ಬೆಂಗಳೂರಿನಲ್ಲಿ ಪವನ್ ಕಲ್ಯಾಣ್ ನೀಡಿದ್ದ ಹೇಳಿಕೆ ಹಿಂಪಡೆಯಬೇಕು ಎಂದ ಅಲ್ಲು ಅರ್ಜುನ್ ಮಾವ
ಟಾಲಿವುಡ್ನಲ್ಲಿ ಮೆಗಾ vs ಅಲ್ಲು ಫ್ಯಾಮಿಲಿಗಳ ನಡುವಿನ ತಿಕ್ಕಾಟ ತಾರಕಕ್ಕೇರುತ್ತಲೇ ಇದೆ. ಎರಡೂ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಹಿಂದೆ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಕೂಡ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಆದರೆ ಆಂಧ್ರ ಚುನಾವಣೆ ವೇಳೆ ಈ ಶೀತಲ ಸಮರ ಬಹಿರಂಗವಾಗಿತ್ತು.
ನಟ ಪವನ್ ಕಲ್ಯಾಣ್ ತಮ್ಮದೇ ಜನಸೇನಾ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಎದುರಾಳಿ ಪಕ್ಷ ಅಭ್ಯರ್ಥಿ ಪರ ಅಲ್ಲು ಅರ್ಜುನ್ ಪ್ರಚಾರಕ್ಕೆ ಹೋಗಿದ್ದರು. ಇದು ಆಂಧ್ರ ಚುನಾವಣೆ ಹಾಗೂ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಆತ ನನ್ನ ಆತ್ಮೀಯ ಸ್ನೇಹಿತ ಹಾಗಾಗಿ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದರು.

ಜನಸೇನಾ ಅಭ್ಯರ್ಥಿ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅಲ್ಲು ಅರ್ಜುನ್ ಬೆಂಬಲ ಸೂಚಿಸಿದ್ದು ಮೆಗಾ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಭಾರೀ ಟೀಕೆ ವ್ಯಕ್ತವಾಯಿತು. ಸ್ವತಃ ಪವನ್ ಸಹೋದರ ನಾಗಬಾಬು ಪರೋಕ್ಷವಾಗಿ ಅಲ್ಲು ಅರ್ಜುನ್ ಟೀಕಿಸಿ ಪೋಸ್ಟ್ ಮಾಡಿದ್ದು ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಪವನ್ ಗೆಲುವಿನ ಸಂಭ್ರಮದಲ್ಲೂ ಅಲ್ಲು ಫ್ಯಾಮಿಲಿ ಸದಸ್ಯರು ಕಾಣಿಸಿಕೊಳ್ಳಲಿಲ್ಲ.
ಮೊದಲಿನಿಂದಲೂ ಅಲ್ಲು ಫ್ಯಾಮಿಲಿಯಿಂದ ಪವನ್ ಕಲ್ಯಾಣ್ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಇನ್ನು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಪವನ್ ಕಲ್ಯಾಣ್ ಆಂಧ್ರದ ಡಿಸಿಎಂ ಆಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೂ ಪವರ್ ಸ್ಟಾರ್ ಭೇಟಿ ನೀಡಿದ್ದರು. ಈ ವೇಳೆ ಅಣ್ಣಾವ್ರ 'ಗಂಧದಗುಡಿ' ಬಗ್ಗೆ ಮೆಚ್ಚುಗೆ ಸೂಚಿಸಿ ಪರೋಕ್ಷವಾಗಿ 'ಪುಷ್ಪ' ಚಿತ್ರವನ್ನು ಟೀಕಿಸಿದ್ದರು.
'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಹೀರೊ ಆಗಿ ನಟಿಸಿದ್ದಾರೆ. ಇದೀಗ ಸೀಕ್ವೆಲ್ ಸಹ ಬರ್ತಿದೆ. ಚಿತ್ರದಲ್ಲಿ ರಕ್ತಚಂದನ ಸ್ಮಗ್ಲರ್ ಆಗಿ ಬನ್ನಿ ನಟಿಸಿದ್ದಾರೆ. ಆತನ ಮೇಲಿನ ಕೋಪದಿಂದಲೇ ಪವನ್ ಕಲ್ಯಾಣ್ ಪರೋಕ್ಷವಾಗಿ ಆ ಚಿತ್ರವನ್ನು ಸ್ಮಗ್ಲರ್ ಪುಷ್ಪರಾಜ್ ಪಾತ್ರದ ಬಗ್ಗೆ ಚಕಾರ ಎತ್ತಿದ್ದಾರೆ ಎಂದು ಕೆಲವರು ಹೇಳಿದ್ದರು. ಇದೀಗ ಪವನ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಅಲ್ಲು ಅರ್ಜುನ್ ಮಾವ ಆಗ್ರಹಿಸಿದ್ದಾರೆ.
ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ತಂದೆ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪವನ್ ಕಲ್ಯಾಣ್ ಹೇಳಿಕೆಗೆ ಸ್ಪಷ್ಟನೆ ಕೇಳಿದ್ದಾರೆ. ನಮ್ಮ ಅಳಿಯ ಅಲ್ಲು ಅರ್ಜುನ್ಗೆ ಸಮಾಜದ ಬಗ್ಗೆ ಗೌರವ ಇದೆ. 'ಪುಷ್ಪ' ಚಿತ್ರದ ಪಾತ್ರದಲ್ಲಿ ನಟಿಸಿದ್ದಾರೆ ಅಷ್ಟೆ. ಅದು ತಪ್ಪು ಎನ್ನಬಾರದು ಎಂದಿದ್ದಾರೆ.

