'KGF' ಬಗ್ಗೆ ಸಣ್ಣದಾಗಿ ಮಾತನಾಡಿದವ್ರು, ಯಶ್ ಅಭಿಮಾನಿಗಳನ್ನು ಕೆಣಕಿದವ್ರು ಒಬ್ರಾ ಇಬ್ರಾ?
ರಾಕಿಂಗ್ ಸ್ಟಾರ್ ಯಶ್ ನಟನೆ 'KGF' ಸರಣಿ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಕನ್ನಡ ಸ್ಟಾರ್ ನಟನಾಗಿದ್ದ ಯಶ್ ರಾಕಿ ಭಾಯ್ ಆಗಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿಬಿಟ್ಟರು. ಶಾಹಿದ್ ಕಪೂರ್, ಶಾರುಖ್ ಖಾನ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರೆಟೀಸ್, ಫಿಲ್ಮ್ ಮೇಕರ್ಸ್ ಕೂಡ ಯಶ್ ಅಭಿಮಾನಿಗಳಾಗಿಬಿಟ್ಟರು.
ಯಶ್19 ಬಗ್ಗೆ ಬಾಲಿವುಡ್ ಮಂದಿ ಕೂಡ ಉತ್ಸುಕರಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'KGF' ಸಿನಿಮಾ ಮಾಡಿದ ಜಾದೂ ಅಂಥಾದ್ದು. ಕನ್ನಡದ ಹೆಮ್ಮೆಯಾಗಿ ಈ ಸಿನಿಮಾ ಇತಿಹಾಸ ನಿರ್ಮಿಸಿತು. ಮೊದಲ ಭಾಗ 250 ಕೋಟಿ ರೂ. ಕಲೆಕ್ಷನ್ ಮಾಡಿದರೆ 2ನೇ ಭಾಗ 1000 ಕೋಟಿ ರೂ. ಗಡಿ ದಾಖಲೆ ಸಂಚಲನ ಸೃಷ್ಟಿಸಿತು. ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ 'KGF' ಸರಣಿ ಮುಂದುವರೆಯುವ ಸುಳಿವು ಸಿಕ್ಕಿದೆ.

ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋವುವಂತೆ ಮಾಡಿದ ಸಿನಿಮಾ ಇದು. ಆದರೆ ಯಶ್ ಹಾಗೂ 'KGF' ಸಿನಿಮಾ ಕೆಲವರು ಸಣ್ಣದಾಗಿ ಮಾತನಾಡುವ ಕೆಲಸ ಮಾಡುತ್ತಿದ್ದಾರೆ. 'KGF' ಏನೇನು ಅಲ್ಲ, ಈ ಚಿತ್ರ ಸಿಕ್ಕಿದ್ದಕ್ಕೆ ಯಶ್ ಲಕ್ಕಿ, ಒಂದು 'ಪುಷ್ಪ' 10 'KGF' ಸಿನಿಮಾಗಳಿಗೆ ಸಮ, ಚಿತ್ರದ ನಾಯಕ ಎಂತಹ ಕಂತ್ರಿ ಅಂತೆಲ್ಲಾ ಹೀಯಾಳಿಸಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ತೆಲುಗು ನಿರ್ಮಾಪಕ ಅಲ್ಲು ಅರವಿಂದ್.
ತಮ್ಮ ಮಗನ ಸಿನಿಮಾ ಸಂಭಾವನೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಏನೇನೋ ಹೇಳಿ ಕೊನೆಗೆ 'KGF' ಯಶ್ ಉದಾಹರಣೆ ಕೊಟ್ಟು ನಿರ್ಮಾಪಕ ಅಲ್ಲು ಅರವಿಂದ್ ನುಣುಚಿಕೊಂಡುಬಿಟ್ಟರು. ಈ ಹಿಂದೆ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ರಾಕಿಭಾಯ್ ಪಾತ್ರದ ಬಗ್ಗೆ ಕುಹಕವಾಡಿದ್ದರು. ನಟ ರವಿತೇಜಾ 'KGF' ಚಿತ್ರ ಸಿಕ್ಕಿದ್ದಕ್ಕೆ ಯಶ್ ಲಕ್ಕಿ ಎಂದಿದ್ದರು. 'ಪುಷ್ಪ' ಚಿತ್ರವನ್ನು ಹೊಗಳುವ ಭರದಲ್ಲಿ ತೆಲುಗು ನಿರ್ದೇಶಕ ಬುಚ್ಚಿಬಾಬು 'KGF' ಹೆಸರು ಹೇಳಿ ಎಡವಟ್ಟು ಮಾಡಿದ್ದರು.
