ಹವಾಲಾ ಆರೋಪಿ ಜೊತೆ ಚಿತ್ರತಾರೆಯರು, ರಾಜಕಾರಣಿಗಳೂ ಬಲೆಗೆ
ತೆಲಂಗಾಣದ ಕೆಸೀನೊ (ಐಶಾರಾಮಿ ಜೂಜು ಅಡ್ಡೆ) ದೊರೆಗಳಿಬ್ಬರ ಮೇಲೆ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ಹಲವು ಸಿನಿಮಾ ತಾರೆಯರು, ರಾಜಕಾರಣಿಗಳಿಗೂ ಸಂಬಂಧವಿರುವ ಅಂಶ ಬೆಳಕಿಗೆ ಬಂದಿದೆ.
ಚಿಕ್ಕೋಟಿ ಪ್ರವೀಣ್ ಹಾಗೂ ಮಹದೇವ್ ರೆಡ್ಡಿ ಕೆಸಿನೊ ವ್ಯವಹಾರ ನಡೆಸುತ್ತಿದ್ದು, ಇವರುಗಳು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆಂಬ ಆರೋಪದ ಮೇಲೆ ಇಬ್ಬರ ಮೇಲೂ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ದೊಡ್ಡ ಮೊತ್ತದ ಹಣ ಬ್ಯಾಂಕ್ ಹಾದಿಯ ಮೂಲಕವಲ್ಲದೆ ಬೇರೆ ಹಾದಿಯಲ್ಲಿ ವರ್ಗಾವಣೆಗಂಡಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಇಬ್ಬರ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವುದಾಗಿ ಇಡಿ ಹೇಳಿಕೊಂಡಿದೆ.
ಮಾದೇವ್ ರೆಡ್ಡಿ ಹಾಗೂ ಚಿಕ್ಕೋಟಿ ಪ್ರವೀಣ್ ನೇಪಾಳದಲ್ಲಿ ಕೆಸೀನೊ ಹೊಂದಿದ್ದು ಇಲ್ಲಿನಿಂದ ವಿಐಪಿಗಳನ್ನು ಕರೆದುಕೊಂಡು ಹೋಗಿ ಅಲ್ಲಿ ಆಟವಾಡಿಸುತ್ತಿದ್ದರು ಎನ್ನಲಾಗಿದೆ. ನೇಪಾಳದ ಕೆಸೀನೊ ಮಾತ್ರವೇ ಅಲ್ಲದೆ ಪ್ಯಾಕೇಜ್ ರೀತಿಯಾಗಿ ಮಾಡಿ ಗೋವಾ, ಶ್ರೀಲಂಕಾಗಳಲ್ಲಿಯೂ ಕೆಸೀನೊ ಆಡಿಸುತ್ತಿದ್ದರಂತೆ ಈ ಜೂಜು ಆಯೋಜಕರು.
ಚಿಕ್ಕೋಟಿ ಪ್ರವೀಣ್ ಭಾರಿ ಐಶಾರಾಮಿ ಜೀವನ ನಿರ್ವಹಣೆ ಮಾಡುತ್ತಿದ್ದರೆಂಬುದು ಅವರ ಸಾಮಾಜಿಕ ಜಾಲತಾಣಗಳಿಂದ ಗೊತ್ತಾಗುತ್ತಿದೆ. ಅಪರೂಪದ ಪ್ರಾಣಿಗಳೊಟ್ಟಿಗೆ ಚಿತ್ರಗಳು, ಮೈಮೇಲೆ ಭಾರಿ ತೂಕದ ಚಿನ್ನದಾಭರಣಗಳು, ಬಾಲಿವುಡ್, ತೆಲುಗು ಚಿತ್ರರಂಗದ ತಾರೆಯರೊಟ್ಟಿಗೆ ಚಿತ್ರಗಳನ್ನು ಅವರು ಸದಾ ಹಂಚಿಕೊಂಡಿರುತ್ತಿದ್ದರು.
ಚಿಕ್ಕೋಟಿ ಪ್ರವೀಣ್ರ ಕೆಸೀನೊ ಅನ್ನು ಹಲವು ಬಾಲಿವುಡ್, ತೆಲುಗು ಚಿತ್ರರಂಗದ ತಾರೆಯರು ಪ್ರಮೋಟ್ ಮಾಡುತ್ತಿದ್ದರಂತೆ. ಅವರನ್ನು ಅತಿಥಿಗಳನ್ನಾಗಿ ಕೆಸೀನೊಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ ಚಿಕ್ಕೋಟಿ ಪ್ರವೀಣ್. ಚಿಕ್ಕೋಟಿ ಪ್ರವೀಣ್ ಗೆ ಹಲವು ಸಿನಿಮಾ ತಾರೆಯರ ಸಂಪರ್ಕ ಇದ್ದು, ಅವರೊಟ್ಟಿಗಿನ ವಾಟ್ಸ್ಆಪ್ ಚಾಟ್ ಹಾಗೂ ಚಿತ್ರಗಳು ಚಿಕ್ಕೋಟಿ ಬಳಿ ಇದ್ದು, ಅವನ್ನು ಇಡಿ ಇದೀಗ ವಶಪಡಿಸಿಕೊಂಡಿದೆ.

