ಸುಬ್ರಮಣ್ಯ ಸ್ವಾಮಿ ಅವತಾರದಲ್ಲಿ ಅಲ್ಲು ಅರ್ಜುನ್? ಮುಂದಿನ ಸಿನಿಮಾ ಕಥೆ ಬಗ್ಗೆ ಬಿಸಿಬಿಸಿ ಚರ್ಚೆ
ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. 1800 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಹೇಳಿದೆ. ಶೀಘ್ರದಲ್ಲೇ ಸಿನಿಮಾ ಓಟಿಟಿ ಬರಲಿದೆ. ಈ ಬಗ್ಗೆ ನೆಟ್ಫ್ಲಿಕ್ಸ್ ಮಾಹಿತಿ ನೀಡಿದೆ.
'ಪುಷ್ಪ'-2 ಬಳಿಕ ಮುಂದೇನು ಎಂದು ಸ್ಟೈಲಿಶ್ ಸ್ಟಾರ್ ಅಭಿಮಾನಿಗಳು ಕೇಳುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅಲ್ಲಿ ಅರ್ಜುನ್ ಇದೊಂದೇ ಚಿತ್ರದಲ್ಲಿ ಮುಳುಗಿದ್ದರು. ಆದರೆ ಈಗ ಸಿನಿಮಾ ತೆರೆಕಂಡು ಹಿಟ್ ಆಗಿದೆ. ಹೈದರಾಬಾದ್ ಸಂಧ್ಯಾ ಥಿಯೇಟರ್ ಥಿಯೇಟರ್ ದುರ್ಘಟನೆಯಿಂದ ಚಿತ್ರತಂಡ ಕೊಂಚ ಡಲ್ ಆಗಿತ್ತು. ಅಲ್ಲು ಅರ್ಜುನ್ ಜೈಲಿಗೂ ಹೋಗಿ ಬರುವಂತಾಯಿತು. ಸದ್ಯ ಐಕಾನ್ ಸ್ಟಾರ್ ಹೊಸ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಬೇಕಿದೆ. ಅದಕ್ಕಿಂತ ಮುಂಚೆ ಬೇರೆ ಯಾವುದಾದರೂ ಚಿತ್ರದಲ್ಲಿ ನಟಿಸುತ್ತಾರಾ? ಎನ್ನುವ ಪ್ರಶ್ನೆ ಕೂಡ ಮೂಡಿದೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ತ್ರಿವಿಕ್ರಮ್ ಕಾಂಬಿನೇಷನ್ನಲ್ಲಿ ಬನ್ನಿ ನಟಿಸಿದರೆ ಬಾಕ್ಸಾಫೀಸ್ ಶೇಕ್ ಆಗಲಿದೆ. ಈಗಾಗಲೇ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ 'ಜುಲಾಯಿ', 'ಸನ್ ಆಫ್ ಸತ್ಯಮೂರ್ತಿ' ಹಾಗೂ 'ಅಲಾ ವೈಕುಂಠಪುರಂಲೊ' ಚಿತ್ರಗಳು ಹಿಟ್ ಆಗಿತ್ತು.
ಅಲ್ಲು ಅರ್ಜುನ್ ನಟನೆಯ 22ನೇ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ. ಶಿವ ಹಾಗೂ ಪುತ್ರ ಸುಬ್ರಮಣ್ಯ ಸುತ್ತಾ ಈ ಚಿತ್ರದ ಕಥೆ ಸುತ್ತುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಅಂದರೆ ಪುರಾಣಗಳಿಂದ ಸ್ಫೂರ್ತಿಗೊಂಡು ಸಿನಿಮಾ ಮಾಡಲು ನಿರ್ದೇಶಕರು ಮುಂದಾಗಿದ್ದಾರೆ ಎನ್ನಲಾಗ್ತಿದೆ. 'ಗಾಡ್ ಆಫ್ ವಾರ್' ಅಂದರೆ ಕಾರ್ತಿಕೇಯನ ಹೆಸರಿಗೆ ತಕ್ಕಂತ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನಲಾಗ್ತಿದೆ.
