ಬೆಂಗಳೂರಿಗೆ ಬಂದರು ಪುನೀತ್ ಮನೆಗೆ ಹೋಗಲ್ಲ ಎಂದ ಅಲ್ಲು ಅರ್ಜುನ್: ಕಾರಣ?
ಅಲ್ಲು ಅರ್ಜುನ್ ಹಾಗೂ ಪುನೀತ್ ರಾಜ್ಕುಮಾರ್ ಆಪ್ತ ಗೆಳೆಯರು. ಆದರೆ ಪುನೀತ್ ನಿಧನರಾದ ಬಳಿಕ ಅಲ್ಲು ಅರ್ಜುನ್ ಅಂತಿಮ ದರ್ಶನಕ್ಕಾಗಲಿ, ಅಪ್ಪು ನಿವಾಸಕ್ಕಾಗಿ ಆಗಮಿಸಿರಲಿಲ್ಲ. ಮೆಗಾಸ್ಟಾರ್ ಚಿರಂಜೀವಿ ಅಂತಿಮ ದರ್ಶನಕ್ಕೆ ಬಂದಿದ್ದರು, ರಾಮ್ ಚರಣ್ ತೇಜ ಅಪ್ಪು ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದರು. ಆದರೆ ಅಲ್ಲು ಅರ್ಜುನ್ ಮಾತ್ರ ಪುನೀತ್ ನಿವಾಸಕ್ಕೆ ಬಂದಿರಲಿಲ್ಲ.
ಇಂದು ಬೆಂಗಳೂರಿಗೆ ಬಂದಿದ್ದ ಅಲ್ಲು ಅರ್ಜುನ್ ಈ ವಿಷಯವಾಗಿ ಮಾತನಾಡಿದರು. ತಾವು ಬೆಂಗಳೂರಿಗೆ ಬಂದಿದ್ದರೂ ಸಹ ಇಂದು ಅಪ್ಪು ನಿವಾಸಕ್ಕೆ ಭೇಟಿ ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ಕಾರಣವನ್ನೂ ನೀಡಿದರು. ಅಲ್ಲು ಅರ್ಜುನ್ ನೀಡಿದ ಕಾರಣಕ್ಕೆ ಮೆಚ್ಚುಗೆಗೆ ಕಾರಣವಾಯಿತು.
'ಪುಷ್ಪ' ಸಿನಿಮಾದ ಕಾರ್ಯಕ್ರಮಗಳ ಒತ್ತಡದ ನಡುವೆ ನಾನು ಪುನೀತ್ ರಾಜ್ಕುಮಾರ್ ಅಂತಿಮ ದರ್ಶನಕ್ಕಾಗಲಿ, ಅವರ ನಿವಾಸಕ್ಕಾಗಲಿ ಬರಲಾಗಲಿಲ್ಲ. ಅವರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು ಅಲ್ಲು ಅರ್ಜುನ್.

ಈಗ ಬೆಂಗಳೂರಿಗೆ ಬಂದಿದ್ದೇನೆ ಆದರೆ ಇಂದು ನಾನು ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡುವುದಿಲ್ಲ. ಅದಕ್ಕೆ ಕಾರಣವಿದೆ. ನಾನು ಇಲ್ಲಿಗೆ ಬಂದಿರುವುದು 'ಪುಷ್ಪ' ಸಿನಿಮಾದ ಪ್ರಚಾರಕ್ಕೆ. ಸಿನಿಮಾದ ಪ್ರಚಾರಕ್ಕೆ ಬಂದು ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿದ. ಇದೊಂದು ಪ್ರಚಾರದ ಗಿಮಿಕ್ಕು ಎಂದು ಎನಿಸಿಕೊಳ್ಳುವುದು ನನಗೆ ಬೇಕಿಲ್ಲ. 'ಪುಷ್ಪ' ಸಿನಿಮಾ ಬಿಡುಗಡೆ ಆಗಲಿ, ಎಲ್ಲ ಮುಗಿಯಲಿ ಆ ನಂತರ ಪುನೀತ್ ಅವರ ಕುಟುಂಬದವರನ್ನು ಭೇಟಿ ಮಾಡೋಣವೆಂದೇ ಬೆಂಗಳೂರಿಗೆ ಬರುತ್ತೇನೆ'' ಎಂದರು ಅಲ್ಲು ಅರ್ಜುನ್.
ಅಲ್ಲು ಅರ್ಜುನ್ ಅವರ ಉತ್ತರ ಕೇಳಿ ಅಭಿಮಾನಿಯೊಬ್ಬ 'ಸೂಪರ್ ಸಾರ್' ಎಂದ, ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ಅರ್ಜುನ್, ''ಸೂಪರ್ ಅಲ್ಲ ಗುರು, ಇದು ನನ್ನ ಕರ್ತವ್ಯ. ಪುನೀತ್ ಬಗೆಗೆ ನನಗೆ ಇರುವ ಗೌರವ. ಹಾಗಾಗಿ ನಾನು ಆ ಕಾರ್ಯ ಮಾಡಲೇ ಬೇಕು'' ಎಂದರು. ಅಲ್ಲು ಅರ್ಜುನ್ ಉತ್ತರಕ್ಕೆ ಮೆಚ್ಚಿ ಜೋರಾದ ಕರತಾಡನ ಮಾಡಲಾಯಿತು.

