ಅವತ್ತು ದರ್ಶನ್ ಹಾಕಿದ್ದ ಅದೇ ಷರತ್ತು ಈಗ ಅಲ್ಲು ಅರ್ಜುನ್ ಹಾಕ್ತಿದ್ದಾರೆ; ಕಾರಣ ಚಿತ್ರರಂಗದ ಭವಿಷ್ಯ
ಭಾರತೀಯ ಚಿತ್ರರಂಗ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹುಚ್ಚಿಗೆ ಬಿದ್ದಿದೆ. ಇದರಿಂದ ಲಾಭದ ಜೊತೆಗೆ ನಷ್ಟವೂ ಇದೆ. ದೊಡ್ಡ ಸಿನಿಮಾಗಳ ಎದುರು ಚಿಕ್ಕ ಸಿನಿಮಾಗಳು ಸದ್ದು ಮಾಡ್ತಿಲ್ಲ. ವರ್ಷವಿಡೀ ದೊಡ್ಡ ಸಿನಿಮಾ ಬಿಡುಗಡೆ ಮಾಡೋಕೆ ಸಾಧ್ಯವಿಲ್ಲ. ಸ್ಟಾರ್ ನಟರು ಒಂದೊಂದು ಚಿತ್ರಕ್ಕೆ ಎರಡ್ಮೂರು ವರ್ಷ ವ್ಯಯಿಸಿದರೆ ಹೇಗೆ?
ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಅಂದುಕೊಂಡ ಸಮಯಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗ್ತಿಲ್ಲ. 'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೆ ಮುಂದೂಡುವಂತಾಗಿದೆ. ಪ್ರಭಾಸ್ ಬಿಟ್ಟರೆ ಒಮ್ಮೆಲೆ ಎರಡ್ಮೂರು ಸಿನಿಮಾ ಒಪ್ಪಿ ನಟಿಸುವ ಸ್ಟಾರ್ ನಟ ಇಲ್ಲ ಎನ್ನುವಂತಾಗಿದೆ. ಅಲ್ಲು ಅರ್ಜುನ್ ಇನ್ಮುಂದೆ ತಡ ಮಾಡಬಾರದು ಎಂದು ನಿರ್ಧರಿಸಿದ್ದಾರಂತೆ. ಅದೇ ಕಾರಣಕ್ಕೆ ಒಂದು ಷರತ್ತು ಹಾಕಿದ್ದಾರೆ ಎನ್ನಲಾಗ್ತಿದೆ.

'ಪುಷ್ಪ' ಸರಣಿ ಸಿನಿಮಾಗಳಿಗಾಗಿ ನಾಲ್ಕೈದು ವರ್ಷ ವ್ಯಯಿಸಿದ್ದ ಅಲ್ಲು ಅರ್ಜುನ್ ಈಗ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಿರ್ದೇಶನದ 'ರಾಕಾ' ಜೊತೆಗೆ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ರಾಕಾ' ಬಳಿಕ ಲೋಕೇಶ್ ಸಾರಥ್ಯದ ಚಿತ್ರಕ್ಕೆ 200 ದಿನಗಳ ಕಾಲ್ಶೀಟ್ ಮಾತ್ರ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಅಲ್ಲು ಅರ್ಜುನ್ ಮುಂದಿನ ದಿನಗಳಲ್ಲಿ ಪ್ರತಿ ಚಿತ್ರಕ್ಕೆ ಗರಿಷ್ಠ 200 ದಿನಗಳ ಚಿತ್ರೀಕರಣವನ್ನು ಸೀಮಿತಗೊಳಿಸಲು ತೀರ್ಮಾನಿಸಿದ್ದಾರೆ. ಈ ಮಿತಿಯನ್ನು ಮೀರಿದರೆ, ಏಕಕಾಲದಲ್ಲಿ ಮತ್ತೊಂದು ಚಿತ್ರವನ್ನು ಶುರು ಮಾಡುವ ಸಾಧ್ಯತೆಯಿದೆ. ಅಕ್ಟೋಬರ್ನಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಮುಂದಿನ ವರ್ಷ ಆರಂಭದಲ್ಲೇ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಚರ್ಚೆ ಫಿಲ್ಮ್ ನಗರ್ನಲ್ಲಿ ಜೋರಾಗಿದೆ.

