'ಏಜೆಂಟ್' ಸಿನಿಮಾ ಹೀನಾಯ ಸೋಲು: ಬಹಿರಂಗ ಪತ್ರ ಬರೆದ ಅಖಿಲ್ ಅಕ್ಕಿನೇನಿ
ಅದ್ಯಾಕೋ ಟಾಲಿವುಡ್ನಲ್ಲಿ ಅಕ್ಕಿನೇನಿ ಫ್ಯಾಮಿಲಿ ಹೀರೊಗಳ ನಸೀಬೆ ಸರಿಯಿಲ್ಲ. ನಾಗಾರ್ಜುನ, ಅಖಿಲ್ ಅಕ್ಕಿನೇನಿ, ನಾಗಚೈತನ್ಯಾ ನಟಿಸಿದ ಇತ್ತೀಚಿನ ಸಿನಿಮಾಗಳು ಬಹಳ ಹೀನಾಯವಾಗಿ ಸೋಲುಂಡಿವೆ. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದು, ಸಿನಿಮಾಗಳು ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. 'ಏಜೆಂಟ್' ಸಿನಿಮಾ ಸೋಲಿನ ಪರಾಮರ್ಶೆ ಮಾಡಿಕೊಳ್ತಿದೆ ಚಿತ್ರತಂಡ. ತಮ್ಮದೇ ತಪ್ಪು ಎಂದು ಒಪ್ಪಿಕೊಂಡಿದೆ.
ಏಪ್ರಿಲ್ 28ಕ್ಕೆ ಸುರೇಂದರ್ ರೆಡ್ಡಿ ನಿರ್ದೇಶನದ ಆಕ್ಷನ್ ಎಂಟರ್ಟೈನರ್ 'ಏಜೆಂಟ್' ಸಿನಿಮಾ ರಿಲೀಸ್ ಆಗಿತ್ತು. ವಿಮರ್ಶಕರಿಗೆ ಚಿತ್ರಕ್ಲಕೆ 2 ರೇಟಿಂಗ್ ಕೂಡ ಸಿಕ್ಕಿರಲಿಲ್ಲ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕರು ಈ ಬಾರಿ ಸೋಲುಂಡಿದ್ದಾರೆ. ಇನ್ನು ಅಖಿಲ್ ಚಿತ್ರರಂಗಕ್ಕೆ ಬಂದು ವರ್ಷಗಳೇ ಕಳೆದರೂ ಒಂದೇ ಒಂದು ಸಕ್ಸಸ್ ಸಿಕ್ಕಿಲ್ಲ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 'ಏಜೆಂಟ್' ಕೂಡ ಕೈ ಹಿಡಿದಿಲ್ಲ. ಈ ಹಿಂದೆ ಸಿನಿಮಾ ಸೋಲಿನ ಬಗ್ಗೆ ನಿರ್ಮಾಪಕ ಅನಿಲ್ ಸುಂಕರ ಟ್ವೀಟ್ ಮಾಡಿ ಪ್ರೇಕ್ಷಕರ ಕ್ಷಮೆ ಕೇಳಿದ್ದರು.

ನಟ ಅಖಿಲ್ ಅಕ್ಕಿನೇನಿ 'ಏಜೆಂಟ್' ಸಿನಿಮಾ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. "ಏಜೆಂಟ್ ಚಿತ್ರತಂಡಕ್ಕೆ, ಈ ಸಿನಿಮಾ ನಿರ್ಮಾಣಕ್ಕೆ ತಮ್ಮ ಜೀವನವನ್ನು ಪಣವಾಗಿಟ್ಟ ಪ್ರತಿಯೊಬ್ಬರಿಗೂ ಧನ್ಯವಾದ. ಎಷ್ಟೇ ಕಷ್ಟ ಬಿದ್ದರೂ ದುರದೃಷ್ಟವಶಾತ್ ನಾವು ಅಂದುಕೊಂಡಿದ್ದನ್ನು ತೆರೆಮೇಲೆ ತರಲು ಸಾಧ್ಯವಾಗಲಿಲ್ಲ. ಆ ಮೂಲಕ ಒಳ್ಳೆ ಸಿನಿಮಾ ಕೊಡಲು ಸಾಧ್ಯವಾಗಲಿಲ್ಲ. ನನಗೆ ಬೆಂಬಲವಾಗಿ ನಿಂತ ನಿರ್ಮಾಪಕ ಅನಿಲ್ ಸುಂಕರ ಅವರಿಗೆ ಕೃತಜ್ಞತೆಗಳು".

