ರಿಷಬ್ ಶೆಟ್ಟಿ ಮುಂದಿನ ಸಿನಿಮಾ 'ಜೈ ಹನುಮಾನ್' ನಿರ್ದೇಶಕನ ವಿರುದ್ಧ ಗಂಭೀರ ಆರೋಪ
ತೆಲುಗಿನಲ್ಲಿ 'ಹನುಮಾನ್' ಸಿನಿಮಾ ನಿರ್ದೇಶಿಸಿ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ. ಮುಂದೆ ರಿಷಬ್ ಶೆಟ್ಟಿ ಹೀರೊ ಆಗಿ 'ಜೈ ಹನುಮಾನ್' ಮಾಡಬೇಕಿದೆ. ಇದೆಲ್ಲದರ ನಡುವೆ ಪ್ರಶಾಂತ್ ವರ್ಮಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
'ಕಾಂತಾರ- 1' ಚಿತ್ರದ ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಇದೆಲ್ಲದರ ನಡುವೆ ಪ್ರಶಾಂತ್ ವರ್ಮಾಗೆ ಸಿನಿಮಾ ಮಾಡಲು ಕೊಟ್ಟಿದ್ದ ಅಡ್ವಾನ್ಸ್ ವಾಪಸ್ ಕೊಡುವಂತೆ ಕೆಲ ನಿರ್ಮಾಪಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗ್ತಿದೆ. 'ಹನುಮಾನ್' ಸಕ್ಸಸ್ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಪ್ರಶಾಂತ್ ವರ್ಮಾ ಘೋಷಣೆ ಮಾಡುತ್ತಿದ್ದಾರೆ. ಆದರೆ ಯಾವುದೇ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಆರಂಭಿಸಿಲ್ಲ.

'ಹನುಮಾನ್' ಚಿತ್ರದ ಗೆಲುವಿನ ಕ್ರೇಜ್ ಬಳಸಿಕೊಂಡು ಸಿನಿಮಾ ಮಾಡಿಕೊಡುವುದಾಗಿ ಹೇಳಿ ಅಡ್ವಾನ್ಸ್ ಹಣ ಪಡೆದುತ್ತಿದ್ದಾರೆ. ಈ ರೀತಿ ಕೋಟಿ ಕೋಟಿ ಹಣ ಪಡೆದು ಬಳಸಿಕೊಂಡಿದ್ದಾರೆ. ಆದರೆ ಸಿನಿಮಾ ಚಿತ್ರೀಕರಣ ಆರಂಭಿಸುತ್ತಿಲ್ಲ ಎನ್ನುವ ಚರ್ಚೆ ಫಿಲ್ಮ್ನಗರ್ನಲ್ಲಿ ಶುರುವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೀತಿದೆ. ಡಿವಿವಿ ಎಂಟರ್ಟೈನ್ಮೆಂಟ್ಸ್, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗಳು ಕೂಡ ಪ್ರಶಾಂತ್ ವರ್ಮಾಗೆ ಅಡ್ವಾನ್ಸ್ ಕೊಟ್ಟಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು.
ಸದ್ಯ ಸ್ವತಃ ಡಿವಿವಿ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ಪ್ರತಿಕ್ರಿಯಿಸಿ ವದಂತಿಗಳಿಗೆ ತೆರೆ ಎಳೆದಿದೆ. "ನಾವು ಪ್ರಶಾಂತ್ ವರ್ಮಾ ಜೊತೆ ಯಾವುದೇ ಸಿನಿಮಾ ಮಾತುಕತೆ ನಡೆಸಿಲ್ಲ, ಅಡ್ವಾನ್ಸ್ ಕೂಡ ಕೊಟ್ಟಿಲ್ಲ. ಈ ವದಂತಿಗಳೆಲ್ಲಾ ಸತ್ಯಕ್ಕೆ ದೂರವಾದದ್ದು" ಎಂದು ಪತ್ರಿಕಾ ಪ್ರಕಟನೆ ಕೊಟ್ಟಿದ್ದಾರೆ.

ರಿಷಬ್ ಶೆಟ್ಟಿ 'ಕಾಂತಾರ- 1' ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ 'ಜೈ ಹನುಮಾನ್' ಸಿನಿಮಾ ತಡವಾಗುತ್ತಿದೆ ಎನ್ನಲಾಗ್ತಿದೆ. ಈ ಹಿಂದೆ 'ಅ' ಹಾಗೂ 'ಕಲ್ಕಿ' ಎಂಬ ಸಿನಿಮಾಗಳನ್ನು ಪ್ರಶಾಂತ್ ಕಟ್ಟಿಕೊಟ್ಟಿದ್ದರು. ಬಳಿಕ ನಿರ್ದೇಶಿಸಿದ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ನಲ್ಲಿ ಹಲವು ಕಥೆಗಳನ್ನು ಸಿನಿಮಾ ಮಾಡಲು ಪ್ರಶಾಂತ್ ಮುಂದಾಗಿದ್ದಾರೆ. ಪ್ರಭಾಸ್, ಜ್ಯೂ. ಎನ್ಟಿಆರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಹರಿದಾಡ್ತಿದೆ.
'ಅಧೀರ' ಎಂಬ ಸಿನಿಮಾ ಘೋಷಿಸಿದ್ದ ಪ್ರಶಾಂತ್ ಇತ್ತೀಚೆಗೆ 'ಮಹಾಕಾಳಿ' ಚಿತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಕನ್ನಡ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಇನ್ನು ಪ್ರಭಾಸ್ ಕಾಂಬಿನೇಷನ್ನಲ್ಲಿ 'ಬ್ರಹ್ಮರಾಕ್ಷಸ' ಎಂಬ ಸಿನಿಮಾ ಮಾಡುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಕೂಡ ಹರಿದಾಡ್ತಿದೆ. ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಸಲಾರ್- 2' ಸೇರಿ ಮತ್ತೆರಡು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ಒಂದು ಚಿತ್ರಕ್ಕೆ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ಸಿನಿಮಾ ಘೋಷಣೆ ಮಾಡಿ ಪ್ರಶಾಂತ್ ವರ್ಮಾ ಸೈಲೆಂಟ್ ಆಗುತ್ತಿದ್ದಾರೆ. ಅದೇ ಕಾರಣಕ್ಕೆ ನಿರ್ಮಾಪಕರು ನಮಗೆ ಮೊದಲು ಸಿನಿಮಾ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಅದೇ ಕಾರಣಕ್ಕೆ ಇಂತಹ ವದಂತಿಗಳು ಹರಿದಾಡುತ್ತಿದೆ. ಇದಕ್ಕೆಲ್ಲಾ ಸ್ವತಃ ಪ್ರಶಾಂತ್ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ 'ಜೈ ಹನುಮಾನ್' ಸಿನಿಮಾ ನಿರ್ಮಾಣ ಆಗಲಿದೆ.


Click it and Unblock the Notifications











