Allu Arjun: ಸ್ಮಗ್ಲರ್ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಹೇಗೆ ಕೊಟ್ರು? ಟ್ರೋಲ್ ಮಾಡುವವರಿಗೆ ಅಲ್ಲು ಅರ್ಜುನ್ ತಿರುಗೇಟು
ಕಳೆದ ವಾರವಷ್ಟೇ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿತ್ತು. ಜನವರಿ 2021 ರಿಂದ 2021ರ ಡಿಸೆಂಬರ್ 31ರ ಒಳಗೆ ಸರ್ಟಿಫೈಡ್ ಆಗಿರುವ ಮತ್ತು ಬಿಡುಗಡೆಯಾಗಿರುವ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಪರ- ವಿರೋಧ ಚರ್ಚೆ ನಡೀತಿದೆ.
ಕೆಲವರು ರಾಷ್ಟ್ರಪ್ರಶಸ್ತಿಯೇ ಮೋಸ. ಅರ್ಹರಿಗೆ ಪ್ರಶಸ್ತಿ ಸಿಕ್ಕಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇನ್ನು ಕೆಲವರು ವಿಜೇತರನ್ನು ಆಯ್ಕೆ ಮಾಡಲು ಸಾಕಷ್ಟು ಮಾನದಂಡಗಳಿರುತ್ತವೆ. ಅದರ ಆಧಾರದ ಮೇಲೆ ಪ್ರಶಸ್ತಿ ಘೋಷಣೆಯಾಗಿ ಎಂದು ಹೇಳುತ್ತಿದ್ದಾರೆ. ಇನ್ನು 68 ವರ್ಷಗಳಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ತೆಲುಗು ನಟರಿಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಪ್ರಶಸ್ತಿ ಸ್ವೀಕರಿಸಿ ಇತಿಹಾಸ ನಿರ್ಮಿಸಿದ್ದಾರೆ.

ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ 'ಪುಷ್ಪ'ರಾಜ್ ಎನ್ನುವ ರಕ್ತಚಂದನ ಸ್ಮಗ್ಲರ್ ಪಾತ್ರದಲ್ಲಿ ನಟಿಸಿದ್ದರು. ಪಾತ್ರಕ್ಕಾಗಿ ಚಿತ್ತೂರು ಶೈಲಿಯ ಭಾಷೆ ಕಲಿತು, ಡಿ ಗ್ಲಾಮರಸ್ ಲುಕ್ನಲ್ಲಿ ವಿಭಿನ್ನ ಮ್ಯಾನರಿಸಂ, ಸ್ಟೈಲ್ನಿಂದ ಮೋಡಿ ಮಾಡಿದ್ದರು. ಚಿತ್ರದ ಸಾಂಗ್ಸ್, ಡೈಲಾಗ್ಸ್ ಎಲ್ಲವೂ ಹಿಟ್ ಆಗಿ ಚಿತ್ರಕ್ಕೆ ಭಾರೀ ಹೈಪ್ ತಂದಿತ್ತು. ರಗಡ್ ಲುಕ್ನಲ್ಲಿ 'ಪುಷ್ಪ'ರಾಜ್ ಆಗಿ ಬನ್ನಿ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.
ಅಂದಹಾಗೆ ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ವಿಭಾಗದಲ್ಲಿ ಭಾರೀ ಪೈಪೋಟಿ ಇತ್ತು. RRR ಚಿತ್ರದಿಂದ ರಾಮ್ಚರನ್, ಜ್ಯೂ. ಎನ್ಟಿಆರ್, ತಮಿಳಿನ 'ಜೈಭೀಮ್' ಚಿತ್ರದಿಂದ ಸೂರ್ಯ ಸೇರಿದಂತೆ ಹಲವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರು. ಪ್ರಶಸ್ತಿಗಾಗಿ ಹೆಸರುಗಳನ್ನು ಕಳುಹಿಸಿಕೊಡಲಾಗಿತ್ತು. ಆದರೆ ಅಂತಿಮವಾಗಿ ಜ್ಯೂರಿ ತಂಡ ಅಲ್ಲು ಅರ್ಜುನ್ ಅತ್ಯುತ್ತಮ ನಟ ಎಂದು ತೀರ್ಮಾನಿಸಿದ್ದಾರೆ. ಶೀಘ್ರದಲ್ಲೇ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಟೈಲಿಶ್ ಸ್ಟಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇಷ್ಟೆಲ್ಲಾ ಸಂಭ್ರಮ ಸಡಗರ ನಡುವೆ "ಸ್ಮಗ್ಲರ್ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಕೊಡ್ತಾರಾ?" ಎನ್ನುವ ಪ್ರಶ್ನೆ ಎದ್ದಿದೆ. ಇದೇ ವಿಚಾರಕ್ಕೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಲ್ಲು ಅರ್ಜುನ್ ಮಾತನಾಡಿದ್ದಾರೆ. "ರಾಷ್ಟ್ರಪ್ರಶಸ್ತಿ ಎನ್ನುವುದು ನಟನ ಪರ್ಫಾರ್ಮನ್ಸ್ ನೋಡಿ ಕೊಡುತ್ತಾರೆ. ಬ್ಯಾಟ್ಮನ್ ರೀತಿಯ ನೆಗೆಟಿವ್ ಪಾತ್ರಕ್ಕೆ ಆಸ್ಕರ್ ಕೊಟ್ಟಿದ್ದರು. 'ಜಂಜೀರ್' ಹಾಗೂ 'ಅಗ್ನಿಪಥ್' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. 'ಪುಷ್ಪ' ಚಿತ್ರದಲ್ಲಿ ನನ್ನ ನಟನೆ ಪರಿಗಣಿಸಿ ರಾಷ್ಟ್ರಪ್ರಶಸ್ತಿ ಕೊಟ್ಟಿದ್ದಾರೆ ಎನಿಸುತ್ತಿದೆ. ಅದು ಬಿಟ್ಟು ಕಥೆ ಹಿನ್ನೆಲೆ, ಪಾತ್ರದ ಸ್ವಭಾವ ಏನು ಎಂದು ಜ್ಯೂರಿಗಳು ಗಣನೆಗೆ ತೆಗೆದುಕೊಂಡಿಲ್ಲ ಅನಿಸುತ್ತದೆ" ಎಂದಿದ್ದಾರೆ.