'ಪುಷ್ಪ' ಚಿತ್ರದ ಬಗ್ಗೆ ಪವನ್ ಕಲ್ಯಾಣ್ ಹೇಳಿಕೆಯನ್ನು ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಖಂಡಿಸಿದ್ದಾರೆ. "ಅಲ್ಲು ಅರ್ಜುನ್ ಒಬ್ಬ ನಟನಾಗಿ 'ಪುಷ್ಪ' ಚಿತ್ರದಲ್ಲಿ ನಟಿಸಿದ್ದಾರೆ. ಆತ ನಿಜಜೀವನದಲ್ಲಿ ಯಾವ ತಪ್ಪು ಮಾಡಿಲ್ಲ. ಅಲ್ಲು ಅರ್ಜುನ್ ನಿಜವಾಗಿ ರಕ್ತಚಂದನ ಸ್ಮಗ್ಲಿಂಗ್ ಮಾಡಿದರೆ ತಪ್ಪು. ಒಂದು ಚಿತ್ರದಲ್ಲಿ ನಟಿಸಿದರೇ ತಪ್ಪೇನು? ಎಂದು ಕೇಳಿದ್ದಾರೆ.
ದಯವಿಟ್ಟು ಪವನ್ ಕಲ್ಯಾಣ್ ತಮ್ಮ ಹೇಳಿಕೆಯನ್ನು ದೊಡ್ಡ ಮನಸ್ಸಿನಿಂದ ವಾಪಸ್ ಪಡೆಯಬೇಕು. ಅಥವಾ ತಾನು ಅಲ್ಲು ಅರ್ಜುನ್ ಉದ್ದೇಶಿಸಿ ಆ ಮಾತು ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಬೇಕು. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ಗೆ ನ್ಯಾಷನಲ್ ಅವಾರ್ಡ್ ಸಿಕ್ಕಿದೆ. ಅಂದರೆ ಪವನ್ ಕಲ್ಯಾಣ್ ಎನ್ಡಿಎ ಸರ್ಕಾರದ ನಿರ್ಧಾರವನ್ನು ತಪ್ಪು ಅಂತಾರಾ? ಎಂದು ಚಂದ್ರಶೇಖರ್ ರೆಡ್ಡಿ ಪ್ರಶ್ನಿಸಿದ್ದಾರೆ.
ಅಂದು ಬೆಂಗಳೂರಿನಲ್ಲಿ ಮಾತನಾಡಿದ್ದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, "ನಾನು ಅರಣ್ಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕನ್ನಡದಲ್ಲಿ ಡಾ. ರಾಜ್ಕುಮಾರ್ ನಟಿಸಿದ 'ಗಂಧದಗುಡಿ' ಸಿನಿಮಾ ನೋಡಿ ನನಗೆ ಅರಣ್ಯದ ಬಗ್ಗೆ ನನಗೆ ಕಾಳಜಿ, ಅರಣ್ಯ ಉಳಿಸುವಿಕೆಯ ಅರಿವು ಮೂಡಿತು. 'ಗಂಧದ ಗುಡಿ' ಸಿನಿಮಾ ಅರಣ್ಯ ರಕ್ಷಣೆ ಕುರಿತಾದ ಸಿನಿಮಾ, ಚಿತ್ರದಲ್ಲಿ ಅರಣ್ಯಾಧಿಕಾರಿ, ಡಿಎಫ್ಓ ಪಾತ್ರದಲ್ಲಿ ನಾಯಕ ಕಳ್ಳಸಾಗಣೆದಾರರಿಂದ ಅರಣ್ಯವನ್ನು ರಕ್ಷಣೆ ಮಾಡುತ್ತಾನೆ. ಆದರೆ ಸಂಸ್ಕೃತಿ ಹೇಗೆ ಬದಲಾಗಿದೆ ನೋಡಿ, ಅರಣ್ಯದಲ್ಲಿ ಕಳ್ಳಸಾಗಣೆ ಮಾಡುವವನೇ ಈಗ ನಾಯಕ" ಎಂದು 'ಪುಷ್ಪ' ಸಿನಿಮಾ ಬಗ್ಗೆ ಪರೋಕ್ಷವಾಗಿ ಕುಟುಕಿದ್ದರು.


Click it and Unblock the Notifications











