ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಬದಲು ಈ ಸ್ಟಾರ್ಗಳ ಜೊತೆ 'ಪುಷ್ಪ' ಮಾಡಬೇಕೆಂದುಕೊಂಡಿದ್ದರು ಸುಕುಮಾರ್..!
ಪುಷ್ಪ ಜಾತ್ರೆ ಭಾರತದೆಲ್ಲೆಡೆ ಶುರುವಾಗಿದೆ. ಪ್ಯಾನ್ ಇಂಡಿಯಾ ಅಲ್ಲು ಅರ್ಜುನ್ ಮೆರವಣಿಗೆ ಹೊರಟಿದೆ. ಚಿತ್ರದ ಕುರಿತು ಒಬ್ಬೊಬ್ಬರು ಒಂದೊಂದು ಮಾತುಗಳನ್ನಾಡುತ್ತಿದ್ದಾರೆ. ಕೆಲವರು ಚಿತ್ರವನ್ನು ಅದ್ಭುತ ಅತ್ಯಮೋಘ ಎಂದೆಲ್ಲ ಹೊಗಳಿದರೆ, ಇನ್ನೂ ಕೆಲವರು ಚಿತ್ರ ಅಷ್ಟಕಷ್ಟೇ ಎನ್ನುತ್ತಿದ್ದಾರೆ.
ಇನ್ನೂ ಇದೇ ಪುಷ್ಪ ಚಿತ್ರದ ಮೊದಲ ಭಾಗಕ್ಕೆ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಹಿನ್ನೆಲೆ ಅನೇಕರು ಈ ಬಾರಿ ಕೂಡ ರಾಷ್ಟ್ರ ಪ್ರಶಸ್ತಿ ಅಲ್ಲು ಅರ್ಜುನ್ ಅವರಿಗೆ ಒಲಿಯುವುದು ಗ್ಯಾರೆಂಟಿ ಎಂದು ಭವಿಷ್ಯವನ್ನು ಹೇಳುತ್ತಿದ್ದಾರೆ. ಹತ್ತು ಹಲವು ದಾಖಲೆಗಳನ್ನು ಪುಷ್ಪ 2 ಬರೆಯಲಿದೆ ಎಂದು ಕೂಡ ಹೇಳುತ್ತಿದ್ದಾರೆ.

ಹೀಗೆ ನಾನಾ ಕಾರಣಗಳಿಂದ ಸದ್ಯ ಟಾಕ್ ಆಫ್ ದಿ ನೇಷನ್ ಈ ಆಗಿರುವ ಈ ಪುಷ್ಪದಲ್ಲಿ ಹಾಗೇ ನೋಡಿದರೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಅಲ್ಲು ಅರ್ಜುನ್ ಬದಲು ಮಹೇಶ್ ಬಾಬು ಇರಬೇಕಿತ್ತು. ಖುದ್ದು ಸುಕುಮಾರ್ ಈ ಮಾತು ಹೇಳಿದ್ದಾರೆ. ಹೌದು, ಅಸಲಿಗೆ ಪುಷ್ಪ ಚಿತ್ರದ ಕಥೆ ಸುಕುಮಾರ ತಲೆಯಲ್ಲಿ ಹೊಳೆದಾಗ ಈ ಪಾತ್ರಕ್ಕೆ ಮಹೇಶ್ ಬಾಬು ಸೂಕ್ತವೆಂದುಕೊಂಡಿದ್ದರು. ಮಹೇಶ್ ಬಾಬು ಬಳಿ ಈ ಕಥೆಯ ಚರ್ಚೆಯನ್ನು ಕೂಡ ಮಾಡಿದ್ದರು.
ಆದರೆ, ಮಹೇಶ್ ಬಾಬು ಈ ಪಾತ್ರವನ್ನು ನಿರಾಕರಿಸಿದರು. ಇಬ್ಬರ ನಡುವೆ ಕಥೆಯ ವಿಚಾರಕ್ಕೆ ಭಿನ್ನಾಭಿಪ್ರಾಯ ಇತ್ತು ಎನ್ನುವ ಸುದ್ದಿ ಕೂಡ ಇದೆ. ಈ ಕಾರಣಕ್ಕೆ ನಿರಾಸೆಗೊಂಡು ಮರಳಿದ ಸುಕುಮಾರ ಕೆಲ ದಿನಗಳ ನಂತರ ಕಥೆಯಲ್ಲಿ ಬದಲಾವಣೆ ಮಾಡಿದರು. ಆದರೆ ಹೀಗೆ ಬದಲಾದ ಕಥೆಗೆ ಮಹೇಶ್ ಬಾಬು ಸೂಕ್ತವಾಗುತ್ತಿರಲಿಲ್ಲ. ಯಾಕೆಂದರೆ ಮಹೇಶ್ ಬಾಬು ನೋಡಲು ತುಂಬಾನೇ ಸ್ಮಾರ್ಟ್, ಬೆಳ್ಳಗ್ಗೆಇದ್ದಾರೆ. ಇನ್ನೂ ಪುಷ್ಪರಾಜ್ನ ಹಾವ ಭಾವ ಮಹೇಶ್ ಬಾಬು ಅವರಲ್ಲಿ ಸುಕುಮಾರ್ಗೆ ಕಾಣಲಿಲ್ಲ. ಆಗ ಈ ಪಾತ್ರಕ್ಕೆ ಯಾರು ಸೂಕ್ತವೆಂದು ಸುಕುಮಾರ್ ಆಲೋಚನೆ ಮಾಡುವ ಸಮಯದಲ್ಲಿ ಕಣ್ಮುಂದೆ ಬಂದಿದ್ದು ಅಲ್ಲು ಅರ್ಜುನ್.