ರಾಮ್ಚರಣ್, ಜ್ಯೂ. ಎನ್ಟಿಆರ್, ಸೂರ್ಯ ಎಲ್ಲರೂ ಅದ್ಭುತವಾಗಿ ನಟಿಸಿದ್ದರು. ಇಷ್ಟೊಂದು ಪೈಪೋಟಿ ಇರುವಾಗ ಯಾರಿಗೆ ರಾಷ್ಟ್ರಪ್ರಶಸ್ತಿ ಸಿಗಬಹುದು ಎನ್ನುವ ಕೋನದಲ್ಲಿ ಯೋಚಿಸಿದ್ರಾ? ಎನ್ನುವ ಪ್ರಶ್ನೆಗೆ ಸ್ಟೈಲಿಶ್ ಸ್ಟಾರ್ ಉತ್ತರಿಸಿದ್ದಾರೆ. "ನಾವು ಸೌತ್ನಲ್ಲಿ ಇರುವ ಕಾರಣಕ್ಕೆ ಈ 2 ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ ಸ್ಪರ್ಧೆಯಲ್ಲಿ ಬಾಲಿವುಡ್ನಿಂದ 'ಶೇರ್ಷಾ', 'ಸರ್ದಾರ್ ಉದ್ದಮ್' ರೀತಿಯ ಸಾಕಷ್ಟು ಸಿನಿಮಾಗಳು ಇದ್ದವು. ಇನ್ನು ಬೇರೆ ಬೇರೆ ಭಾಷೆಗಳಿಂದಲೂ 20ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಇದ್ದರು. ಆದರೆ ಕೊನೆಗೆ ನ್ಯಾಷನಲ್ ಹೀರೊ ಒಬ್ಬನೇ. ಆ ಹಾದಿಯಲ್ಲಿ 'ಪುಷ್ಪ' ಹೀರೋಗೆ ಪ್ರಶಸ್ತಿ ಧಕ್ಕುವ ಎಲ್ಲಾ ಅರ್ಹತೆ ಇತ್ತು. ಯಾಕಂದರೆ ರಾಷ್ಟ್ರಪ್ರಶಸ್ತಿ ಆಯ್ಕೆ ಮಾಡುವಾಗ ಆತನ ನಟನೆ ನೋಡುತ್ತಾರೆ, ಸಿನಿಮಾ ಅಲ್ಲ"
"ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ 'ಪುಷ್ಪ' ಚಿತ್ರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾಕಂದ್ರೆ ಸ್ಮಗ್ಲಿಂಗ್ ಹಿನ್ನೆಲೆ ಇರುವ ಸಿನಿಮಾ. ಅದೇ ಕಾರಣಕ್ಕೆ ನಾವು ಉತ್ತಮ ಸಿನಿಮಾ ವಿಭಾಗಕ್ಕೆ 'ಪುಷ್ಪ' ಸಿನಿಮಾ ಕಳುಹಿಸಲಿಲ್ಲ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಂಪೂರ್ಣವಾಗಿ ನಟನೆ ನೋಡಿ ಕೊಡುತ್ತಾರೆ. ಆ ಕಾರಣಕ್ಕೆ ಪುಷ್ಪರಾಜ್ ಉತ್ತಮ ಎಂದು ನಾಮಿನೇಷನ್ಗೆ ಕಳುಹಿಸಿದ್ವಿ. ನಮ್ಮ ನಂಬಿಕೆ ನಿಜವಾಯಿತು" ಎಂದು ಅಲ್ಲು ಅರ್ಜುನ್ ವಿವರಿಸಿದ್ದಾರೆ.


Click it and Unblock the Notifications











