Akhanda 2 Trailer; ಸನಾತನ ಧರ್ಮದ ತಂಟೆಗೆ ಬಂದವರ ವಿರುದ್ಧ 'ಅಖಂಡ' ಬಾಲಯ್ಯ ಸರ್ಜಿಕಲ್ ಸ್ಟ್ರೈಕ್
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿಕ್ಕಬಳ್ಳಾಪುರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದೆ. ನಟ ಶಿವರಾಜ್ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಾಜರಾಗಿ ಶುಭ ಕೋರಿದ್ದಾರೆ. ಡಿಸೆಂಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.
4 ವರ್ಷಗಳ ಹಿಂದೆ ಬಂದಿದ್ದ ಬ್ಲಾಕ್ಬಸ್ಟರ್ 'ಅಖಂಡ' ಚಿತ್ರದ ಸೀಕ್ವೆಲ್ ಇದು. ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿದ್ದು ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. 'ಕಷ್ಟಬಂದ್ರೆ ದೇವರು ಬರ್ತಾನೆ ಅಂತ ನಂಬಿರೋ ಜನಕ್ಕೆ ಕಷ್ಟ ಬಂದ್ರೂ ದೇವರು ಬರಲ್ಲ ಅಂರ ನಂಬಿಸ್ಬೇಕು' ಎನ್ನುವ ಡೈಲಾಗ್ ಹಿನ್ನೆಲೆಯಲ್ಲಿ ಟ್ರೈಲರ್ ಶುರುವಾಗುತ್ತದೆ. ಅಲ್ಲಿಂದ ಮುಂದೆ 2 ನಿಮಿಷ 30 ಸೆಕೆಂಡ್ ಅಖಂಡ ಬಾಲಯ್ಯ ವಿಶ್ವರೂಪ ದರ್ಶನ ಮಾಡಿಸಲಾಗಿದೆ.

ಬಾಲಕೃಷ್ಣ ಜಬರ್ದಸ್ತ್ ಡೈಲಾಗ್ಸ್ ಜೊತೆಗೆ ಆಕ್ಷನ್ ಸನ್ನಿವೇಶಗಳನ್ನು ಸೇರಿಸಿ ಟ್ರೈಲರ್ ಕಟ್ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ತಮಿಳು ನಟ ಆದಿ ಪಿನಿಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸನಾತನ ಧರ್ಮ ರಕ್ಷಣೆಯ ವಿಚಾರವನ್ನು ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಅಖಂಡ ಹಾಗೂ ಮುರಳಿಕೃಷ್ಣ ಆಗಿ ಬಾಲಯ್ಯ ದರ್ಬಾರ್ ಜೋರಾಗಿದೆ.
'ಭಜರಂಗಿ ಭಾಯಿಜಾನ್' ಚಿತ್ರದಲ್ಲಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾಳೆ. ಒಂದ್ಕಡೆ ಮಹಾಕುಂಭ ಮೇಳದಲ್ಲಿ ವಿಧ್ವಂಸಕ್ಕೆ ಮುಂದಾದ ಭಯೋತ್ಪಾದಕರು, ಮತ್ತೊಂದು ಕಡೆ 8 ಜನರನ್ನು ಕೊಲ್ಲಬೇಕು ಎಂದು ಶಪಥ ಮಾಡುವ ದುಷ್ಟ(ಆದಿ ಪಿನಿಶೆಟ್ಟಿ) ಮಂತ್ರವಾದಿ. ಇದನ್ನೆಲ್ಲಾ ಅಖಂಡ ಹಾಗೂ ಮುರಳಿಕೃಷ್ಣ ಹೇಗೆ ತಡೆಯುತ್ತಾರೆ ಎನ್ನುವುದು ಚಿತ್ರದ ಕಥೆ ಎನ್ನುವುದು ಗೊತ್ತಾಗುತ್ತಿದೆ.