10 ರಿಂದ 15 ಲಕ್ಷ ಶುಲ್ಕ
ಸಿನಿಮಾ ತಾರೆಯರು ಮಾತ್ರವೇ ಅಲ್ಲದೆ, ರಾಜಕಾರಣಿಗಳನ್ನು ಸಹ ಈತ ಪ್ಯಾಕೇಜ್ ಆಧಾರದ ಮೇಲೆ ಕೆಸೀನೋಕ್ಕೆ ಕರೆದುಕೊಂಡು ಹೋಗುತ್ತಿದ್ದ ನಾಲ್ಕು ದಿನದ ಪ್ಯಾಕೇಜ್ಗೆ 5 ರಿಂದ 15 ಲಕ್ಷ ಚಾರ್ಜ್ ಮಾಡುತ್ತಿದ್ದರು ಚಿಕ್ಕೋಟಿ ಹಾಗೂ ಮಾದೇವ್ ರೆಡ್ಡಿ. ಸುಮಾರು 15 ಹಾಲಿ ಶಾಸಕರು ಚಿಕ್ಕೋಟಿ ಪ್ರವೀಣ್ಗೆ ಗ್ರಾಹಕರಾಗಿದ್ದರು. ಅವರನ್ನು ಹೊರತುಪಡಿಸಿ ಸುಮಾರು 250 ಮಂದಿ ಇತರ ಶ್ರೀಮಂತ ಗ್ರಾಹಕರು ಇದ್ದಾರೆ. ಆಂಧ್ರ ಪ್ರದೇಶದ ಮಾಜಿ ಸಚಿವ ಬಾಲಿನೇನಿ ಶ್ರೀನಿವಾಸ್, ತೆಲಂಗಾಣ ಹಾಲಿ ಸಚಿವ ಮಲ್ಲ ರೆಡ್ಡಿ ಸೇರಿದಂತೆ ಇನ್ನೂ ಹಲವು ಖ್ಯಾತನಾಮರು ಚಿಕ್ಕೋಟಿ ಪ್ರವೀಣ್ನ ಗ್ರಾಹಕರಾಗಿದ್ದಾರೆ.