ಸದ್ಯ ಅಭಿಮಾನಿಗಳು 'ಗಾಡ್ ಆಫ್ ವಾರ್' ಹ್ಯಾಷ್ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ಬಹಳ ಹಿಂದೆಯೇ ತ್ರಿವಿಕ್ರಮ್- ಅಲ್ಲು ಅರ್ಜುನ್ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಎಲ್ಲರೂ ಸುಮ್ಮನಾಗಿದ್ದರು. 'ಪುಷ್ಪ'-2 ಬಿಡುಗಡೆಗೆ ಕಾಯುತ್ತಿದ್ದರು. ಅದು ಈಗ ಮುಗೀತು. ಅಲ್ಲು ಅರ್ಜುನ್ ಸಣ್ಣ ವಿರಾಮ ಪಡೆದಿದ್ದಾರೆ. ಬಳಿಕ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿಲ್ಲ.
'ಪುಷ್ಪ'-2 ಬಳಿಕ ಅಟ್ಲಿ ನಿರ್ದೇಶನದಲ್ಲಿ ಸ್ಟೈಲಿಶ್ ಸ್ಟಾರ್ ನಟಿಸ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದು ಸುಳ್ಳಾಗಿತ್ತು. ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿ ಜೊತೆ ಪುಷ್ಪ ಸಿನಿಮಾ ನಟ ಮಾತುಕತೆ ನಡೆಸಿ ಬಂದಿದ್ದರು. ಅದೆಲ್ಲದರ ನಡುವೆ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಕಥೆ ಮುನ್ನಲೆಗೆ ಬಂದಿದೆ. ಸದ್ಯ ಪೌರಾಣಿಕ ಕಥಾಹಂದರದ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ.
'ಕಾರ್ತಿಕೇಯ', 'ಕಾಂತಾರ', 'ಹನುಮಾನ್' ರೀತಿಯ ಸಿನಿಮಾಗಳು ಸೌತ್ ಮಾತ್ರವಲ್ಲದೇ ಹಿಂದಿ ಬೆಲ್ಟ್ನಲ್ಲಿ ಕೂಡ ಸಖತ್ ಸದ್ದು ಮಾಡಿದ್ದವು. ಇನ್ನು ನಿರ್ದೇಶಕ ತ್ರಿವಿಕ್ರಮ್ ಮಾತಿನ ಮಾಂತ್ರಿಕ. ತಮ್ಮ ಸಿನಿಮಾಗಳಲ್ಲಿ ಪುರಾಣಗಳ ಉಲ್ಲೇಖ ಆಗಾಗ್ಗೆ ತರುತ್ತಾರೆ. ಹಾಗಾಗಿ ಸುಬ್ರಮಣ್ಯ ಸ್ವಾಮಿ ಹಿನ್ನೆಲೆ ಇರುವಂತಹ ಕಥೆ ಆಯ್ದುಕೊಂಡರೆ ಅದನ್ನು ಸೊಗಸಾಗಿಯೇ ತೆರೆಮೇಲೆ ಕಟ್ಟಿಕೊಡುತ್ತಾರೆ. ಹಾಗಾಗಿ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ.
ಅಧಿಕೃತವಾಗಿ AA22 ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಒಟ್ಟಾರೆ ಇದು ಹೊಸ ಜಾನರ್ ಸಿನಿಮಾ, ದೊಡ್ಡ ಬಜೆಟ್, ಪ್ಯಾನ್ ಸಿನಿಮಾ ಎಂದು ಮಾತ್ರ ಟಾಲಿವುಡ್ನಲ್ಲಿ ಚರ್ಚೆ ಆಗ್ತಿದೆ. ಸದ್ಯ ಕಥೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಈಗಾಗಲೇ ಫ್ಯಾನ್ ಮೇಡ್ ಪೋಸ್ಟರ್ಗಳು ಹರಿದಾಡುತ್ತಿದೆ.


Click it and Unblock the Notifications