'ತಾರಕ್' ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಕೂಡ ಇದೇ ರೀತಿಯ ಷರತ್ತು ಹಾಕಿದ್ದರು. ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಬೇಕು. ಸುಖಾಸುಮ್ಮನೆ ಕಾಲಹರಣ ಮಾಡಬಾರದು. 65 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಯಬೇಕು, ಬೇಕಿದ್ದರೆ 5 ದಿನ ಹೆಚ್ಚಾದರೂ ಪರವಾಗಿಲ್ಲ. ಒಟ್ಟಾರೆ 70 ದಿನಗಳಲ್ಲಿ ಮುಗಿಸಬೇಕು. ನಾನು ಕೂಡ 150 ದಿನ, 175 ದಿನಗಳ ಕಾಲ ಚಿತ್ರೀಕರಣ ಮಾಡಿರುವುದು ಇದೆ. ಆದರೆ ಪ್ರಯೋಜನ ಇಲ್ಲ. ಸಿನಿಮಾ ಗೆದ್ದರೆ ಸರಿ, ಇಲ್ಲದಿದ್ದರೆ? 'ಕುರುಕ್ಷೇತ್ರ' ರೀತಿಯ ದೊಡ್ಡ ಸಿನಿಮಾಗಳನ್ನು ಬಿಟ್ಟು ರೆಗ್ಯುಲರ್ ಚಿತ್ರಗಳಿಗೆ ನಾನು 70 ದಿನ ಕಾಲ್ಶೀಟ್ ಮಾತ್ರ ಕೊಡ್ತೀನಿ ಎಂದಿದ್ದರು.
ಅಂತಿಮವಾಗಿ ಒಳ್ಳೆ ಸಿನಿಮಾಗಳು ಬರಬೇಕು. ಹೆಚ್ಚು ಸಿನಿಮಾಗಳು ಬಂದರೆ ಚಿತ್ರರಂಗಕ್ಕೆ ನೆರವಾಗುತ್ತದೆ. ಓಟಿಟಿ ಟ್ರೆಂಡ್ ಶುರುವಾದ ಬಳಿಕ ಜನ ಚಿತ್ರಮಂದಿರಗಳಿಗೆ ಬರುವುದು ಕಮ್ಮಿ ಆಗಿದೆ. ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ನಾಲ್ಕೈದು ಎನ್ನುವಂತಾಗಿದೆ. ದೊಡ್ಡ ಸಿನಿಮಾಗಳನ್ನು ಮಾತ್ರ ಚಿತ್ರಮಂದಿರಗಳಲ್ಲಿ ನೋಡುತ್ತೇವೆ ಎಂದು ಪ್ರೇಕ್ಷಕರು ಪಟ್ಟು ಹಿಡಿದಂತೆ ಕಾಣ್ತಿದೆ. ಅಲ್ಲದೇ 'ಪುಷ್ಪ' ಸರಣಿ ಸಿನಿಮಾಗಳಿಗಾಗಿ ಅಲ್ಲು ಅರ್ಜುನ್ ಹೆಚ್ಚು ಸಮಯ ವ್ಯಯಿಸಿದ್ದರು. ನಡುವೆ ಕೋವಿಡ್ ಸಮಸ್ಯೆ ಕೂಡ ಎದುರಾಗಿತ್ತು.
ಸ್ಟಾರ್ ನಟರ ಚಿತ್ರಗಳು ಹೆಚ್ಚು ನಿರ್ಮಾಣವಾಗದೇ ಕನ್ನಡ ಚಿತ್ರರಂಗ ಬಡವಾಗುತ್ತಿದೆ. ಯಶ್ ಸಿನಿಮಾ ಬಿಡುಗಡೆಯಾಗಿ 4 ವರ್ಷ ಕಳೆದಿದೆ. ಪುನೀತ್ ರಾಜ್ಕುಮಾರ್ ಅಗಲಿಕೆ, ದರ್ಶನ್ ಅನುಪಸ್ಥಿತಿ ಎದ್ದು ಕಾಣ್ತಿದೆ. ರಿಷಬ್ ಶೆಟ್ಟಿ ಕನ್ನಡ ಬಿಟ್ಟು ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರರಂಗವನ್ನೇ ಮರೆತುಬಿಟ್ಟಿದ್ದಾರೆ. ಸುದೀಪ್ ಸದ್ಯ ಯಾವುದೇ ಚಿತ್ರದಲ್ಲಿ ನಟಿಸ್ತಿಲ್ಲ. ಇದ್ದಿದ್ದರಲ್ಲಿ ಶಿವಣ್ಣ ವರ್ಷಕ್ಕೆ ಎರಡ್ಮೂರು ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಏಳೆಂಟು ಚಿತ್ರಗಳಿವೆ.


Click it and Unblock the Notifications