ಅಲ್ಲು ಸಿನಿಮಾಸ್ ಉದ್ಘಾಟನೆ; ಕನ್ನಡದ ಇಬ್ಬರು ನಿರ್ದೇಶಕರಿಗೆ ಫೋಟೊ ಗ್ಯಾಲರಿಯಲ್ಲಿ ಸ್ಥಾನ
ಸಿನಿಮಾಗಳನ್ನು ನಿರ್ಮಾಣ ಮಾಡುವುದು ಮಾತ್ರವಲ್ಲ, ಜನರಿಗೆ ತಲುಪಿಸುವುದು ಬಹಳ ಮುಖ್ಯವಾಗುತ್ತದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಮಲ್ಟಿಪ್ಲೆಕ್ಸ್ಗಳ ಕಾರುಬಾರು ಜೋರಾಗಿದೆ. ಸಿನಿಮಾ ನಟರು ಕೂಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ತೆರೆಯಲು ಮುಂದಾಗಿದ್ದಾರೆ. ಈಗಾಗಲೇ ತೆಲುಗು ನಟ ಮಹೇಶ್ ಬಾಬು ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ AMB ಸಿನೆಮಾಸ್ ಆರಂಭಿಸಿದ್ದಾರೆ. ಇದೀಗ ಅಲ್ಲು ಸಿನಿಮಾಸ್ ಸರದಿ.
ತೆಲುಗು ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಚಿತ್ರದ ನಿರ್ಮಾಣ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ಹೈದರಾಬಾದ್ನಲ್ಲಿ ಅಲ್ಲು ಸಿನೆಮಾಸ್ ಚಿತ್ರಮಂದಿರ ಪ್ರಾರಂಭಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿನ್ನೆ(ಮಾರ್ಚ್ 12) ಚಿತ್ರಮಂದಿರ ಉದ್ಘಾಟನೆ ಮಾಡಿ ಶುಭ ಕೋರಿದ್ದಾರೆ. ಚಿತ್ರರಂಗದಿಂದ ಸಾಕಷ್ಟು ಪಡೆದಿದ್ದೇವೆ, ಆ ಚಿತ್ರರಂಗಕ್ಕೆ ಮರಳಿ ಏನಾದರೂ ಕೊಡಬೇಕು ಎನ್ನುವ ಕಾರಣಕ್ಕೆ ಚಿತ್ರಮಂದಿರ ತೆರೆದಿರುವುದಾಗಿ ಅಲ್ಲು ಅರ್ಜುನ್ ಹೇಳಿದ್ದಾರೆ.

