ಮತ್ತೆ ಬಾಲಯ್ಯನ ಚಿತ್ರಕ್ಕೆ ಶಿವರಾಜ್ಕುಮಾರ್ ಬೆಂಬಲ; ಚಿಕ್ಕಬಳ್ಳಾಪುರದಲ್ಲಿ ಮಹಾ ಸಂಗಮ
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ- 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 4 ವರ್ಷಗಳ ಹಿಂದೆ 'ಅಖಂಡ' ಸಿನಿಮಾ ಡಿಸೆಂಬರ್ ಮೊದಲ ವಾರದಲ್ಲೇ ತೆರೆಗಪ್ಪಳಿಸಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದೀಗ ಸೀಕ್ವೆಲ್ ಕೂಡ ವರ್ಷದ ಕೊನೆ ತಿಂಗಳ ಮೊದಲ ವಾರ ಪ್ರೇಕ್ಷಕರ ಮುಂದೆ ಬರ್ತಿದೆ.
ಬೋಯಪಾಟಿ ಶ್ರೀನು ನಿರ್ದೇಶನದ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ತಮನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ಸದ್ಯ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಶುಕ್ರವಾರ(ನವೆಂಬರ್ 21) ಕರ್ನಾಟಕದಲ್ಲಿ 'ಅಖಂಡ- 2' ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ ನಡೆಯಲಿದೆ. ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಹಾಜರಾಗುತ್ತಿದ್ದಾರೆ.

ಮೊದಲಿನಿಂದಲೂ ನಂದಮೂರಿ ಕುಟುಂಬದ ಜೊತೆ ಅಣ್ಣಾವ್ರ ಕುಟುಂಬಕ್ಕೆ ಆತ್ಮೀಯ ಒಡನಾಟವಿದೆ. ಬಾಲಕೃಷ್ಣ ಹಾಗೂ ಶಿವಣ್ಣ ಸ್ನೇಹಿತರು. ಇನ್ನು ಪುನೀತ್ ರಾಜ್ಕುಮಾರ್ ಹಾಗೂ ಜ್ಯೂ. ಎನ್ಟಿಆರ್ ನಡುವೆ ಕೂಡ ಸ್ನೇಹವಿತ್ತು. ಬಾಲಯ್ಯ ನಟಿಸಿದ 'ಗೌತಮಿಪುತ್ರ ಶಾತಕರ್ಣಿ' ಚಿತ್ರದ ಹಾಡೊಂದಕ್ಕೆ ಶಿವಣ್ಣ ಹೆಜ್ಜೆ ಹಾಕಿದ್ದರು. ಇದು ಶಿವಣ್ಣ ಬೇರೆ ಭಾಷೆಯಲ್ಲಿ ಕಾಣಿಸಿಕೊಂಡ ಮೊದಲ ಸಿನಿಮಾ ಆಗಿತ್ತು.
ಚಿಕ್ಕಬಳ್ಳಾಪುರದಲ್ಲಿ 'ಅಖಂಡ- 2' ಟ್ರೈಲರ್ ಲಾಂಚ್ ಈವೆಂಟ್ ನಡೆಯಲಿದೆ. ಆಂಧ್ರ ಗಡಿ ಚಿಕ್ಕಬಳ್ಳಾಪುರದಲ್ಲಿ ತೆಲುಗು ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. ತೆಲುಗು ಮಾತನಾಡವವರು ಹೆಚ್ಚು ಇದ್ದಾರೆ. ಹಾಗಾಗಿ ಅಲ್ಲೇ ದೊಡ್ಡದಾಗಿ ಈವೆಂಟ್ ಮಾಡಿ ಟ್ರೈಲರ್ ಲಾಂಚ್ ಪ್ಲ್ಯಾನ್ ನಡೀತಿದೆ. ಶಿವಣ್ಣ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಬಹುದು.
ನವೆಂಬರ್ 21ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ಬೈಪಾಸ್, ಎಸ್ಎನ್ಆರ್ ಬ್ರಿಕ್ಸ್ ಫ್ಯಾಕ್ಟರಿ ಆವರಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಇಡೀ ಚಿತ್ರತಂಡ ಕಾರ್ಯಕ್ರಮಕ್ಕೆ ಹಾಜರಾಗಲಿದೆ. ಚಿತ್ರದಲ್ಲಿ ಮುರಳಿಕೃಷ್ಣ ಹಾಗೂ ಅಖಂಡ ಆಗಿ ದ್ವಿಪಾತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ.
ಸಂಯುಕ್ತಾ ಮೆನನ್, ಹರ್ಷಾಲಿ ಮಲ್ಹೋತ್ರಾ, ಆದಿ ಪನಿಶೆಟ್ಟಿ 'ಅಖಂಡ- 2' ಚಿತ್ರದ ತಾರಾಗಣದಲ್ಲಿದ್ದಾರೆ. ವರ್ಷದ ಹಿಂದೆ ಸಿನಿಮಾ ಸೆಟ್ಟೇರಿತ್ತು. ಬಹಳ ಬೇಗ ಚಿತ್ರೀಕರಣ ಮುಗಿಸಿ ಸಿನಿಮಾ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಹೈದರಾಬಾದ್, ಹಿಮಾಲಯ, ಕುಂಭಮೇಳ ಹಾಗೂ ಜಾರ್ಜಿಯಾದಲ್ಲಿ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡಿತ್ತು.
60 ಕೋಟಿ ರೂ. ಬಜೆಟ್ಟಿನ 'ಅಖಂಡ' ಸಿನಿಮಾ 150 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಉತ್ತರ ಭಾರತದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ 'ಅಖಂಡ'-2 ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಲಾಜಿಕ್ ಹುಡುಕದೇ ಬಾಲಯ್ಯ ಆರ್ಭಟ ನೋಡಿ ಮೆಚ್ಚುವವರಿಗೆ ಇದು ಹೇಳಿಮಾಡಿಸಿದಂತ ಸಿನಿಮಾ ಆಗಲಿದೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಸೀಕ್ವೆಲ್ ನಿರ್ಮಾಣವಾಗಿದೆ.
ಬಹಳ ಹಿಂದೆಯೇ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿತ್ತು. ಪದೇ ಪದೆ ರಿಲೀಸ್ ಡೇಟ್ ಬದಲಿಸಿ ಅಂತೂ ಇಂತು ಡಿಸೆಂಬರ್ 5ರಂದು 'ಅಖಂಡ- 2' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುಲಾಗ್ತಿದೆ. ಬಾಲಯ್ಯ ನಟಿಸಿದ 'ವೀರಸಿಂಹ ರೆಡ್ಡಿ', 'ಭಗವಂತ್ ಕೇಸರಿ' ಹಾಗೂ 'ಡಾಕು ಮಹಾರಾಜ್' ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ಅಖಂಡ- 2' ದರ್ಬಾರ್ ನೋಡಲು ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.


Click it and Unblock the Notifications











