ನೆಟ್ಟಿಗರ ಮನಗೆದ್ದ ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಫ್ಯಾನ್ಸ್ ಜತೆ ನಡೆದುಕೊಂಡ ರೀತಿ
ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಮೆಗಾ ಕುಟುಂಬಕ್ಕೆ ಸೇರಿದ ನಟರು ಹಾಗೂ ಟಾಲಿವುಡ್ನಲ್ಲಿ ಸದ್ಯ ಮುಂಚೂಣಿಯಲ್ಲಿರುವ ಸ್ಟಾರ್ ನಟರ ಪೈಕಿ ಸ್ಥಾನ ಗಿಟ್ಟಿಸಿಕೊಂಡಿರುವ ಕಲಾವಿದರು. ಈ ಇಬ್ಬರೂ ನಟರೂ ಸಹ ಸದ್ಯ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬ್ಯುಸಿಯಾಗಿದ್ದಾರೆ.
ಅಲ್ಲು ಅರ್ಜುನ್ ಪುಷ್ಪ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ರಾಮ್ ಚರಣ್ ಆರ್ ಆರ್ ಆರ್ ಬೃಹತ್ ಯಶಸ್ಸಿನ ಬಳಿಕ ಇನ್ನೂ ಹೆಸರಿಡದ, ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಇಬ್ಬರೂ ನಟರೂ ಸಹ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದು, ತುಂಬಾ ಡೌನ್ ಟು ಅರ್ಥ್ ಸ್ವಭಾವದಿಂದ ಅಭಿಮಾನಿಗಳ ಜತೆ ನಡೆದುಕೊಳ್ಳುವುದಕ್ಕೆ ಖ್ಯಾತಿಯನ್ನು ಹೊಂದಿದ್ದಾರೆ.

ಸದ್ಯ ಈ ಇಬ್ಬರೂ ನಟರು ತಮ್ಮ ವಿಶೇಷ ಅಭಿಮಾನಿಗಳನ್ನು ಭೇಟಿಯಾಗಿದ್ದು, ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಈ ಫೋಟೊಗಳನ್ನು ಕಂಡ ನೆಟ್ಟಿಗರು ಇಬ್ಬರ ನಡೆಗೂ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಟ ಅಲ್ಲು ಅರ್ಜುನ್ ತುಂಬಾ ದಿನಗಳಿಂದ ತಮ್ಮನ್ನು ನೋಡುವ ಕನಸು ಕಂಡಿದ್ದ ವಿಕಲಚೇತನ ಅಭಿಮಾನಿಯೋರ್ವನನ್ನು ಭೇಟಿಯಾಗಿದ್ದು, ಆತನನ್ನು ಎತ್ತಿಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಆ ಅಭಿಮಾನಿಯ ಖುಷಿಗೆ ಪಾರವೇ ಇರಲಿಲ್ಲ. ತನ್ನ ಕೋಣೆಯ ಗೋಡೆಗಳ ಮೇಲೆ ಅಲ್ಲು ಅರ್ಜುನ್ ಹೆಸರು ಹಾಗೂ ಫೋಟೊವನ್ನು ಬಿಡಿಸಿ ತನ್ನ ನೆಚ್ಚಿನ ನಟನನ್ನು ನೋಡಬೇಕೆಂದು ಆಶಿಸುತ್ತಿದ್ದ ಈ ಬಾಲಕನ ಆಸೆ ಇದೀಗ ನೆರವೇರಿದೆ.
ಅತ್ತ ರಾಮ್ ಚರಣ್ ತನ್ನ ಒಂಬತ್ತು ವರ್ಷದ ಅಭಿಮಾನಿಯೋರ್ವನನ್ನು ಖುದ್ದಾಗಿ ಆಸ್ಪತ್ರೆಗೆ ತೆರಳಿ ಭೇಟಿಯಾಗಿದ್ದಾರೆ. ಮಣಿ ಕುಶಾಲ್ ಎಂಬ ಈ ಪುಟ್ಟ ಬಾಲಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ರಾಮ್ ಚರಣ್ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ. ತನ್ನ ಬಾಲಾಭಿಮಾನಿಯ ಈ ಆಸೆಯನ್ನು ನಟ ರಾಮ್ ಚರಣ್ ನೆರವೇರಿಸಿದ್ದಾರೆ. ಈ ನಟರು ತಮ್ಮ ಈ ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಆಸೆಯನ್ನು ನೆರವೇರಿಸಿ ನೆಟ್ಟಿಗರ ಮೆಚ್ಚುಗೆಗೆ ಒಳಗಾಗಿದ್ದಾರೆ.


Click it and Unblock the Notifications











