"ಕುರಿ ತಲೆ ಕಡಿದಂತೆ ಕತ್ತರಿಸ್ತೀನಿ"; ತೆಲಂಗಾಣ ಸಿಎಂ ಎದುರು ಅಲ್ಲು ಅರ್ಜುನ್ ಖಡಕ್ ಡೈಲಾಗ್
'ಪುಷ್ಪ'-2 ಬಿಡುಗಡೆ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ ನಡೆದಿತ್ತು. ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಸಂಬಂಧ ನಟ ಅಲ್ಲು ಅರ್ಜುನ್ ಬಂಧನವಾಗಿ ಜೈಲು ಸೇರುವಂತಾಗಿತ್ತು. ದುರಂತಕ್ಕೆ ಒಂದರ್ಥದಲ್ಲಿ ನಟ ಅಲ್ಲು ಅರ್ಜುನ್ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಲ್ತುಳಿತಕ್ಕೂ ಅಲ್ಲು ಅರ್ಜುನ್ಗೂ ಸಂಬಂಧವೇ ಇಲ್ಲ. ಅವರನ್ನು ಯಾಕೆ ಬಂಧಿಸಿದರು ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಅದಕ್ಕೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಹೆಸರು ಮರೆತು ಅಲ್ಲು ಅರ್ಜುನ್ ಮಾತನಾಡಿದ್ದರು. ಅದಕ್ಕೆ ಬೇಕೆಂದೇ ಅವರು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಘಟನೆ ಬಳಿಕ ಮೃತ ಮಹಿಳೆ ಕುಟುಂಬಕ್ಕೆ ಬನ್ನಿ 1 ಕೋಟಿ ರೂ. ಪರಿಹಾರ ನೀಡಿದ್ದರು. ನಿರ್ಮಾಪಕರು 50 ಲಕ್ಷ ರೂ. ಹಾಗೂ ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಸೇರಿ ಒಟ್ಟು 2 ಕೋಟಿ ರೂ. ಆಕೆಯ ಕುಟುಂಬಕ್ಕೆ ಲಭಿಸಿತ್ತು.

'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ಅಲ್ಲು ಅರ್ಜುನ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದರು. 'ಪುಷ್ಪ' ಚಿತ್ರದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಲ್ಲು ಅರ್ಜುನ್ ಸೀಕ್ವೆಲ್ನಲ್ಲಿ ಮತ್ತೊಮ್ಮೆ ನಟನೆಯಿಂದ ಮೋಡಿ ಮಾಡಿದ್ದರು. ಇದೀಗ ಗದ್ದರ್ ಅವಾರ್ಡ್ ಕೂಡ ಅವರಿಗೆ ಲಭಿಸಿದೆ.
ತೆಲಂಗಾಣ ಸರ್ಕಾರ 'ಗದ್ದರ್ ತೆಲಂಗಾಣ ಫಿಲ್ಮ್ ಅವಾರ್ಡ್ಸ್' ಹೆಸರಿನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡುತ್ತಿದೆ. 'ಪುಷ್ಪ- 2' ನಟನೆಗಾಗಿ ಈ ಬಾರಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೈದರಾಬಾದ್ನಲ್ಲಿ ಇಂದು(ಜೂನ್ 14) ಪ್ರಶಸ್ತಿ ಪ್ರದಾನ ಸಮಾರಂಭ ನಡೀತು. ಅಲ್ಲು ಅರ್ಜುನ್ಗೆ ಸ್ವತಃ ಸಿಎಂ ರೇವಂತ್ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಬನ್ನಿ ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದರು. 'ಪುಷ್ಪ'-2 ಚಿತ್ರದ ಡೈಲಾಗ್ ಹೊಡೆದರು.
ಮಾತನಾಡುತ್ತಾ ಒಂದು ಡೈಲಾಗ್ ಹೇಳಬಹುದಾ ಎಂದು ಸಿಎಂ ಅನುಮತಿ ಕೇಳಿ "ಆ ಮಗುವಿನ ಮೇಲೆ ಸಣ್ಣ ಗೀಟು ಬಿದ್ದರೂ ಗಂಗಮ್ಮ ಜಾತ್ರೆಯಲ್ಲಿ ಕುರಿಗಳ ತಲೆ ಕಡೆಯುವಂತೆ ರಪ್ಪ ರಪ್ಪ ಅಂತ ಒಬ್ಬೊಬ್ಬರನ್ನು ಕತ್ತರಿಸುತ್ತೀನಿ.. ಅಸಲು ತಗ್ಗೋದೆ ಇಲ್ಲ" ಎನ್ನುವ ಖಡಕ್ ಡೈಲಾಗ್ ಹೊಡೆದರು. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
ಅಭಿಮಾನಿಗಳು ಪುಷ್ಪರಾಜ್ ಡೈಲಾಗ್ ಕೇಳಿ ಎಂಜಾಯ್ ಮಾಡಿದ್ದಾರೆ. ಆಡಿಟೋರಿಯಂನಲ್ಲಿ ಸಂಭ್ರಮದಿಂದ ಚಪ್ಪಾಳೆ, ಶಿಳ್ಳೆ ಸುರಿಮಳೆಯಾಗಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದಿತ್ತು. ಮೂರನೇ ಭಾಗ ಮಾಡುವುದಾಗಿಯೂ ಸುಳಿವು ನೀಡಲಾಗಿದೆ. ಸದ್ಯ ಅಲ್ಲು ಅರ್ಜುನ್ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಅಟ್ಲಿ ನಿರ್ದೇಶನದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ.
ಇನ್ನು ಈ ಬಾರಿ ಹಲವು ವಿಭಾಗಗಳಲ್ಲಿ 'ಗದ್ದರ್ ತೆಲಂಗಾಣ ಫಿಲ್ಮ್ ಅವಾರ್ಡ್ಸ್' ನೀಡಿ ಗೌರವಿಸಿದೆ. 'ಕಲ್ಕಿ 2898AD' ಚಿತ್ರದ ನಿರ್ದೇಶನಕ್ಕಾಗಿ ನಾಗ್ ಅಶ್ವಿನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. 35 ಚಿನ್ನ ಕಥ ಕಾದು ಚಿತ್ರದ ನಟನೆಗೆ ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 'ಕಲ್ಕಿ 2898AD' ಮೊದಲನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಡೆದಿದೆ. ರಜಾಕರ್ ಚಿತ್ರದ ಸಂಗೀತಕ್ಕೆ ಭೀಮ್ಸ್ ಸಿಕ್ಕಿರೋಲೆಯೋ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಲಭಿಸಿದೆ. ಹೀಗೆ ಹಲವರಿಗೆ ಪ್ರಶಸ್ತಿ ಗೌರವ ಸಿಕ್ಕಿದೆ.


Click it and Unblock the Notifications











