ಗೆಲ್ಲುವ ಅಭ್ಯರ್ಥಿ ಪರ ಪ್ರಚಾರ ಮಾಡಿ ಸೋಲಿಸಿಬಿಟ್ರಾ ಅಲ್ಲು ಅರ್ಜುನ್? ಫುಲ್ ಟ್ರೋಲ್
ಲೋಕಸಭೆ ಚುನಾವಣೆ ಜೊತೆಗೆ ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆ ಸಹ ಬಹಳ ಕುತೂಹಲ ಮೂಡಿಸಿತ್ತು. ಕಾರಣ ಆಡಳಿತದಲ್ಲಿದ್ದ ವೈಎಸ್ಆರ್ಪಿ ಕಾಂಗ್ರೆಸ್ ವಿರುದ್ಧ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಒಂದಾಗಿದ್ದವು. ಮೈತ್ರಿ ಪಡೆ ಗೆಲ್ಲವುದು ಕಷ್ಟ ಎಂದೇ ಕೆಲವರು ಭಾವಿಸಿದ್ದರು. ಆದರೆ ಆಡಳಿತ ವಿರೋಧಿ ಅಲೆ ಎದ್ದು ಜಗನ್ ನೇತೃತ್ವದ ವೈಎಸ್ಆರ್ಸಿಪಿ ಮುಖಭಂಗ ಅನುಭವಿಸಿದೆ.
ಪವನ್ ಕಲ್ಯಾಣ್, ಬಾಲಕೃಷ್ಣ ಶಾಸಕರಾಗಿ ಗೆದ್ದು ಬೀಗಿದ್ದಾರೆ. ಅದೇ ರೀತಿ ಹಾಲಿ ಶಾಸಕಿ ರೋಜಾ ಸೋಲು ಅನುಭವಿಸುವಂತಾಗಿದೆ. ಟಿಡಿಪಿ 135 ಹಾಗೂ ಜನಸೇನಾ 21 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ವೈಎಸ್ಆರ್ಸಿಪಿ 11 ಕ್ಷೇತ್ರಗಳಿಗೆ ಕುಸಿದಿದೆ. ಬಿಜೆಪಿ 8 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಕೆಲವೆಡೆ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ನಂದ್ಯಾಲ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿ ನಾಸ್ಯಾಂ ಮೊಹಮ್ಮದ್ ಫಾರೂಕ್ ಗೆದ್ದಿದ್ದಾರೆ. ವೈಎಸ್ಆರ್ಸಿಪಿ ಶಿಲ್ಪ ರವಿ ಚಂದ್ರ ಕಿಶೋರ್ ರೆಡ್ಡಿ ಸೋಲಿಗೆ ಶರಣಾಗಿದ್ದಾರೆ.