ಕೆಸೀನೋಗೆ ಹೋಗುವುದು ಒಪ್ಪಿಕೊಂಡಿರುವ ಸಚಿವರು
''ನಾನು ಕೆಸೀನೊಗೆ ಆಗಾಗ್ಗೆ ಹೋಗುವುದು ನಿಜ ಆದರೆ ಚಿಕ್ಕೋಟಿಯ ಅಕ್ರಮ ಹಣ ವರ್ಗಾವಣೆಯೊಟ್ಟಿಗೆ ನನಗೆ ಸಂಬಂಧವಿಲ್ಲ'' ಎಂದಿದ್ದಾರೆ ಮಾಜಿ ಸಚಿವ ಬಾಲಿನೇನಿ ಶ್ರೀನಿವಾಸ್. ಇನ್ನು ಸಚಿವ ಮಲ್ಲ ರೆಡ್ಡಿಯ ಎಂಎಲ್ಎ ಸ್ಟಿಕ್ಕರ್ ಅನ್ನು ಚಿಕ್ಕೊಟಿ ತನ್ನ ಕಾರಿಗೆ ಅಂಟಿಸಿಕೊಂಡಿದ್ದಾನೆ. ನನ್ನ ಎಂಎಲ್ಎ ಕಾರಿನ ಸ್ಟಿಕ್ಕರ್ ಆತನಿಗೆ ಹೇಗೆ ಸಿಕ್ಕಿತೊ ಗೊತ್ತಿಲ್ಲ ಎಂದು ಮಲ್ಲ ರೆಡ್ಡಿ ಹೇಳಿದ್ದಾರೆ.

ವಿದೇಶಿ ಹಣಕಾಸು ವರ್ಗಾವಣೆ ಕಾಯ್ದೆ ಉಲ್ಲಂಘನೆ
ಚಿಕ್ಕೊಟಿ ಪ್ರವೀಣ್ ಹಾಗೂ ಮಾದೇವ್ ರೆಡ್ಡಿ ಇಬ್ಬರೂ ಭಾರತೀಯ ಗ್ರಾಹಕರಿಂದ ಹಣ ಪಡೆದು ಅದನ್ನು ವಿದೇಶದಲ್ಲಿ ಅಂದರೆ ನೇಪಾಳದಲ್ಲಿ ಕೆಸೀನೊ ಮೇಲೆ ಹೂಡಿಕೆ ಮಾಡಿದ್ದಾರೆ. ವಿದೇಶಿ ಹಣಕಾಸು ವರ್ಗಾವಣೆ ನಿಯಮವನ್ನು ಈ ಇಬ್ಬರೂ ಉಲ್ಲಂಘಿಸಿದ್ದಾರೆ ಎಂದು ಇಡಿ ಆರೋಪ ಮಾಡಿದ್ದು ಸೋಮವಾರದಂದು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ಚಿಕ್ಕೋಟಿ ಪ್ರವೀಣ್ ಹಾಗೂ ಮಾದೇವ್ ರೆಡ್ಡಿ ತಮ್ಮಗಳ ಕೆಸೀನೊ ವ್ಯವಹಾರ ನಿಯಮ ಬದ್ಧವಾಗಿದೆ ಎಂದಿದ್ದಾರೆ.

ಹಲವು ಅಪರೂಪದ ಪ್ರಾಣಿಗಳು ಸಾಕಿದ್ದಾರೆ
ಇನ್ನು ಚಿಕ್ಕೋಟಿ ಪ್ರವೀಣ್ರ ತೆಲಂಗಾಣ ಸಮೀಪವಿದ ಕಡ್ತಾಲ್ ಬಳಿ ಇರುವ ಫಾರಂ ಹೌಸ್ಗೆ ಅರಣ್ಯ ಇಲಾಖೆ ಸಹ ದಾಳಿ ಮಾಡಿತ್ತು. ಚಿಕ್ಕೋಟಿ ಪ್ರವೀಣ್ ಬಳಿ ಹಲವು ಮಾದರಿಯ ಪ್ರಾಣಿಗಳು ಕೆಲ ಅಪರೂಪದ ಸರಿಸೃಪಗಳು ಸಹ ಇದ್ದಾವೆ. ಅಳಿವಿನಂಚಿನಲ್ಲಿರುವ ಯಾವುದಾದರೂ ಜೀವಿಯನ್ನು ಪ್ರವೀಣ್ ಹೊಂದಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಅರಣ್ಯ ಇಲಾಖೆ ಅಲ್ಲಿಗೆ ಭೇಟಿ ನೀಡಿತ್ತು.


Click it and Unblock the Notifications











