಷ ಸಂಘಟನೆಗೆ ಇಂಧನವಾಗಿ ಬಳಸಿಕೊಂಡಿದ್ದಾರೆ. ಅದನ್ನು ಬಹಿರಂಗವಾಗಿ ಪವನ್ ಒಪ್ಪಿಕೊಳ್ಳುತ್ತಾರೆ. ನಾನು ರೀಮೆಕ್ ಸಿನಿಮಾಗಳನ್ನು ಮಾಡಲು ಅದೇ ಕಾರಣ ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಕೈಯಲ್ಲಿ ಇನ್ನೆರಡು ಸಿನಿಮಾಗಳಿವೆ. 'ಓಜಿ' ಹಾಗೂ 'ಉಸ್ತಾದ್ ಭಗತ್ಸಿಂಗ್' ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. 5 ವರ್ಷಗಳ ಹಿಂದೆ ಶುರುವಾಗಿದ್ದ 'ಹರಿಹರ ವೀರಮಲ್ಲು' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. "ನಾನು ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದೀನಿ. ಹಾಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೆಚ್ಚು ಸಮಯ ಕೊಡ ಸಾಧ್ಯವಿಲ್ಲ. ಆದರೆ ಸಿನಿಮಾ ನಿರ್ಮಾಣ ಆರಂಭಿಸುತ್ತೇನೆ" ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
'ಹರಿಹರ ವೀರಮಲ್ಲು' ಸಿನಿಮಾ ಪ್ರಚಾರದ ಭಾಗವಾಗಿ ಪವನ್ ಕಲ್ಯಾಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ತಾವು ಮುಂದೆ ಸಿನಿಮಾಗಳಲ್ಲಿ ಹೆಚ್ಚು ನಟಿಸುವುದು ಅನುಮಾನ ಎಂದಿದ್ದಾರೆ. ನಿರ್ಮಾಪನಾಗಿ ಚಿತ್ರರಂಗದ ಜೊತೆ ನಂಟು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಪವನ್ ನಿರ್ಧಾರ ಅಭಿಮಾನಿಗಳಿಗೆ ಬೇಸರ ತಂದಿದೆ.

"ಈ ಕ್ಷಣದಲ್ಲಿ ಸಿನಿಮಾ ಅಥವಾ ಪಾಲಿಟಿಕ್ಸ್, ಎರಡರಲ್ಲಿ ನಿಮ್ಮ ಆಯ್ಕೆ ಯಾವ್ದು ಅಂದ್ರೆ ಪಾಲಿಟಿಕ್ಸ್ ಅಂತೀನಿ. ಸಿನಿಮಾ ಜೊತೆಗೆ ಪಾಲಿಟಿಕ್ಸ್ ಕಷ್ಟ. ನಾನು ರಾಜಕೀಯರಂಗದಲ್ಲಿ ಬ್ಯುಸಿ ಆಗಿದ್ದರಿಂದ 3 ಸಿನಿಮಾಗಳು ನಿಂತು ಹೋಯಿತು. ನನ್ನಿಂದ ನಿರ್ಮಾಪಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಡೇಟ್ಸ್ ಹೊಂದಿಸಿಕೊಂಡು ನಟಿಸುತ್ತಿದ್ದೇನೆ. 'ಹರಿಹರ ವೀರಮಲ್ಲು' ಸಿನಿಮಾ 5 ವರ್ಷಗಳಿಂದ ನಿರ್ಮಾಣವಾಗಿದೆ. ಇದು ಹಿಟ್ ಆಗುತ್ತೋ ಇಲ್ಲವೋ ಗೊತ್ತಿಲ್ಲ. ನನಗೆ ಸಿನಿಮಾ ಮೇಲೆ ನಂಬಿಕೆ ಇದೆ" ಪವನ್ ಕಲ್ಯಾಣ್ ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿರುವ ಪವನ್ ಕಲ್ಯಾಣ್ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮೌನ ಮುರಿದಿದ್ದಾರೆ. "ಆಂಧ್ರ ಡಿಸಿಎಂ ಆಗಿದ್ದುಕೊಂಡೇ ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸಬೇಕಿದೆ. ಹಾಗಾಗಿ ಇನ್ನುಮುಂದೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವ ಅವಕಾಶ ಇರುವುದಿಲ್ಲ ಅನ್ನಿಸುತ್ತೆ. ಆದರೆ ಸಿನಿಮಾ ನನಗೆ ಇಂಧನ. ಹಾಗಾಗಿ ನಿರ್ಮಾಪಕನಾಗಿ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದೇನೆ. ಸಿನಿಮಾಗಳಲ್ಲಿ ನಟಿಸುವುದಕ್ಕೆ ಇನ್ನು ಎರಡ್ಮೂರು ವರ್ಷ ಬೇಕಾಗಬಹುದು. ಅದೇ ಕಾರಣಕ್ಕೆ ಸಿನಿಮಾ ನಿರ್ಮಾಪಕನಾಗಿ ಚಿತ್ರರಂಗದ ಜೊತೆ ಅನುಬಂಧ ಮುಂದುವರೆಸುತ್ತೇನೆ. ಹಣ ಬರುತ್ತದೆ. ನನಗೆ ಬೇರೆ ಉದ್ಯಮ ಇಲ್ಲ. ಹಾಗಾಗಿ ಸಿನಿಮಾ ಒಂದೇ ದಿಕ್ಕು. ಹೀರೊ ಆಗಿ ಅಲ್ಲದೇ ಇದ್ದರೂ ನಿರ್ಮಾಪಕನಾಗಿ ನನ್ನ ಸಿನಿಮಾಗಳು ಬರ್ತಾವೆ" ಎಂದು ಪವನ್ ತಿಳಿಸಿದ್ದಾರೆ.
ಸಾಧ್ಯವಾದಷ್ಟು ಬೇಗ 'ಓಜಿ' ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳ ಚಿತ್ರೀಕರಣ ಮುಗಿಸುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಪವನ್ ಹೇಳಿಕೆ ಸಹಜವಾಗಿಯೇ ಅಭಿಮಾನಿಗಳಿೆ ಬೇಸರ ತಂದಿದೆ. ಸಿನಿಮಾರಂಗದಲ್ಲಿ ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಪವನ್ ರಾಜಕೀಯರಂಗ ಪ್ರವೇಶಿಸಿದ್ದರು. ಈ ಹಿಂದೆ ಕೂಡ ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಬಳಿಕ 3 ಸಿನಿಮಾ ಒಪ್ಪಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಜನಸೇನಾನಿ ನಿರ್ಧಾರ ಬದಲಿಸುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