ಸಂಯುಕ್ತಾ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಬಾಲಯ್ಯ ಶೈಲಿಯ ಬಿಲ್ಡಪ್ ಆಕ್ಷನ್ ಸನ್ನಿವೇಶಗಳು ಸಾಕಷ್ಟಿದೆ. 'ದೇಶದ ತಂಟೆಗೆ ಬಂದ್ರೆ ನೀವು ಶಿಕ್ಷಿಸ್ತೀರಾ, ದೈವದ ತಂಟೆಗೆ ಬಂದ್ರೆ ನಾವು ಕತ್ತರಿಸ್ತೀವಿ. ನಿಮ್ಮ ಭಾಷೆಯಲ್ಲಿ ಹೇಳಬೇಕು ಅಂದ್ರೆ ಸರ್ಜಿಕಲ್ ಸ್ಟ್ರೈಕ್' ಎನ್ನುವ ಡೈಲಾಗ್ ಹೈಲೆಟ್ ಆಗಿದೆ. 'ಕೆಜಿಎಫ್-2' ಚಿತ್ರದ ದೊಡ್ಡಮ್ಮ ರೀತಿಯ ದೊಡ್ಡ ಗನ್ ಅನ್ನು ತ್ರಿಶೂಲದ ಮೂಲಕ ಫೈರ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಕಿಕ್ ಕೊಡುವ ಸಾಧ್ಯತೆಯಿದೆ.
'ಅಖಂಡ- 2' ಸಿನಿಮಾ 2D ಮಾತ್ರವಲ್ಲದೇ 3Dಯಲ್ಲಿ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದ್ದು ಕನ್ನಡ ವರ್ಷನ್ ಟ್ರೈಲರ್ ಕೂಡ ಬಂದಿದೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. 'ಅಖಂಡ' ಸಿನಿಮಾ ಕೂಡ ಡಿಸೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದಿತ್ತು. ಅದೇ ಸಮಯದಕ್ಕೆ ಸೀಕ್ವೆಲ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.
ಬಾಲಯ್ಯ ನಟಿಸಿದ ಚಿತ್ರಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಸೀಕ್ವೆಲ್ ತೆರೆಗೆ ತರುವ ಪ್ರಯತ್ನಕ್ಕೆ ಬಾಲಕೃಷ್ಣ ಹಾಗೂ ಬೋಯಪಾಟಿ ಮುಂದಾಗಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 'ಅಖಂಡ'-2 ಸಿನಿಮಾ ಟ್ರೈಲರ್ ಅನಾವರಣವಾಗಿದೆ. ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ "ಕನ್ನಡದಲ್ಲಿ ಎನರ್ಜಿ ಅಂದ್ರೆ ಶಿವಣ್ಣ, ತೆಲುಗಿನಲ್ಲಿ ಬಾಲಯ್ಯ ಎನ್ನುವಂತೆ ಇರುತ್ತದೆ. ಇವತ್ತು ಅವ್ರು ಬಂದಿರೋದು ಎನರ್ಜಿ ತಂದಿದೆ" ಎಂದು ಶಿವಣ್ಣ ಹೇಳಿದ್ದಾರೆ.
'ಸತ್ಯ ಈಸ್ ಇನ್ ಲವ್' ಚಿತ್ರದ ಚಿತ್ರೀಕರಣಕ್ಕಾಗಿ ಶಿವಣ್ಣ ಚಿಂತಾಮಣಿಗೆ ಹೋಗಿದ್ದರಂತೆ. ಬಳಿಕ ಈ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ. "ಬಾಲಯ್ಯ ತಂದೆ ನಮಗೆ ದೊಡ್ಡಪ್ಪ ತರ. ಹಾಗಾಗಿ ನಮಗೆ ಅವರೆಲ್ಲಾ ಫ್ಯಾಮಿಲಿ ಇದ್ದಂತೆ. ನಾವಿಬ್ಬರ ಬ್ರದರ್ಸ್ ಇದ್ದಂತೆ. ಅವರ ಕಾರ್ಯಕ್ರಮಕ್ಕೆ ಬರುವುದು ನಮಗೆ ಖುಷಿಯ ವಿಚಾರ. ಮಳೆಯ ಕಾರಣ ಕೆಲವರು ನಿರಾಸೆಯಿಂದ ಹೋಗಿದ್ದಾರೆ. ಮತ್ತೆ ಇಲ್ಲಿಗೆ ಬಂದು ದೊಡ್ಡದಾಗಿ ಕಾರ್ಯಕ್ರಮ ಮಾಡ್ತೀವಿ. ನಿಮ್ಮ ಪ್ರೀತಿ ವಿಶ್ವಾಸ ಇದೇ ರೀತಿ ಕಲಾವಿದರ ಮೇಲಿರಲಿ ಎಂದು ಹೇಳಿದ್ದಾರೆ.


Click it and Unblock the Notifications