ಆ ನಂತರ ಸೀದಾ ಅಲ್ಲು ಅರ್ಜುನ್ ಅವರ ಬಳಿ ಸುಕುಮಾರ್ ಹೋಗಿ ಕಥೆ ಹೇಳಿದರು. ಅಲ್ಲು ಅರ್ಜುನ್ ಮರುಮಾತನಾಡದೇ ಪಾತ್ರವನ್ನು ಒಪ್ಪಿಕೊಂಡರು. ಫಲಿತಾಂಶ ಸದ್ಯ ಕಣ್ಮುಂದೆ ಇದೆ. ಇನ್ನು ಮನಿ ಕಂಟ್ರೋಲ್ ವರದಿಯ ಪ್ರಕಾರ ಈ ಚಿತ್ರಕ್ಕೆ ಕೇವಲ ಅಲ್ಲು ಅರ್ಜುನ್ ಮಾತ್ರ ಅಲ್ಲ, ರಶ್ಮಿಕಾ ಮಂದಣ್ಣ ಕೂಡ ಮೊದಲ ಆಯ್ಕೆಯಾಗಿರಲಿಲ್ಲ. ಸಮಂತಾ ಅವರಲ್ಲಿ ಶ್ರೀವಲ್ಲಿಯನ್ನು ನೋಡಲು ಬಯಸಿದ್ದರು ಸುಕುಮಾರ್. ಆದರೆ ಅದಾಗಲೇ ಸುಕುಮಾರ್ ನಿರ್ದೇಶನದಲ್ಲಿಯೇ ಬಂದಿದ್ದ ರಂಗಸ್ಥಳಂ ಚಿತ್ರದಲ್ಲಿ ಸಮಂತಾ ಹಳ್ಳಿ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಸಮಂತಾ ಕಣ್ಣು ಬಾಲಿವುಡ್ ಮೇಲಿತ್ತು. ಈ ಕಾರಣಕ್ಕೆ ಸಮಂತಾ ಈ ಪಾತ್ರವನ್ನು ನಿರಾಕರಿಸಿದರು. ಸಮಂತಾ ಸ್ಥಾನಕ್ಕೆ ಆ ನಂತರ ರಶ್ಮಿಕಾ ಮಂದಣ್ಣ ಬಂದರು.
ಇನ್ನೂ ಫಹಾದ್ ಫಾಸಿಲ್ ಪಾತ್ರವನ್ನು ವಿಜಯ್ ಸೇತುಪತಿ ಮಾಡಬೇಕಿತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಯಾಕೆಂದರೆ ಭನ್ವರ್ ಸಿಂಗ್ ಶೇಖಾವತ್ ಪಾತ್ರ ವಿಜಯ್ ಸೇತುಪತಿ ಅವರಿಂದ ಮಾಡಿಸಬೇಕೆಂದು ಸುಕುಮಾರ್ ಅಂದುಕೊಂಡಾಗ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ತುಂಬಾ ಬ್ಯುಸಿಯಾಗಿದ್ದರು. ಹೀಗಾಗಿ ಫಹಾದ್ ಫಾಸಿಲ್ ಪುಷ್ಪ ಅಂಗಳಕ್ಕೆ ಬಂದರು. ಹೀಗೆ ನಾನಾ ಕಾರಣಗಳಿಂದ ಪುಷ್ಪದ ಪಾತ್ರಗಳು ಬದಲಾದವು. ಯಾರೋ ಮಾಡಬೇಕಿದ್ದ ಪಾತ್ರಗಳು ಇನ್ಯಾರದ್ದೋ ಪಾಲಾದವು. ಅಪಾರವಾದ ಹೆಸರನ್ನು ಕೂಡ ಪಾತ್ರಧಾರಿಗಳಿಗೆ ಈ ಮೂರು ಪಾತ್ರಗಳು ತಂದು ಕೊಟ್ಟವು.


Click it and Unblock the Notifications











