ವಯನಾಡಿನ ದುರಂತಕ್ಕೆ ಮಿಡಿದ ಅಲ್ಲು ಅರ್ಜುನ್, ಕೇರಳಕ್ಕೆ ಕೊಟ್ಟಿದ್ದೆಷ್ಟು ಹಣ..?
ಕಣ್ಣೆದುರೇ ಕೇರಳದಲ್ಲಿನ ವಯನಾಡ್ನಲ್ಲಿನಾದ ಭೂಕುಸಿತ ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಊರಿಗೂರೇ ನೆರೆ, ನೀರು, ಭೂಕುಸಿತದಿಂದ ಕಣ್ಮರೆಯಾದಂತಾಗಿ ರಾತ್ರಿ ಹಗಲಾಗೋದರೊಳಗೆ ಜನ ಎಲ್ಲ ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರರಂಗವೂ ಮಿಡಿದಿದೆ. ತಾರೆಯರೆಲ್ಲ ಕೈಲಾದ ಸಹಾಯಕ್ಕೆ ಮುಂದಾಗಿದ್ದಾರೆ. ಇದೀಗ ಆಂಧ್ರದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಕೇರಳದ ಜನರಿಗೆ ಸಹಾಯ ಮಾಡಿಕೊಂಡಿದ್ದಾರೆ. 25 ಲಕ್ಷ ರೂಪಾಯಿ ಹಣವನ್ನೂ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಲ್ಲು ಅರ್ಜುನ್ ಅವರು ಹಣವನ್ನು ನೀಡಿದ್ದಾರೆ. ಅವರು ನೀಡಿರುವ 25 ಲಕ್ಷ ರೂಪಾಯಿಯಿಂದ ಸಂತ್ರಸ್ತರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಲು ಸಹಾಯ ಆಗುತ್ತದೆ. ಔಷಧಿ, ಆಹಾರ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಲಾಗುವುದು. ಅಲ್ಲದೇ, ರಕ್ಷಣಾ ಕಾರ್ಯಾಚರಣೆಗೂ ಈ ದೇಣಿಗೆಯಿಂದ ಅನುಕೂಲ ಆಗಲಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಲ್ಲು ಅರ್ಜುನ್, ಯಾವಾಗಲೂ ತನಗೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿರುವ ರಾಜ್ಯಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಕೇರಳ ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದು, ಪುನರ್ವಸತಿ ಕಾರ್ಯವನ್ನು ಬೆಂಬಲಿಸಲು ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡುವ ಮೂಲಕ ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನೂ ಕೇರಳ ದುರಂತದ ಬಗ್ಗೆ ಮಾಧ್ಯಮಗಳ ಜೊತೆಯೂ ಕೂಡ ಮಾತನಾಡಿರುವ ಅಲ್ಲು ಅರ್ಜುನ್, ನೇರವಾಗಿ ನೋಡಿದ್ರೆ ಮಾತ್ರ ಭೂಕುಸಿತದ ತೀವ್ರತೆ ತಿಳಿಯುತ್ತದೆ. ಸೇನೆ, ನೌಕಾಪಡೆ, ವಾಯುಪಡೆ, ಎನ್ ಡಿ ಆರ್ ಎಫ್, ಅಗ್ನಿಶಾಮಕ ಮತ್ತು ರಕ್ಷಣಾ, ಇತರ ಸಂಸ್ಥೆಗಳು, ಸ್ಥಳೀಯ ಜನರು ಹೀಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ಜನರು ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಂದ್ಹಾಗೇ 219 ಜನರ ಸಾವಿಗೆ ಕಾರಣವಾದ ವಯನಾಡಿನ ಮೇಪ್ಪಾಡಿ, ಚೂರಲ್ಮಲ, ಮತ್ತು ಮುಂಡಕೈ ಭೂಕುಸಿತ ಕೇರಳದ ಇತಿಹಾಸದಲ್ಲಿಯೇ ಅತೀ ದೊಡ್ಡ ದುರಂತವಾಗಿದೆ. ಒಂದೇ ಭೂಕುಸಿತದಲ್ಲಿ ಇಷ್ಟೊಂದು ಜನ ಮೃತಪಟ್ಟ ಘಟನೆ ಈ ಹಿಂದೆ ಕೇರಳದಲ್ಲಿ ಯಾವತ್ತೂ ಸಂಭವಿಸಿರಲಿಲ್ಲ.

ಕೇರಳದ ಭೂಕುಸಿತ ಪಟ್ಟಿಯಲ್ಲಿ 2020ರ ಆಗಸ್ಟ್ 06ರಂದು ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಭೂಕುಸಿತ ಸಂಭವಿಸಿ, ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೆಷನ್ನ 66 ಕಾರ್ಮಿಕರು ಸಮಾಧಿಯಾಗಿದ್ದರು. ಅವತ್ತು ಸುರಿದ ಭಾರೀ ಮಳೆಯಿಂದಾಗಿ ಇರವಿಕುಲಂ ರಾಷ್ಟ್ರೀಯ ಉದ್ಯಾನದ ಗಡಿಯಲ್ಲಿದ್ದ ಭಾರೀ ಬಂಡೆ ಪೆಟ್ಟಿಮುಡಿ ನದಿಯಲ್ಲಿ ಉರುಳಿ ಬಿದ್ದು ಸಂಭವಿಸಿದ ಭೂಕುಸಿತದಿಂದ ಕಾರ್ಮಿಕರು ವಾಸವಿದ್ದ ಮನೆಗಳು ಎರಡು ಕೀಲೋಮೀಟರ್ವರೆಗೆ ಕೊಚ್ಚಿ ಹೋಗಿದ್ದವು. 2020ರಲ್ಲಿ ಸಂಭವಿಸಿದ ಈ ಭೂಕುಸಿತ ಕೇರಳದಲ್ಲಿ ಅತೀ ಹೆಚ್ಚು ಜೀವ ಪಡೆದ ಘಟನೆ ಎನ್ನಲಾಗಿತ್ತು.


Click it and Unblock the Notifications