ಅಲ್ಲು ಸಿನಿಮಾಸ್ ಒಳ ಭಾಗದಲ್ಲಿ ಸಾಕಷ್ಟು ಫೋಟೊ ಗ್ಯಾಲರಿಗಳಿವೆ. ಅಲ್ಲು ಫ್ಯಾಮಿಲಿ ಹಾಗೂ ಮೆಗಾ ಫ್ಯಾಮಿಲಿ ಸ್ಟಾರ್ಗಳ ಫೋಟೊಗಳಿವೆ. ಜೊತೆ ಭಾರತೀಯ ಚಿತ್ರರಂಗದ ಖ್ಯಾತ ಫಿಲ್ಮ್ ಮೇಕರ್ಸ್ ಫೋಟೊಗಳನ್ನು ಹಾಕಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಗಾಂಧಿನಗರದಲ್ಲಿ AMB ಸಿನಿಮಾಸ್ ಚಿತ್ರಮಂದಿರ ಶುರುವಾಗಿತ್ತು. ಮಲ್ಟಿಪ್ಲೆಕ್ಸ್ ಒಳಭಾಗದಲ್ಲಿ ಅಲ್ಲಲ್ಲಿ ಸಾಕಷ್ಟು ಫೋಟೊ ಗ್ಯಾಲರಿಗಳಿವೆ. ಕನ್ನಡ ಸಿನಿಮಾ ನಟ, ನಟಿಯರ ಫೋಟೊ ಗ್ಯಾಲರಿ ಜೊತೆ ಮಹೇಶ್ ಬಾಬು ಫ್ಯಾಮಿಲಿ ಸದಸ್ಯರ ಫೋಟೊ ಗ್ಯಾಲರಿ ಕೂಡ ಅಲ್ಲಿದೆ. ಫಿಲ್ಮ್ ಮೇಕರ್ಸ್ ಫೋಟೊ ವಾಲ್ ಗ್ಯಾಲರಿಯಲ್ಲಿ ರಾಜಮೌಳಿ, ಸುಕುಮಾರ್ ಜೊತೆಗೆ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಸೇರಿ ಸ್ಟಾರ್ ನಿರ್ದೇಶಕರ ಫೋಟೊಗಳಿವೆ. ಅದು ಮಾಲ್ ಮಲ್ಟಿಪ್ಲೆಕ್ಸ್ ಒಳಗೆ ಹೋದವರ ಗಮನ ಸೆಳೆಯುತ್ತಿದೆ.
ಪಶ್ಚಿಮ ಹೈದರಾಬಾದ್ನ ಕೊಕಾಪೇಟ್ನಲ್ಲಿರುವ ಅಲ್ಲು ಸ್ಟುಡಿಯೋಸ್ ಕಾಂಪ್ಲೆಕ್ಸ್ನಲ್ಲೇ ಅಲ್ಲು ಸಿನಿಮಾಸ್ ಮಲ್ಟಿಪ್ಲೆಕ್ಸ್ ಎದ್ದು ನಿಂತಿದೆ. ಏಷ್ಯಾದಲ್ಲಿ ಅತಿದೊಡ್ಡ ಡಾಲ್ಬಿ ಸ್ಕ್ರೀನ್ ಕೂಡ ಇದರಲ್ಲಿದೆ. ಅಲ್ಲು ಸಿನಿಮಾಸ್ನಲ್ಲಿ ಒಟ್ಟು 4 ಸ್ಕ್ರೀನ್ಗಳಿವೆ ಅಲ್ಲು ಸಿನಿಮಾಸ್ ಒಟ್ಟು ನಾಲ್ಕು ಪರದೆಗಳನ್ನು ಹೊಂದಿದೆ. ಅವುಗಳಲ್ಲಿ ಮೂರು 4K ಲೇಸರ್ ಪ್ರೊಜೆಕ್ಷನ್ ಮತ್ತು ಡಾಲ್ಬಿ ಅಟ್ಮಾಸ್ ಸೌಂಡ್ನೊಂದಿಗೆ ನಿಯಮಿತ ಪ್ರೀಮಿಯಂ ಸ್ಕ್ರೀನ್ಗಳಾಗಿವೆ. ರೆಕ್ಲೈನರ್ಗಳು ಮತ್ತು ಲೌಂಜರ್ ಆಸನಗಳಿವೆ. ಇನ್ನು ಡಾಲ್ಬಿ ವಿಷನ್ ತಂತ್ರಜ್ಞಾನದೊಂದಿಗೆ ಡ್ಯುಯಲ್ 4K ಲೇಸರ್ ಪ್ರೊಜೆಕ್ಷನ್ ಮತ್ತು ಡಾಲ್ಬಿ 3D ಸ್ಕ್ರೀನ್ ಇಲ್ಲಿ ಹೈಲೈಟ್ ಆಗಿದೆ.

'ಪುಷ್ಪ' ಸಿನಿಮಾ ಬಿಡುಗಡೆ ಸಮಯದಲ್ಲಿ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ ನಡೆದಿತ್ತು. ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದನು. ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಒಂದು ದಿನ ಜೈಲಿಗೂ ಹೋಗುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಅಭಿಮಾನಿಗಳ ಜೊತೆ ಅಲ್ಲು ಅರ್ಜುನ್ ಸಿನಿಮಾ ನೋಡಲು ಹೋಗಿದ್ದೆ ಇದಕ್ಕೆಲ್ಲಾ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದರು.
ಬೇಕೆಂದೆ ಅಲ್ಲು ಅರ್ಜುನ್ ಅವರನ್ನು ರೇವಂತ್ ರೆಡ್ಡಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಚರ್ಚೆ ನಡೆದಿತ್ತು. ಆದರೆ ಈಗ ಅಲ್ಲು ಸಿನಿಮಾಸ್ ಉದ್ಘಾಟನೆಗೆ ಸಿಎಂ ರೇವಂತ್ ರೆಡ್ಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ರೇವಂತ್ ಅಣ್ಣ ಎಂದು ಅಲ್ಲು ಅರ್ಜುನ್ ಕರೆದಿರುವುದು ವೈರಲ್ ಆಗುತ್ತಿದೆ. ಮುಂದಿನ ವಾರ 'ಧುರಂಧರ್'-2 ಹಾಗೂ 'ಉಸ್ತಾದ್ ಭಗತ್ ಸಿಂಗ್' ಸಿನಿಮಾಗಳು ಬಿಡುಗಡೆ ಆಗ್ತಿದೆ. ಈ ಸಿನಿಮಾಗಳ ಮೂಲಕ ಅಲ್ಲು ಸಿನಿಮಾಸ್ ಶುಭಾರಂಭ ಮಾಡಲಿದೆ.


Click it and Unblock the Notifications