ಕಳೆದ ಬಾರಿ ಶಿಲ್ಪ ರವಿ ಚಂದ್ರ ಕಿಶೋರ್ ರೆಡ್ಡಿ ಗೆದ್ದು ಶಾಸಕರಾಗಿದ್ದರು. ಆದರೆ ಈ ಬಾರಿ ಸೋಲುವಂತಾಗಿದೆ. ಅಂದಹಾಗೆ ತೆಲುಗು ನಟ ಅಲ್ಲು ಅರ್ಜುನ್ಗೆ ಶಿಲ್ಪ ರವಿ ಚಂದ್ರ ಕಿಶೋರ್ ರೆಡ್ಡಿ ಆತ್ಮೀಯ ಸ್ನೇಹಿತರು. ಅದೇ ಕಾರಣಕ್ಕೆ ಮತದಾನಕ್ಕೆ ಎರಡು ದಿನಗಳಿರುವಾಗ ಖುದ್ದು ಅಲ್ಲು ಅರ್ಜುನ್ ಹೋಗಿ ಪ್ರಚಾರ ಮಾಡಿದ್ದರು. ಇದೇ ಕಾರಣಕ್ಕೆ ಮೆಗಾ ಫ್ಯಾಮಿಲಿ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಎದುರು ಹಾಕಿಕೊಂಡಿದ್ದರು. ಯಾಕಂದರೆ ಬಿಜೆಪಿ, ಜನಸೇನಾ ಹಾಗೂ ಟಿಡಿಪಿ ಮೈತ್ರಿ ಅಭ್ಯರ್ಥಿಯಾಗಿ ನಾಸ್ಯಾಂ ಮೊಹಮ್ಮದ್ ಫಾರೂಕ್ ಕಣದಲ್ಲಿದ್ದರು.
ಪವನ್ ಕಲ್ಯಾಣ್ ಕುಟುಂಬದ ಅಲ್ಲು ಅರ್ಜುನ್ ಹೋಗಿ ಎದುರಾಳಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಈ ಬಗ್ಗೆ ಪವನ್ ಸಹೋದರ ನಾಗಬಾಬು ಬಹಿರಂಗವಾಗಿಯೇ ಬೇಸರ ಹೊರ ಹಾಕಿದ್ದರು. ಟ್ವೀಟ್ ಮಾಡಿ ಪರೋಕ್ಷವಾಗಿ ಅಲ್ಲು ಅರ್ಜುನ್ಗೆ ಟಾಂಗ್ ಕೊಟ್ಟಿದ್ದರು. ಪವನ್ ಅಭಿಮಾನಿಗಳಂತೂ ಅಲ್ಲು ಅರ್ಜುನ್ ಮೇಲೆ ಕೆಂಡಕಾರಿದ್ದರು. ನಾನು ಯಾವುದೇ ಪಕ್ಷದ ಪರ ಹೋಗಲಿಲ್ಲ, ಶಿಲ್ಪ ರವಿ ಚಂದ್ರ ನನ್ನ ಆತ್ಮೀಯ ಸ್ನೇಹಿತರು. ಹಾಗಾಗಿ ಅವರನ್ನು ಬೆಂಬಲಿಸಿದೆ ಎಂದು ಅಲ್ಲು ಅರ್ಜುನ್ ಹೇಳಿದ್ದರು.
ಇದೀಗ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಶಿಲ್ಪ ರವಿ ಚಂದ್ರ ಸೋತಿದ್ದಾರೆ. ಹಾಗಾಗಿ ಪವನ್ ಕಲ್ಯಾಣ್ ಫ್ಯಾನ್ಸ್ ಮತ್ತೆ ಅಲ್ಲು ಅರ್ಜುನ್ನ ಟ್ರೋಲ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಎಂದು ಹೇಳುಕೊಳ್ಳುತ್ತಿದ್ರು, ಇಷ್ಟೇನಾ ಅವರ ಜನಪ್ರಿಯತೆ. ಅವರು ಪ್ರಚಾರ ಮಾಡಿದರೂ ಯಾಕೆ ವೈಎಸ್ಆರ್ಸಿಪಿ ಅಭ್ಯರ್ಥಿ ಗೆಲ್ಲಲಿಲ್ಲ? ಎಂದು ಅಣಕವಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಮೀಮ್ಸ್ ವೈರಲ್ ಮಾಡುತ್ತಿದ್ದಾರೆ.

ಕಳೆದ ಬಾರಿ ಅಲ್ಲು ಅರ್ಜುನ್ ಪ್ರಚಾರ ಮಾಡದಿದ್ದರೂ ಶಿಲ್ಪ ರವಿ ಚಂದ್ರ ಗೆದ್ದಿದ್ದರು. ಈ ಬಾರಿ ಅಲ್ಲು ಅರ್ಜುನ್ ಎಫೆಕ್ಟ್ ಕಾರಣಕ್ಕೆ ಸೋತಿದ್ದಾರೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಕೆಲ ವರ್ಷಗಳಿಂದ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ, ಎನ್ನುವ ಮಾತುಗಳು ಕೇಳಿಬರ್ತಿದೆ. ಅದರಲ್ಲೂ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದೇ ಚರ್ಚೆ ನಡೆಯುತ್ತಿದೆ. ಅದೇ ಕಾರಣಕ್ಕೆ 'ಪುಷ್ಪ' ನಟ ಹೋಗಿ ಶಿಲ್ಪ ರವಿ ಚಂದ್ರ ಪರ ಪ್ರಚಾರ ನಡೆಸಿದ್ದರು ಎನ್ನಲಾಗ್ತಿದೆ.


Click it and Unblock the Notifications