ಒಂದು 'ಪುಷ್ಪ' 10 'KGF' ಸಮ
ತೆಲುಗು ಚಿತ್ರ ನಿರ್ದೇಶಕ ಬುಚ್ಚಿಬಾಬು ತಮ್ಮ ಗುರುಗಳಾದ ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರವನ್ನು ಹೊಗಳುವ ಭರದಲ್ಲಿ 'ಪುಷ್ಪ' ಹೆಸರು ಎತ್ತಿದ್ದರು. "ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾದ ಮೊದಲ ಭಾಗ ನೋಡಿದ್ದೇನೆ. ಸಿನಿಮಾ ಅತ್ಯದ್ಭುವಾಗಿದೆ. ಚಿತ್ರದ ನಾಯಕನ ಪಾತ್ರ, ದೃಶ್ಯಗಳು, ಆಕ್ಷನ್, ಸಂಗೀತ ಎಲ್ಲವೂ ಅದ್ಭುತವಾಗಿದೆ. 'ಪುಷ್ಪ' ಸಿನಿಮಾ ಹತ್ತು 'KGF'ಗಳಿಗೆ ಸಮ'' ಎಂದಿದ್ದಾರೆ ಬುಚ್ಚಿಬಾಬು ಸನಾ. ಈ ಮಾತು ಕೇಳಿ ಯಶ್ ಫ್ಯಾನ್ಸ್ ಗರಂ ಆಗಿದ್ದರು.
ರಾಕಿಭಾಯ್ ಕಂತ್ರಿ ಎಂದಿದ್ದ ಮಹಾ!
ಮತ್ತೊಬ್ಬ ತೆಲುಗು ಸಿನಿಮಾ ನಿರ್ದೇಶಕ ವೆಂಕಟೇಶ್ ಮಹಾ 'KGF' ಸಿನಿಮಾ ಹೆಸರು ಹೇಳದೇ ಟ್ರೋಲ್ ಮಾಡಿದ್ದರು. ಚಿತ್ರದ ತಾಯಿ ಪಾತ್ರದ ಬಗ್ಗೆ "ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ. ಮಹಾ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ" ಎಂದಿದ್ದರು. ಬಳಿಕ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದರು.
ಯಶ್ ಬಗ್ಗೆ ರವಿತೇಜ ಉಢಾಪೆ ಮಾತು
ಇತ್ತೀಚೆಗೆ ಹಿಂದಿ ಸಂದರ್ಶನದಲ್ಲಿ ರ್ಯಾಪಿಡ್ ಫೈರ್ ಪ್ರಶ್ನೆಗಳಿಗೆ ರವಿತೇಜ ಉತ್ತರಿಸಿದ್ದರು. ಯಶ್ ಹೆಸರು ಹೇಳಿದಾಗ "ನಾನು ಯಶ್ ಅವರ 'KGF' ಸಿನಿಮಾ ಮಾತ್ರ ನೋಡಿದ್ದೀನಿ. ಆ ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ" ಎಂದು ಉಡಾಫೆ ಉತ್ತರ ನೀಡಿದ್ದಾರೆ. ರವಿತೇಜ ಹೇಳಿಕೆಗೆ ಯಶ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು.

'KGF'ಗೂ ಮುನ್ನ ಯಶ್ ಯಾರು?
ನಾಯಕ ನಟರ ಸಂಭಾವನೆ ಜಾಸ್ತಿ ಆಯ್ತು. ಅದಕ್ಕೆ ಸಿನಿಮಾ ಕ್ವಾಲಿಟಿ ಕಮ್ಮಿ ಆಗ್ತಿದೆ ಎನ್ನುವ ಪ್ರಶ್ನೆಗೆ ನಿರ್ಮಾಪಕ ಅಲ್ಲು ಅರವಿಂದ್, "ಈಗ ದೊಡ್ಡ ಚಿತ್ರಗಳನ್ನು ಅದ್ಧೂರಿಯಾಗಿ ತೋರಿಸದ ಹೊರತು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಹೀರೋಗಳು ಯಾರೇ ಆಗಿರಲಿ, ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಬೇಕು. 'KGF' ಸಿನಿಮಾ ಬರುವ ಮುನ್ನ ಆತ (ಯಶ್) ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆಲ್ತು. ಇದೊಂದು ಉದಾಹರಣೆ ಅಷ್ಟೇ' ಎಂದಿದ್ದಾರೆ. ಈ ಬಗ್ಗೆ ಯಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