"ನಮ್ಮ ಸಿನಿಮಾ ನಂಬಿದ ವಿತರಕರು, ಬೆಂಬಲಕ್ಕೆ ನಿಂತ ಮಾಧ್ಯಮಗಳಿಗೆ ಧನ್ಯವಾದಗಳು. ಅಭಿಮಾನಿಗಳು- ಶ್ರೇಯೋಭಿಲಾಷಿಗಳ ಪ್ರೀತಿಯಿಂದಲೇ ನಾನು ಕಷ್ಟ ಬಿದ್ದು ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಮತ್ತಷ್ಟು ಗಟ್ಟಿಯಾಗಿ ವಾಪಸ್ ಬರ್ತೀನಿ" ಎಂದು ಅಖಿಲ್ ಬರೆದುಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ ಈ ಚಿತ್ರದಲ್ಲಿ ಮಲಯಾಳಂ ನಟ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇದೇ ವಿಚಾರವಾಗಿ ಇತ್ತೀಚೆಗೆ ಟ್ವೀಟ್ ಮಾಡಿದ್ದ ನಿರ್ಮಾಪಕ ಅನಿಲ್ ಸುಂಕರ "ಏಜೆಂಟ್ ಸಿನಿಮಾ ಸೋನಿನ ಹೊಣೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ. ಇದು ದೊಡ್ಡ ದೊಡ್ಡ ಟಾಸ್ಕ್ ಅಂತ ಗೊತ್ತಿದ್ದರೂ ಸಾಧಿಸುವ ಛಲದಿಂದ ಸಿನಿಮಾ ಮಾಡಲು ಮುಂದಾಗಿದ್ದೆವು. ಆದರೆ ಅದು ಫೇಲ್ ಆಗಿದೆ. ಸ್ಕ್ರಿಪ್ಟ್ ಸಂಪೂರ್ಣವಾಗಿ ಸಿದ್ಧವಾಗುವ ಮುನ್ನ ಶೂಟಿಂಗ್ ಆರಂಭಿಸಿ ತಪ್ಪು ಮಾಡಿದ್ದೆವು. ಇದರ ಜೊತೆ ಶೂಟಿಂಗ್ ಸಮಯದಲ್ಲಿ ಕೊರೊನಾ ಹಾವಳಿ ಶುರುವಾಯಿತು. ಇದರೊಟ್ಟಿಗೆ ಮತ್ತಷ್ಟು ಸಮಸ್ಯೆ ಎದುರಾಯಿತು. ಆದರೆ ಸಿನಿಮಾ ಫಲಿತಾಂಶದ ವಿಚಾರದಲ್ಲಿ ನಾವು ಕುಂಟು ನೆಪ ಹೇಳಲ್ಲ"
"ಈ ದುಬಾರಿ ತಪ್ಪಿನಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆವು. ಭವಿಷ್ಯದಲ್ಲಿ ಇಂತಹ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳುತ್ತೇವೆ. ಮತ್ತೆ ಹೇಗೆ ವಾಪಸ್ ಬರ್ತೀವಿ ನೋಡ್ತಿರಿ. ಪ್ರೇಕ್ಷಕರು ನಮ್ಮ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಅವರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ. ಮುಂದೆ ಒಳ್ಳೆಯ ಸಿದ್ಧತೆ ಜೊತೆಗೆ ಒಳ್ಳೆ ರೀತಿಯಲ್ಲಿ ಸಿನಿಮಾ ಮಾಡಿ ತಪ್ಪು ಸರಿಪಡಿಸಿಕೊಳ್ಳುತ್ತೇವೆ" ಎಂದಿದ್ದರು.


Click it and Unblock the Notifications











