15ನೇ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ಅಲ್ಲು ಅರ್ಜುನ್ ದುಬಾರಿ ಗಿಫ್ಟ್ ; ವಿಡಿಯೋ ವೈರಲ್
ಟಾಲಿವುಡ್ ಅಲ್ಲು ಕುಟುಂಬದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹೋದರ ಅಲ್ಲು ಶಿರೀಷ್ ಮದುವೆ ನಡೆದಿದೆ. ಮೆಗಾ ಫ್ಯಾಮಿಲಿ ಸದಸ್ಯರು ಕೂಡ ಕಲ್ಯಾಣೋತ್ಸವದಲ್ಲಿ ಭಾಗಿ ಆಗಿ ಸಂಭ್ರಮಿಸಿದ್ದಾರೆ. ಇದರ ನಡುವೆಯೇ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ದಂಪತಿ 15ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. 'ಪುಷ್ಪ'-2 ಚಿತ್ರಕ್ಕಾಗಿ ದಾಖಲೆ ಮಟ್ಟದ ಸಂಭಾವನೆ ಪಡೆದಿದ್ದರು. ಈಗ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ ಬೆಳೆದ ಬನ್ನಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ದುಬಾರಿ ಉಡುಗೊರೆ ಕೊಟ್ಟು ಸರ್ಪ್ರೈಸ್ ಮಾಡಿದ್ದಾರೆ.

ಅಣ್ಣನ ಮದುವೆ ವಾರ್ಷಿಕೋತ್ಸವದ ದಿನವೇ ಶಿರೀಷ್ ಮದುವೆ ನಡೆದಿದೆ. ಹಾಗಾಗಿ ಸಂಭ್ರಮಾಚರಣೆ ಜೋರಾಗಿದೆ. ಇನ್ನು ಸ್ಟೈಲಿಶ್ ಸ್ಟಾರ್ ಪತ್ನಿ ಮರ್ಸಿಡೀಸ್ ಬೆನ್ಜ್ ಕಾರ್ ಕೊಟ್ಟು ಸರ್ಪ್ರೈಸ್ ಮಾಡಿರುವುದು ವಿಶೇಷ. ಈ ವೇಳೆ ಇಡೀ ಅಲ್ಲು ಕುಟುಂಬ ಹಾಜರಿದ್ದು ಸ್ನೇಹಾ ರೆಡ್ಡಿ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ.
ಅಲ್ಲು ಅರ್ಜುನ್ ತಾತಾ ಅಲ್ಲು ರಾಮಲಿಂಗಯ್ಯ ತೆಲುಗಿನ ಖ್ಯಾತ ಹಾಸ್ಯನಟರಾಗಿದ್ದರು. ಅವರ ಮಗಳು ಸುರೇಖಾರನ್ನು ನಟ ಚಿರಂಜೀವಿ ಮದುವೆ ಆಗಿದ್ದರು. ಅಲ್ಲು ಅರ್ಜುನ್ ತಂದೆ ಬಹಳ ವರ್ಷಗಳಿಂದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಚಿರಂಜೀವಿ ಸಕ್ಸಸ್ನಲ್ಲಿ ಕೂಡ ಅವರ ಪಾಲಿದೆ. ಇನ್ನು ಮಾವ ಚಿರಂಜೀವಿ ಹಾದಿಯಲ್ಲೇ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಹೀರೊ ಆಗಿ ಪರಿಚಿತರಾಗಿದ್ದರು. ಎರಡೂ ಕುಟುಂಬಗಳ ನಡುವೆ ಅನುಬಂಧ ಮುಂದುವರೆದಿದೆ.
2011, ಮಾರ್ಚ್ 6ರಂದು ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಮದುವೆ ನಡೆದಿತ್ತು. 15ನೇ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸ್ನೇಹಾ ಸ್ಟೈಲ್ ಐಕಾನ್ ಆಗಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಸದ್ಯ ಪತ್ನಿಗೆ ಅಲ್ಲು ಅರ್ಜುನ್ ಮರ್ಸಿಡೀಸ್ ಬೆನ್ಜ್ ಎಎಂಜಿ ಮಾಡೆಲ್ ಕಾರ್ ಗಿಫ್ಟ್ ಮಾಡಿದ್ದಾರೆ. ಸದ್ಯ ಈ ಕಾರಿನ ಬೆಲೆ 4ರಿಂದ 5 ಕೋಟಿ ರೂ. ಇದೆ.
ಅಮೆರಿಕಾದಲ್ಲಿ ನಡೆದ ಕಾಮನ್ ಫ್ರೆಂಡ್ ಮದುವೆ ಸಮಾರಂಭದಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರೆಡ್ಡಿ ಮೊದಲ ಬಾರಿ ಭೇಟಿ ಆಗಿದ್ದರು. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಇಬ್ಬರೂ ಪ್ರೀತಿಲಿ ಬಿದ್ದಿದ್ದರು. ಮೊದಲ ಬಾರಿ ಪರಿಚಯವಾದಾಗ ಉಭಯಕುಶಲೋಪರಿ ಮಾತ್ರ ನಡೆದಿತ್ತು. ಸ್ನೇಹ ಮರೆತರೂ ಅಲ್ಲು ಅರ್ಜುನ್ ಪ್ರೇಮಪಾಶಕ್ಕೆ ಸಿಲುಕಿದ್ದರು. ಸ್ನೇಹಿತ ಧೈರ್ಯತುಂಬಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಸ್ನೇಹ ಅದನ್ನು ಅಕ್ಸೆಪ್ಟ್ ಮಾಡಿದ್ದರು. ಹೀಗೆ ಮೆಸೇಜ್ ಮೂಲಕ ಶುರುವಾದ ಮಾತುಕತೆ ಬಳಿಕ ಮತ್ತೆ ಭೇಟಿ ಆಗಿದ್ದರು. ಆರಂಭದಲ್ಲಿ ತಮ್ಮ ಲವ್ ಸ್ಟೋರಿಯನ್ನು ರಹಸ್ಯವಾಗಿಯೇ ಉಳಿಸಿಕೊಂಡಿದ್ದರು. ಆರಂಭದಲ್ಲಿ ಪೋಷಕರು ಇಬ್ಬರ ಮದುವೆಗೆ ಒಪ್ಪಲಿಲ್ಲ. ಬಳಿಕ ಎಲ್ಲರೂ ಒಪ್ಪಿ ಮದುವೆ ನಡೆದಿತ್ತು.
ಉದ್ಯಮಿ ಕೆ.ಸಿ. ಶೇಖರ್ ರೆಡ್ಡಿಯವರ ಪುತ್ರಿ ಸ್ನೇಹಾ ರೆಡ್ಡಿ. ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ತಮ್ಮ ತಂದೆಯ ಶಿಕ್ಷಣ ಸಂಸ್ಥೆ ಹಾಗೂ ಪಿಕಾಬೂ ಎಂಬ ತಮ್ಮದೇ ಫೋಟೊಗ್ರಫಿ ಸ್ಟುಡಿಯೋ ಮುನ್ನಡೆಸುತ್ತಿದ್ದಾರೆ. ಸದ್ಯ ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಬಳಿಕ ಲೋಕೇಶ್ ಕನಕರಾಜ್ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