ಪುನೀತ್ ನಿಧನರಾದ ಎರಡು ದಿನಗಳ ಬಳಿಕ ಹೈದರಾಬಾದ್ನಲ್ಲಿ ವಿಜಯ್ ದೇವರಕೊಂಡ ಅವರ ಸಹೋದರನ 'ಪುಷ್ಪಕ ವಿಮಾನ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲ್ಲು ಅರ್ಜುನ್, ''ಪುನೀತ್ ರಾಜ್ಕುಮಾರ್ ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಿತರು. ನಮ್ಮ ಮನೆಗೆ ಹಲವು ಬಾರಿ ಬಂದಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಾನು ಸಹ ಬೆಂಗಳೂರಿಗೆ ಹೋದಾಗೆಲ್ಲ ಅವರನ್ನು ಭೇಟಿ ಮಾಡುತ್ತಿದ್ದೆ. ಇಬ್ಬರ ನಡುವೆ ಒಂದು ಪರಸ್ಪರ ಗೌರವ-ಆದರ ಇತ್ತು. ಇಬ್ಬರೂ ಹಲವು ಕಾರ್ಯಕ್ರಮಗಳಲ್ಲಿ ಪರಸ್ಪರ ಭೇಟಿಯಾಗಿದ್ದೆವು. ಡ್ಯಾನ್ಸ್ ಕಾರ್ಯಕ್ರಮವೊಂದಕ್ಕೆ ಒಟ್ಟಿಗೆ ಜಡ್ಜ್ ಆಗಿ ಭಾಗವಹಿಸಿದ್ದೆವು. ಯಾವಾಗ ಸಿಕ್ಕರೂ ಪ್ರೀತಿಯಿಂದ ಮಾತನಾಡುತ್ತಿದ್ದರು. ಮನೆಗೆ ಆಹ್ವಾನಿಸುತ್ತಿದ್ದರು. ಹೀಗೆ ಪ್ರೀತಿಯಿಂದ ಇರಬೇಕಾದರೆ ಹಠಾತ್ತನೆ ಇಂದು ಅವರಿಲ್ಲ. ಸುದ್ದಿ ಮೊದಲ ಬಾರಿಗೆ ಕೇಳಿದಾಗ ನನಗೆ ಆಘಾತ ಎನಿಸಿತು. ಸುದ್ದಿ ಕೇಳಿದಾಗ ಉಂಟಾಗಿದ್ದ ಆಘಾತ ಸಮಯ ಕಳೆಯುತ್ತಾ ಕಳೆಯುತ್ತಾ ಹೆಚ್ಚಾಗುತ್ತಾ ಸಾಗಿತು. ಜೀವನ ಎಷ್ಟು ಅನಿರೀಕ್ಷಿತ ಎನ್ನಿಸಲು ಆರಂಭವಾಯ್ತು. ಒಂದು ಚಿಟಿಕೆ ಹೊಡೆಯುವಷ್ಟರಲ್ಲಿ ಜೀವನಗಳು ಪಲ್ಲಟವಾಗಿ ಹೋಗುತ್ತವೆ'' ಎಂದಿದ್ದರು.

''ನನಗೆ ನಟ ರಾಣಾ ಹಲವು ಬಾರಿ ಕರೆ ಮಾಡಿದ್ದ. ಆತ ನನಗೆ ಆತ್ಮೀಯ ಗೆಳೆಯ. ಕರೆ ಮಾಡಿದವನೇ ಪುನೀತ್ ಸಾವಿನ ಬಗ್ಗೆ ಮಾತನಾಡುತ್ತಾ, ''ಜೀವನ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ ಎಂದ ಅವನು ಬಹಳ ಡಿಸ್ಟರ್ಬ್ ಆಗಿದ್ದ. ಪುನೀತ್ ರಾಜ್ಕುಮಾರ್ ದೊಡ್ಡ ಸೂಪರ್ ಸ್ಟಾರ್. ಅದ್ಭುತವಾದ ವ್ಯಕ್ತಿತ್ವ ಉಳ್ಳವರಾಗಿದ್ದರು. ಕನ್ನಡ ಉದ್ಯಮ ಮತ್ತು ಭಾರತೀಯ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ದಕ್ಷಿಣ ಭಾರತ ಚಿತ್ರರಂಗದ ಹೆಮ್ಮೆ ಅವರು'' ಎಂದಿದ್ದರು ಅಲ್ಲು ಅರ್ಜುನ್.


Click it and Unblock the Notifications











